Saturday, June 28, 2025
spot_imgspot_img
spot_imgspot_img

ಕೊಳ್ನಾಡು: ಗ್ರಾಮ ಪಂಚಾಯತ್‌ನ ಮೂರು ಕಾಂಗ್ರೆಸ್ ಸದಸ್ಯರು ಪಕ್ಷದಿಂದ ಉಚ್ಚಾಟನೆ

- Advertisement -
- Advertisement -

6 ವರ್ಷಗಳವರೆಗೆ ಪಕ್ಷದ ಹೆಸರು ಮತ್ತು ಚಿಹ್ನೆ ಬಳಸಿ ಸಭೆ ಸಮಾರಂಭಗಳಲ್ಲಿ ಭಾಗವಹಿಸುವಂತಿಲ್ಲ:- ಜಿಲ್ಲಾಧ್ಯಕ್ಷ ಕೆ. ಹರೀಶ್‌ ಕುಮಾರ್‌‌‌ ಆದೇಶ

ಕೊಳ್ನಾಡು ಗ್ರಾಮ ಪಂಚಾಯತ್ ಸದಸ್ಯರಾದ ಮಹಮ್ಮದ್ ಮಂಚಿ, ರಾಜೇಶ್‌ ಬಾರೆಬೆಟ್ಟು, ಎ.ಬಿ. ಅಬ್ದುಲ್ಲಾ ಸತತವಾಗಿ ಪಕ್ಷ ವಿರೋಧಿ ಚಟುವಟಿಕೆಯನ್ನು ಮಾಡುತ್ತಿರುವ ಬಗ್ಗೆ ಕೊಳ್ನಾಡು ವಲಯದ ಕಾಂಗ್ರೆಸ್ ಕಾರ್ಯಕರ್ತರು ಜಿಲ್ಲಾಧ್ಯಕ್ಷ ಕೆ. ಹರೀಶ್‌ ಕುಮಾರ್‌‌‌ಗೆ ದೂರು ನೀಡಿದ್ದಾರೆ.

ಕೊಳ್ನಾಡು ಗ್ರಾಮ ಪಂಚಾಯತ್ ಸದಸ್ಯರಾದ ಮಹಮ್ಮದ್ ಮಂಚಿ, ರಾಜೇಶ್‌ ಬಾರೆಬೆಟ್ಟು, ಎ.ಬಿ. ಅಬ್ದುಲ್ಲಾ ಎಂಬವರು ಸತತವಾಗಿ ಪಕ್ಷ ವಿರೋಧಿ ಚಟುವಟಿಕೆಗಳನ್ನು ಮಾಡುತ್ತಿರುವ ಬಗ್ಗೆ ವಲಯದ ಕಾಂಗ್ರೆಸ್ ಕಾರ್ಯಕರ್ತರು ಜಿಲ್ಲಾಧ್ಯಕ್ಷ ಕೆ. ಹರೀಶ್‌ ಕುಮಾರ್‌‌‌ಗೆ ದೂರನ್ನು ನೀಡಿದ್ದು, ಈ ಬಗ್ಗೆ ಕ್ರಮಕೈಗೊಳ್ಳಲು ಮಹಾಬಲ ಮಾರ್ಲ, ಅಬ್ದುಲ್ ಸಲೀಂ ಮತ್ತು ಎ.ಸಿ. ವಿನಯರಾಜ್ ಈ ಮೂವರು ಸದಸ್ಯರನ್ನೊಳಗೊಂಡ ಸಮಿತಿಯಲ್ಲಿ ಈ ಬಗ್ಗೆ ವಿಚಾರಣೆ ನಡೆಸಿ, ಸತ್ಯ-ಅಸತ್ಯತೆಗಳನ್ನು ಪರಿಶೀಲಿಸಿ ವರದಿ ನೀಡುವಂತೆ ತಿಳಿಸಿರುತ್ತಾರೆ. ಅದರಂತೆ ಈ ಮೂರು ಸದಸ್ಯರು ಈ ಬಗ್ಗೆ-ತನಿಖೆ ನಡೆಸಲು ವಲಯ, ಬ್ಲಾಕ್ ಮತ್ತು ಜಿಲ್ಲಾಮಟ್ಟದ ಸದಸ್ಯರನ್ನೊಳಗೊಂಡು ದಿನಾಂಕ 11.02.2025 ರಂದು ಕೊಳ್ನಾಡು ಮತ್ತು ವಿಟ್ಲ ಪಡ್ನೂರು ವಲಯ ಕಾಂಗ್ರೆಸ್ ಕಛೇರಿಯಲ್ಲಿ ಸಭೆ ನಡೆಸಿರುತ್ತಾರೆ.

ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ವ್ಯಾಪ್ತಿಯ ಕೊಳ್ನಾಡು ವಲಯ ಮತ್ತು ವಿಟ್ಲ ಪಡ್ನೂರು ವಲಯ ಸಭೆ ದಿನಾಂಕ 11.02.2025 ರ ಮಂಗಳವಾರ ಪಾಣೆಮಂಗಳೂರು ಬ್ಲಾಕ್ ಅಧ್ಯಕ್ಷ ಚಂದ್ರಶೇಖರ್ ಭಂಡಾರಿ ಇವರ ಉಪಸ್ಥಿತಿಯಲ್ಲಿ ನಡೆದಿದ್ದು, ಸಭೆಯಲ್ಲಿ ಸುಮಾರು 25 ಮಂದಿ ಸದಸ್ಯರು ಪಾಲ್ಗೊಂಡಿರುತ್ತಾರೆ. ಇವರುಗಳಲ್ಲಿ ಹಲವು ಮಂದಿ ತಮ್ಮ ಹೇಳಿಕೆಯನ್ನು ಕೂಡ ನೀಡಿರುತ್ತಾರೆ. ಹೇಳಿಕೆಯಲ್ಲಿ “ಈ ಮೂವರು ಪಂಚಾಯತ್ ಸದಸ್ಯರು ಪಂಚಾಯತ್ ಹಾಗೂ ಸೊಸೈಟಿ ಚುನಾವಣೆಗಳಲ್ಲಿ ಕಾಂಗ್ರೇಸ್ ಬೆಂಬಲಿತ ಅಭ್ಯರ್ಥಿಗಳ ಸೋಲಿಗೆ ಪಕ್ಷ ವಿರೋಧಿ ಚಟುವಟಿಕೆ ಮಾಡುವುದರ ಮೂಲಕ ಕಾರಣೀಭೂತರಾಗಿದ್ದು ಮಾತ್ರವಲ್ಲದೆ ಪಕ್ಷದ ಹಿತಕ್ಕೆ ವಿರೋಧವಾಗಿ ಕೆಲಸ ಹಾಗೂ ಪಕ್ಷಕ್ಕೆ ಮುಜುಗರ ತರುವ ರೀತಿಯಲ್ಲಿ ವರ್ತಿಸಿರುವುದು ಸದಸ್ಯರು ನೀಡಿರುವ ಹೇಳಿಕೆಯಿಂದ ತಿಳಿದುಬಂದಿರುತ್ತದೆ. ಅದರಂತೆ ಮಹಾಬಲ ಮಾರ್ಲ, ಅಬ್ದುಲ್ ಸಲೀಂ ಮತ್ತು ಎ.ಸಿ. ವಿನಯರಾಜ್ ರವರನ್ನೊಳಗೊಂಡ ಸಮಿತಿಯಿಂದ ಪರಿಶೀಲನಾ ಸಲ್ಲಿಸಿರುತ್ತಾರೆ ಮತ್ತು ಆ ವರದಿಯಲ್ಲಿ ಈ ಕೆಳಗೆ ತಿಳಿಸಿದಂತೆ ನಿರ್ಣಯವನ್ನು ತೆಗೆದುಕೊಂಡಿರುತ್ತಾರೆ.

ಪಕ್ಷದ ಬೂತ್/ವಲಯ ಮಟ್ಟದ ಪದಾಧಿಕಾರಿಗಳು ಹಾಗೂ ತಾಲೂಕು ಪಂಚಾಯತ್ ಮಾಜಿ ಸದಸ್ಯರುಗಳು, ಗ್ರಾಮ ಪಂಚಾಯತ್‌ನ ಸದಸ್ಯರುಗಳು ಹಾಗೂ ಬ್ಲಾಕ್ ಮಟ್ಟದ ಪದಾಧಿಕಾರಿಗಳಾಗಿದ್ದು, ಇವರುಗಳ ಹೇಳಿಕೆಗಳನ್ನು ಕೇಳಿದಾಗ ಆಪಾದನೆ ಹೊಂದಿದ ವ್ಯಕ್ತಿಗಳು ನಿರಂತರವಾಗಿ ಪಕ್ಷದ ಹೆಸರನ್ನು ಹೇಳಿಕೊಂಡು ಗ್ರಾಮ ಪಂಚಾಯತ್ ಮತ್ತು ಸಹಕಾರಿ ಸಂಘಗಳ ಚುನಾವಣೆಗಳಲ್ಲಿ ಪಕ್ಷ ವಿರೋಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಕಾಂಗ್ರೇಸ್ ಪಕ್ಷ ಬೆಂಬಲಿತ ಅಭ್ಯರ್ಥಿಗಳನ್ನು ಸೋಲಿಸಿದ್ದಾರೆ ಹಾಗೂ ಕೆಲವೊಂದು ಕಡೆ ಕಾಂಗ್ರೇಸ್ ಬೆಂಬಲಿತ ಅಭ್ಯರ್ಥಿಗಳು ಅಲ್ಪ ಮತದಲ್ಲಿ ಗೆಲ್ಲುವ ಮಟ್ಟಕ್ಕೆ ಸಂದರ್ಭವನ್ನು ಸೃಷ್ಟಿ ಮಾಡಿದ್ದಾರೆ” ಎಂದು ಅಭಿಪ್ರಾಯ ಮೂಡಿ ಬಂದಿದೆ. ಆದುದರಿಂದ ಆಪಾದನೆ ಹೊಂದಿರುವ ಮಹಮ್ಮದ್ ಮಂಚಿ, ರಾಜೇಶ್ ಬಾರೆಬೆಟ್ಟು ಹಾಗೂ ಎ.ಬಿ. ಅಬ್ದುಲ್ಲಾರವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದಾರೆ.

ಆದುದರಿಂದ ಜಿಲ್ಲಾಧ್ಯಕ್ಷ ಕೆ. ಹರೀಶ್‌ ಕುಮಾರ್‌‌‌ರವರಿಗೆ ನೀಡಿರುವ ಈ ಪರಶೀಲನಾ ವರದಿ, ಸನ್ನಿವೇಶ, ದೂರು ಹಾಗೂ ಹೇಳಿಕೆಗಳ ಆಧಾರದ ಮೇಲೆ ಕೊಳ್ನಾಡು ಗ್ರಾಮ ಪಂಚಾಯತ್ ಸದಸ್ಯರಾದ ಮಹಮ್ಮದ್ ಮಂಚಿ, ರಾಜೇಶ್‌ ಬಾರೆಬೆಟ್ಟು, ಎ.ಬಿ. ಅಬ್ದುಲ್ಲಾ ಎಂಬವರನ್ನು ಕಾಂಗ್ರೇಸ್ ಪಕ್ಷದಿಂದ ಆರು ವರ್ಷಗಳವರೆಗೆ ಉಚ್ಚಾಟನೆ ಮಾಡಲಾಗಿದೆ. ಈ ವೇಳೆ ಆರು ವರ್ಷಗಳವರೆಗೆ ಕಾಂಗ್ರೆಸ್ ಪಕ್ಷದ ಹೆಸರು ಮತ್ತು ಚಿಹ್ನೆಯನ್ನು ಬಳಸಿ ಯಾವುದೇ ಸಭೆ ಸಮಾರಂಭಗಳಿಗೆ ಭಾಗವಹಿಸುವಂತಿಲ್ಲ ಎಂದು ಆದೇಶ ನೀಡಲಾಗಿದೆ.

- Advertisement -

Related news

error: Content is protected !!