

ಸುಳ್ಯ: ಕೆಎಸ್ಆರ್ಟಿಸಿ ಬಸ್ ಮತ್ತು ದ್ವಿಚಕ್ರ ವಾಹನ ನಡುವಿನ ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರ, ಗ್ರಾಮ ಪಂಚಾಯತ್ ಸದಸ್ಯ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಸೋಮವಾರ ಸೋಣಂಗೇರಿ ಸಮೀಪದ ಸುತ್ತುಕೋಟೆಯಲ್ಲಿ ನಡೆದಿದೆ.
ಮೃತರನ್ನು ನೆಲ್ಲೂರು ಕೆಮ್ರಾಜೆ ಗ್ರಾ.ಪಂ. ಸದಸ್ಯ ರಾಮಚಂದ್ರ ಪ್ರಭು (68) ಎಂದು ಗುರುತಿಸಲಾಗಿದೆ.
ರಾಮಚಂದ್ರ ಪ್ರಭು ಅವರು ಸ್ಕೂಟಿಯಲ್ಲಿ ಸುಳ್ಯಕ್ಕೆ ಬರುತ್ತಿದ್ದ ವೇಳೆ ಎದುರಿನಿಂದ ಬರುತ್ತಿದ್ದ ಸುಬ್ರಹ್ಮಣ್ಯಕ್ಕೆ ತೆರಳುತ್ತಿದ್ದ ಕೆಎಸ್ಆರ್ಟಿಸಿ ಬಸ್ ನಡುವೆ ಅಪಘಾತವಾಗಿದೆ. ಅಪಘಾತದಲ್ಲಿ ಗಂಭೀರ ಗಾಯಗೊಂಡ ರಾಮಚಂದ್ರ ಪ್ರಭುರವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ರಾಮಚಂದ್ರ ಪ್ರಭು ರವರು ಪುತ್ರನ ವಿವಾಹ ಸಮಾರಂಭದ ಆಮಂತ್ರಣ ಪತ್ರ ವಿತರಣೆ ಕಾರ್ಯ ನಡೆಸಲು ಪತ್ನಿ ಯೊಂದಿಗೆ ಸುಳ್ಯದ ಕಡೆಗೆ ಬರುತ್ತಿದ್ದರು. ದಂಪತಿ ಬರುತ್ತಿದ್ದಾಗ ದಾರಿಮಧ್ಯೆ ಮಳೆ ಬಂದ ಕಾರಣ ಪತ್ನಿಯನ್ನು ಅಲ್ಲಿಯೇ ಇಳಿಸಿ ಬಸ್ನಲ್ಲಿ ಬರುವಂತೆ ತಿಳಿಸಿ ರಾಮಚಂದ್ರ ಪ್ರಭು ರವರು ದ್ವಿಚಕ್ರ ವಾಹನದಲ್ಲೇ ಸುಳ್ಯದತ್ತ ಬಂದರು. ಸುತ್ತುಕೋಟೆ ತಿರುವು ತಲುಪುವಷ್ಟರಲ್ಲಿ ಸುಳ್ಯದಿಂದ ಸುಬ್ರಹ್ಮಣ್ಯ ಕಡೆಗೆ ಹೋಗುತ್ತಿದ್ದ ಸರ್ಕಾರಿ ಬಸ್ಗೆ ಢಿಕ್ಕಿ ಹೊಡೆದಿದ್ದು, ತಲೆಗೆ ಗಂಭೀರವಾಗಿ ಗಾಯಗೊಂಡ ರಾಮಚಂದ್ರ ಪ್ರಭುಗಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೃತದೇಹವನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ, ಸುಳ್ಯ ಪೊಲೀಸರು ಸ್ಥಳಕ್ಕೆ ಬಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ.