ಸುಬ್ರಹ್ಮಣ್ಯ : ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಕೊರೊನಾ ಪರಿಣಾಮ ಹಾಗೂ ಲಾಕ್ಡೌನ್ ಹಿನ್ನೆಲೆ ತಿಂಗಳುಗಳ ನಂತರ ದೇವಸ್ಥಾನದಲ್ಲಿ ಸೇವೆಗಳು ಸೋಮವಾರದಿಂದ ಸೇವೆಗಳು ಪುನಾರಂಭಗೊಂಡಿದ್ದು, ಹಲವು ಭಕ್ತರು ಆಗಮಿಸಿ ಪೂಜೆ ನೆರವೇರಿಸಿದರು.
ಸೋಮವಾರ ದಿನ ಸುಮಾರು 12 ಸರ್ಪ ಸಂಸ್ಕಾರ ಸೇವೆಗಳು ನಡೆದಿರುವುದಾಗಿ ಮಾಹಿತಿ ಲಭಿಸಿದೆ. ಬೆಳಗ್ಗೆ ಎರಡು ಪಾಳಿಯಲ್ಲಿ ಆಶ್ಲೇಷ ಪೂಜೆ ನಡೆದಿದ್ದು, ತಲಾ 30ರಂತೆ ಒಟ್ಟು 60 ಸೇವೆ ನಡೆದಿರುವುದಾಗಿ ತಿಳಿದು ಬಂದಿದೆ. ನಾಗಪ್ರತಿಷ್ಠೆ 12, ಇಡೀ ದಿನದ ಮಹಾಪೂಜೆ 7, ಮಧ್ಯಾಹ್ನದ ಮಹಾಪೂಜೆ 7, ಕಲಶ ಪೂಜಾಯುಕ್ತ ಪಂಚಾಮೃತಾಭಿಷೇಕ 10, ಪವಮಾನಯುಕ್ತ ಪಂಚಾಮೃತಾಭಿಷೇಕ 10, ರುದ್ರಾಭಿಷೇಕ 17, ಪಂಚಾಮೃತಾಭಿಷೇಕ 27, ಕಾರ್ತಿಕ ಪೂಜೆ 338 ನಡೆಯಿತು.
ಇತರ ದಿನಗಳಿಗಿಂತ ಹೆಚ್ಚು ಭಕ್ತರು ಸೋಮವಾರ ಆಗಮಿಸಿ ದೇವರ ದರ್ಶನವನ್ನೂ ಪಡೆದಿದ್ದಾರೆ. ಸುಬ್ರಹ್ಮಣ್ಯ ಪೇಟೆಯಲ್ಲಿ ಮಾರ್ಗದುದ್ದಕ್ಕೂ ಅತ್ಯಧಿಕ ಸಂಖ್ಯೆಯಲ್ಲಿ ವಾಹನಗಳು ಕಂಡು ಬಂದವು. ಭಕ್ತರಿಗೆ ಹಾಳೆ ತಟ್ಟೆ ಮೂಲಕ ಬಫೆ ಮಾದರಿಯಲ್ಲಿ ಅನ್ನಪ್ರಸಾದ ವಿತರಿಸಲಾಗಿದ್ದು, ಸುಮಾರು ಮೂರು ಸಾವಿರ ಮಂದಿ ಸೋಮವಾರ ಭೋಜನ ಸ್ವೀಕರಿಸಿದರು. ಬಳಿಕ ಭೋಜನ ಶಾಲೆಯ ಸ್ಯಾನಿಟೈಸೇಶನ್, ಸ್ವಚ್ಛತೆ ಕಾರ್ಯ ನಡೆಯಿತು. ರಾತ್ರಿ ಭೋಜನ ಪ್ರಸಾದ ವಿತರಣೆ ಇರಲಿಲ್ಲ.