


ವಿಟ್ಲ: ಕುಲಾಲ ಸಂಘ (ರಿ.) ವಿಟ್ಲದ 26ನೇ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ವಾರ್ಷಿಕೋತ್ಸವವು ವಿಟ್ಲದಲ್ಲಿ ನಡೆಯಿತು.

ವಿಟ್ಲ ಕುಲಾಲ ಸಂಘದ ಅಧ್ಯಕ್ಷ ಬಿ. ಕೆ ಬಾಬುರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಉದ್ಘಾಟಿಸಿ, ಮಾತನಾಡಿದ ಬೆಂಗಳೂರು ಸಿ. ಎಸ್. ಆರ್ ಸಮೂಹ ಸಂಸ್ಥೆ ಮಾಲಕ ಚಂದ್ರಹಾಸರವರು “ಉತ್ತಮ ಆರಂಭ ಯಶಸ್ಸಿನ ಭದ್ರ ಮೆಟ್ಟಿಲಾಗುತ್ತದೆ” ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಸಂಘದ ಹಿರಿಯ ಮಾರ್ಗದರ್ಶಕ ಪೂವಪ್ಪ ಮೂಲ್ಯ ಬಾಳೆಕುಮೇರಿರವರ ಆರ್ಥಿಕ ಸಹಕಾರವನ್ನು ಗುರುತಿಸಿ ಗೌರವಿಸಸಿ, ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿ ನಾವು ಇತರರಿಗೆ ಅರ್ಥವಾದರೆ, ಬದುಕು ಸಹಜ ಮತ್ತು ಸುಂದರ. ಸಹಕಾರ ನಮ್ಮೆಲ್ಲರ ಮನಸ್ಸನ್ನು ಅರಳಿಸುತ್ತದೆ ಎಂದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಸಮಾಜದ ಪ್ರತಿಭಾನ್ವಿತ ಕ್ರೀಡಾಪಟು, ರಾಜ್ಯಮಟ್ಟದ ವೇಯ್ಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ ಪಡೆದ ವಂದನ್ರವರನ್ನು ಗೌರವಿಸಲಾಯಿತು. ವಾರ್ಷಿಕೋತ್ಸವದ ಸಲುವಾಗಿ ನಡೆದ ಆಟೋಟ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸಮಾಜದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು.
ವಿಟ್ಲ ಕುಲಾಲ ಸಂಘದ ಸ್ಥಾಪಕ ಅಧ್ಯಕ್ಷ ರಮಾನಾಥ ವಿಟ್ಲ, ಮಹಿಳಾ ಘಟಕದ ಅಧ್ಯಕ್ಷೆ ವಾರಿಜ ಬಾಬು ಮೂಲ್ಯ ಮಾರ್ನೆಮಿಗುಡ್ಡೆ ಉಪಸ್ಥಿರಿದ್ದರು.
ಮೋಹಿನಿ ಎಣ್ಣೆದಕಲ ಪ್ರಾರ್ಥಿಸಿದರು. ಸಂಘಟನಾ ಕಾರ್ಯದರ್ಶಿ ವಸಂತ ಎರುಂಬು ಸ್ವಾಗತಿಸಿದರು, ಸ್ಥಾಪಕಧ್ಯಕ್ಷ ರಮನಾಥ ವಿಟ್ಲ ಪ್ರಸ್ತಾವನೆಗೈದರು. ವೀರಪ್ಪ ಮೂಲ್ಯ ಸನ್ಮಾನಿತರ ಅಭಿನಂದನಾ ಪತ್ರ ವಾಚಿಸಿದರು. ಅರುಣಾಕರ ಪೆರುವಾಜೆ ಹಾಗೂ ಜಯಲಕ್ಷ್ಮಿ ಪುಚ್ಛೆಗುತ್ತು ಕ್ರಮವಾಗಿ ವಿದ್ಯಾರ್ಥಿವೇತನ ಹಾಗೂ ಬಹುಮಾನದ ಪಟ್ಟಿಯನ್ನು ವಾಚಿಸಿದರು.ನಾರಾಯಣಮೂಲ್ಯ ಪೆತ್ತಮುಗೇರು ವಂದಿಸಿ, ರಾಧಾಕೃಷ್ಣ ಎರುಂಬು ಕಾರ್ಯಕ್ರಮ ನೆರವೇರಿಸಿದರು.
ಸಮಾಜದ ಬಂಧುಗಳು ಭಜನಾ ಕಾರ್ಯಕ್ರಮ ಹಾಗೂ ಶ್ರೀ ಸತ್ಯನಾರಾಯಣ ಪೂಜೆಯಲ್ಲಿ ಭಾಗವಹಿಸಿದರು. ಬಳಿಕ ಭೋಜನ ವ್ಯವಸ್ಥೆ ನಡೆದು, ಸುರೇಶ್ ಕಲಾರಸಿಕ ವಿಟ್ಲ ನಿರ್ದೇಶನದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.