ಮಂಗಳೂರು:- ಮಂಗಳೂರು ಮಹಾನಗರ ಪಾಲಿಕೆಯ ಕುಲಶೇಖರ – ಕನ್ನಗುಡ್ಡೆ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಡಿ.ವೇದವ್ಯಾಸ್ ಕಾಮತ್ ಗುದ್ದಲಿಪೂಜೆ ನೆರವೇರಿಸಿದರು.
ಈ ವೇಳೆ ಮಾತನಾಡಿದ ಶಾಸಕ ಕಾಮತ್, ಕುಲಶೇಖರದಿಂದ ಕನ್ನಗುಡ್ಡೆಗೆ ತೆರಳುವ ರಸ್ತೆ ಅಭಿವೃದ್ಧಿಯ ಕುರಿತು ಈ ಪರಿಸರದ ಜನರ ಬಹುಕಾಲದ ಬೇಡಿಕೆಯಾಗಿತ್ತು. ಈಗಿರುವ ರಸ್ತೆಯಲ್ಲಿ ಒಂದು ಘನ ವಾಹನ ಸಾಗಬಹುದಾದಷ್ಟು ಮಾತ್ರವೇ ಜಾಗವಿದೆ. ಹಾಗಾಗಿ ರಸ್ತೆ ಅಗಲೀಕರಣ ಹಾಗೂ ಅಭಿವೃದ್ಧಿ ಕಾಮಗಾರಿಗೆ 5 ಕೋಟಿ ಅನುದಾನ ಬಿಡುಗಡೆಗೊಳಿಸಲಾಗಿದೆ ಎಂದರು.
ಕುಲಶೇಖರದಿಂದ ಕನ್ನಗುಡ್ಡೆ ಸಂಪರ್ಕಿಸುವ ರಸ್ತೆ 2 ಕಿ.ಮಿ ಇದೆ. ರಸ್ತೆಯ ಅಗಲೀಕರಣ ಕಾಮಗಾರಿ ತಕ್ಷಣವೇ ಪ್ರಾರಂಭಿಸಲಾಗಿದ್ದು ಅದು ಪೂರ್ಣಗೊಂಡ ಬಳಿಕ ಅಭಿವೃದ್ಧಿ ಕಾಮಗಾರಿ ಪ್ರಾರಂಭಿಸಲಾಗುವುದು. ಕಾಮಗಾರಿ ನಡೆಯುವ ಸಂದರ್ಭದಲ್ಲಿ ಈ ಪರಿಸರದ ಜನರಿಗೆ ಅಲ್ಪಮಟ್ಟಿನ ತೊಂದರೆಯಾಗಬಹುದು. ಆದರೆ ಅಭಿವೃದ್ಧಿಯ ನಿಟ್ಟಿನಲ್ಲಿ ಸಾರ್ವಜನಿಕರು ಅಧಿಕಾರಿಗಳೊಂದಿಗೆ ಸಹಕರಿಸಬೇಕೆಂದು ಶಾಸಕ ಕಾಮತ್ ತಿಳಿಸಿದ್ದಾರೆ.
ಸ್ಥಳೀಯ ಪಾಲಿಕೆ ಸದಸ್ಯರಾದ ರೂಪಶ್ರೀ ಮಾತನಾಡಿ, ಅಳಪೆ ಉತ್ತರ ವಾರ್ಡಿನ ಸಮಗ್ರ ಅಭಿವೃದ್ಧಿಗೆ ಶಾಸಕ ವೇದವ್ಯಾಸ್ ಕಾಮತ್ ಅವರ ಕೊಡುಗೆ ಅವಿಸ್ಮರಣೀಯ. ವಾರ್ಡಿನ ಅನೇಕ ವರ್ಷಗಳ ಬೇಡಿಕೆಗಳನ್ನು ಈಡೇರಿಸಲು ವಿಶೇಷ ಅನುದಾನಗಳನ್ನು ಒದಗಿಸಿದ್ದಾರೆ. ಕುಲಶೇಖರ ಕನ್ನಗುಡ್ಡೆ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಕೂಡ ಶಾಸಕರು ವಿಶೇಷ ಕಾಳಜಿ ವಹಿಸಿದ್ದಾರೆ. ನಮ್ಮ ವಾರ್ಡಿನ ಜನರ ಪರವಾಗಿ ಶಾಸಕರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ದಿವಾಕರ್ ಪಾಂಡೇಶ್ವರ, ಮಂಗಳೂರು ಮಹಾನಗರ ಪಾಲಿಕೆಯ ಮುಖ್ಯ ಸಚೇತಕರಾದ ಶ್ರೀ ಪ್ರೇಮಾನಂದ ಶೆಟ್ಟಿ, ಲೆಕ್ಕ ಪತ್ರ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಶ್ರೀ ಜಗದೀಶ್ ಶೆಟ್ಟಿ, ಸಾರ್ವಜನಿಕ ಆರೋಗ್ಯ, ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ಪೂರ್ಣಿಮಾ. ಸಾರ್ವಜನಿಕ ಆರೋಗ್ಯ, ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಯ ಸದಸ್ಯರು ಮತ್ತು ಕಣ್ಣೂರ್ ವಾರ್ಡ್ನ ಮ.ನ.ಪಾ ಸದಸ್ಯರಾದ ಶ್ರೀಮತಿ ಚಂದ್ರಾವತಿ ವಿಶ್ವನಾಥ್, ಮ.ನ.ಪಾ ಸದಸ್ಯರಾದ ಕಿಶೋರ್ ಕೊಟ್ಟಾರಿ, ಬಿಜೆಪಿ ಮಂಗಳೂರು ದಕ್ಷಿಣ ಮಂಡಲದ ಕಾರ್ಯದರ್ಶಿಯಾದ ಶ್ರೀಮತಿ ಗೀತ ಶೆಟ್ಟಿ, ಬಿಜೆಪಿ ಅಳಪೆ ಉತ್ತರ ವಾರ್ಡ್ನ ಅಧ್ಯಕ್ಷರಾದ ಶ್ರೀ ನರೇಶ್ ಸರಿಪಲ್ಲ, ಪಕ್ಷದ ಪ್ರಮುಖರು ಮತ್ತು ಕಾರ್ಯಕರ್ತರು ಸ್ಥಳೀಯರು ಹಾಗೂ ಹಿರಿಯರು ಆಗಿರುವ ಆನಂದ್ ಕುಮಾರ್ ಸರಿಪಲ್ಲ, ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.