🖊️ ರಾಧಾಕೃಷ್ಣ ಎರುಂಬು


“ಕುಲಕುಲ ಕುಲವೆಂದು ಹೊಡೆದಾಡದಿರಿ ಕಂಡ್ಯ ನಿಮ್ಮ ಕುಲದ ನೆಲೆಯ ನೇನಾದರೂ ಬಲ್ಲಿರಾ” ಇದು ಬಚ್ಚಮ್ಮ- ಬೀರಪ್ಪನಾಯಕರಿಗೆ ತಿರುಪತಿ ವೆಂಕಟರಮಣನ ಪ್ರಸಾದ ರೂಪವಾಗಿ ಜನಿಸಿದ ದಾಸ ಕನಕ ರಚಿಸಿದ ಕೀರ್ತನೆ. ಹೊನ್ನಿನ ನಾಣ್ಯಗಳ ಹಾಗೂ ಬಂಗಾರದ ವಿಗ್ರಹಗಳೊಡೆಯನಾದ್ದರಿಂದಲೇ ಕನಕ, ಇಲ್ಲವಾದರೆ ತಿಮ್ಮಪ್ಪನಾಯಕ. ವ್ಯಕ್ತಿ ಮತ್ತು ವ್ಯಕ್ತಿತ್ವ ಭಿನ್ನ. ಒಬ್ಬ ಅರಸನಾಗಿ ಆಳಬೇಕಾದ ಸುಯೋಗಿ ವಿಧಿ ಲಿಖಿತಕ್ಕೆ ಮಣಿದು ಸಂತ ಶ್ರೇಷ್ಠನಾದ. ಇಲ್ಲಿ ಒಬ್ಬ ವೀರನಾಗಿರುವುದಕ್ಕೆ ಬಲು ಸಾಧನೆ ಬೇಕಾಗಿರಲಿಲ್ಲ ತಿಮ್ಮಪ್ಪನಾಯಕರಿಗೆ. ಆದರೆ ನಮ್ಮೆಲ್ಲರ ಹೃದಯದಲ್ಲಿ ಭಕ್ತಿಯ ಪ್ರತಿನಿಧಿಯಾಗಿ ಇಂದೂ ಇರುವ ಜೇಷ್ಠ ವ್ಯಕ್ತಿತ್ವಕ್ಕೆ ಮಾಡಿದ ಸಾಧನೆ ಸದಾ ಅಮರ.

ಹುಟ್ಟು ಆಕಸ್ಮಿಕ, ಬದುಕು ಸಾಧನೆಯಾಗಿ, ಸಾವು ಖಚಿತವಾದುದರಲ್ಲಿ ಭಕ್ತಿ ಸಾಧನೆಗೆ ಪಥ ಕೊಟ್ಟ ದಾಸ ಶ್ರೇಷ್ಠ ಕನಕದಾಸ. ಕೀರ್ತನೆಯಲ್ಲಿ ಜಗದ ಲೋಪವನ್ನು ಗುರುತಿಸಿ ಹಾಡಿ ಸಮಾನತೆಯ ಸಾರವನ್ನು ಆವಿರ್ಭವಿಸುವುದಕ್ಕೆ ಪಟ್ಟ ನೋವನ್ನು ಭಗವಂತನಿಗೆ ಸಮರ್ಪಣೆಯೆಂದು ಸಾರಿದ ಮಹಾನ್ ಇವರು. ವಿಜಯನಗರ ಸಾಮ್ರಾಜ್ಯದ ವೈಭವದ ವಿನ್ಯಾಸ “ಮೋಹನತರಂಗಿಣಿ”, ನಳನ ಧರ್ಮದ ಬದುಕಿನ ವಿನ್ಯಾಸ ಬರೆದ “ನಳಚರಿತ್ರೆ” ಕನಕದಾಸರ ಶ್ರೇಷ್ಠ ಕೃತಿಗಳು. ಮನಸ್ಸು ಮತ್ತು ಬಂಧುಗಳ ಸ್ವಚ್ಛ ಪ್ರಪಂಚ ಮನುಷ್ಯ ಸ್ವಭಾವವನ್ನು ಬದಲಾಯಿಸಬಲ್ಲುದು ಎಂಬುದಕ್ಕೆ ಜ್ವಲಂತ ಸಾಕ್ಷಿ. ಇಲ್ಲಿ ಜನಾಂಗ ಅಡ್ಡಿ ಬರಲೇ ಇಲ್ಲ. ಕಾಗಿನೆಲೆಯ ಆದಿಕೇಶವರಾಯ ತನ್ನ ಮನದೊಳಗಿನ ಇಂಗಿತಕ್ಕೆ ಪುಷ್ಟಿ ಕೊಟ್ಟ ಭಗವತ್ಸ್ವರೂಪಿ. ಸಂತರ ಬದುಕಿಗೆ ಗುರುತ್ವ ನೀಡಿದ ಶ್ರೀ ವ್ಯಾಸರಾಯರ ಮಾರ್ಗದರ್ಶನ ಬದುಕನ್ನು ಅಮರವಾಗಿಸಿದ್ದು. ಅಂದಿನ ದಿನಗಳಲ್ಲೇ ಕಾಲೆಳೆಯುವ ಮನಸುಗಳು, ಜಾತಿ-ಭೇದಗಳು ಬದುಕಲು ಅಂದೇ ಬಿಡುತಿರಲಿಲ್ಲ ಎಂಬುದಕ್ಕೆ ವ್ಯಾಸರ ಜೊತೆ ಬಂದ ಕನಕನಿಗೆ ವಾರಗಟ್ಟಲೆ ಉಡುಪಿಯ ಕೃಷ್ಣಾಲಯ ಪ್ರವೇಶದ ನಿರಾಕರಣೆ ಸಾಕ್ಷಿ. ಕಿಂಡಿಯೊಳಗಿಂದ ದರ್ಶನವಿತ್ತ ವಿಷಯ ನಮ್ಮೆಲ್ಲರ ಅಂಧಕಾರದ ಕಿಂಡಿ ತೆರೆಸಿದುದು ಸಂತಶ್ರೇಷ್ಠರ ಭಕ್ತಿಮಾರ್ಗದ ಸಾಪಲ್ಯತೆಗೆ ಕೊಟ್ಟ ಅಮೂಲ್ಯ ಮಾರ್ಗವೇ. ನಮ್ಮೆಲ್ಲ ಸಂಕುಚಿತ ಮನಸ್ಥಿತಿ ಅಂತಹ ಸಾವಿರ ಸಂತರು ಬಂದರೂ ಬದಲಾಗುವ ಸ್ಥಿತಿ ಕಾಣುತಿಲ್ಲ. ತನ್ನತನದ ಪ್ರತಿಷ್ಠೆ ಬಿಡುವ ಹಂಗು ನಮಗಿಲ್ಲ.
ಮಣ್ಣಾಗುವಾಗ ಮಣ್ಣಾಗಿ ಹೋಗುವ ತನು ಮನಗಳೇ ಹೆಚ್ಚಲ್ಲದೆ ಸಾವಿಲ್ಲದ ಕೀರ್ತಿಗೆ ಶ್ರಮಿಸುವ ಸಾಧಕರ ಸಾಲಿಗೆ ಭಾದ್ಯರಾಗುವ ಶ್ರಮಿಕರು ಯಾರಿದ್ದಾರೆ ಹೇಳಿ. ಮಾತಿನಲ್ಲಿ ಕೀರ್ತನೆಯಲ್ಲಿ ಬದಲಾಗುವ ತಮ ತುಂಬಿದ ತನು – ಮನಗಳನ್ನು ಭ್ರಷ್ಟತೆಯ ಜಗತ್ತಿನಲ್ಲಿ ಉಳಿಸಲಾದೀತೇ? ಮನೆಯೊಳಗೆ ನಾಮ ಸ್ಮರಣೆ ನಡೆದರೆ ವಾಸಯೋಗ್ಯ ಆಲಯದಲ್ಲಿ ಆದ್ಯಾತ್ಮಿಕ ಶಕ್ತಿ ಸಂಚಯನವಿದೆಯಂತೆ. ಆದರೆ ನಮಗೆಲ್ಲಿಯ ಮನವಿದೆ ತಾಳ ತಂಬೂರಿ ಸ್ವರ ಕೇಳಲು. ದೇವರ ಆಲಯದಲ್ಲೂ ಭಜನೆಯನ್ನೂ ಕೇಳಿಸಿಕೊಳ್ಳಲು ಮನವಿರದ ನಾಸ್ತಿಕರು ತುಂಬಿದ ಜಗದೊಳು ನೀ ಕೊಟ್ಟ ಕೀರ್ತನೆಯ ಅದೆಂತು ಉಳಿಸಿಕೊಳ್ಳಲಿ ದಾಸರೇ? ಕನಿಷ್ಠ ಕನಕದಾಸ ಜಯಂತಿಯ ಹೆಸರಲ್ಲಾದರೂ ಭಕ್ತಿಯ ಧ್ಯಾನ ಕೊಡಿಸುವ ಯತ್ನವ ಮಾಡಿರಯ್ಯ….. ಇಷ್ಟೇ ನನ್ನ ಕೇಳಿಕೆ.
🖊️ ರಾಧಾಕೃಷ್ಣ ಎರುಂಬು