Saturday, June 28, 2025
spot_imgspot_img
spot_imgspot_img

ಕುಂದಾಪುರ: ಅಕ್ರಮ ಪಟಾಕಿ ದಾಸ್ತಾನು; 4 ಲಕ್ಷ ಮೌಲ್ಯದ ಪಟಾಕಿ ಪೊಲೀಸ್‌ ವಶ..!

- Advertisement -
- Advertisement -

ಕುಂದಾಪುರ: ಅಕ್ರಮವಾಗಿ ಪಟಾಕಿ ದಾಸ್ತಾನಿಟ್ಟ ಮನೆಯೊಂದಕ್ಕೆ ಬೈಂದೂರು ಪೊಲೀಸರು ದಾಳಿ ನಡೆಸಿದ್ದು ಪಟಾಕಿ ವಶಪಡಿಸಿಕೊಂಡ ಘಟನೆ ಬೈಂದೂರು ತಾಲೂಕಿನ ಉಪ್ಪುಂದದ ಕಂಚಿಕಾನ್ ಎಂಬಲ್ಲಿ ನಡೆದಿದೆ.

ಅಕ್ರಮ ದಾಸ್ತಾನು ಮಾಡಿಟ್ಟುಕೊಂಡ ಆರೋಪಿ ದತ್ತಾತ್ರೇಯ ಶೇಟ್ ಎಂದು ಗುರುತಿಸಲಾಗಿದೆ.

ದತ್ತಾತ್ರೇಯ ಶೇಟ್ ಈ ಹಿಂದಿನಿಂದಲೂ ದೀಪಾವಳಿ ಹಾಗೂ ಗಣೇಶ ಚೌತಿಯ ಸಂದರ್ಭ ಪಟಾಕಿ ಮಾರಾಟ ಮಾಡುತ್ತಿದ್ದವರು. ಇವರ ಪಟಾಕಿ ದಾಸ್ತಾನು ಶೆಡ್ ಸಮೀಪವೇ ಕಾಂಕ್ರೀಟ್ ರಸ್ತೆ ಇದ್ದು, ಕೆಲವು ಸಮಯಗಳ ಹಿಂದೆ ರಸ್ತೆ ಮಧ್ಯೆಯೇ ಕೆಂಪು ಕಲ್ಲಿನ ಕಂಪೌಂಡ್ ನಿರ್ಮಿಸಿದ್ದರು. ಈ ಬಗ್ಗೆ ಸ್ಥಳೀಯರು ಹಾಗೂ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದರೂ ಆರೋಪಿ ದತ್ತಾತ್ರೇಯ ಶೇಟ್ ಕ್ಯಾರೇ ಎಂದಿರಲಿಲ್ಲ. ಬಳಿಕ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿತ್ತು. ನ್ಯಾಯಾಲಯದಲ್ಲಿ ಇಂಜಂಕ್ಷನ್ ದೊರೆತ ಮೇಲೂ ದತ್ತಾತ್ರೇಯ ಶೇಟ್ ಮತ್ತೆ ಕಂಪೌಂಡ್ ಕಟ್ಟಲು ಯತ್ನಿಸಿದಾಗ ಸಾರ್ವಜನಿಕರೇ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಆರೋಪಿಗೆ ನ್ಯಾಯಾಲಯದ ಆದೇಶ ಪಾಲಿಸುವಂತೆ ಎಚ್ಚರಿಕೆ ನೀಡಿದ್ದರು.

ಇದೀಗ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದ ದತ್ತಾತ್ರೇಯ ಶೇಟ್ ಪಟಾಕಿ ಅಕ್ರಮ ದಾಸ್ತಾನು ಇಟ್ಟಿರುವುದರ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ತಪಾಸಣೆ ನಡೆಸಿದಾಗ ವಿವಿಧ ಬಗೆಯ ಸುಡುಮದ್ದುಗಳು, ಜಿಲೆಟಿನ್ ಕಡ್ಡಿಗಳು, ಮೊದಲಾದ ಪಟಾಕಿಗಳನ್ನು ಅಕ್ರಮವಾಗಿ ದಾಸ್ತಾನು ಇಟ್ಟಿರುವುದು ಕಂಡು ಬಂದಿದೆ ಎನ್ನಲಾಗಿದೆ. ಅಕ್ರಮ ದಾಸ್ತಾನಿರಿಸಲಾಗಿದ್ದ ಸುಮಾರು ನಾಲ್ಕು ಲಕ್ಷಕ್ಕೂ ಮಿಕ್ಲಿ ಮೌಲ್ಯದ ಪಟಾಕಿಗಳನ್ನು ಪೊಲೀಸರು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬೈಂದೂರು ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!