ಕುಂದಾಪುರ ತಾಲೂಕಿನ ಕಂದಾವರ ಗ್ರಾಮದ ಉಳ್ಳೂರು – ಕಾಡಿನಕೊಂಡ ಎಂಬಲ್ಲಿ ಕಂದಾವರ ಡಂಪಿಂಗ್ ಯಾರ್ಡ್ ಸಮೀಪದ ಮದಗಗಕ್ಕೆ ಈಜಲು ತೆರಳಿದ ಇಬ್ಬರು ನೀರಲ್ಲಿ ಮುಳುಗಿ ಮೃತಪಟ್ಟ ಘಟನೆ ನಡೆದಿದೆ. ಉಪನ್ಯಾಸಕ ಮತ್ತು ವಿದ್ಯಾರ್ಥಿ ಅಸುನೀಗಿದ್ದಾರೆ.
ಶಂಕರನಾರಾಯಣ ಖಾಸಗಿ ಕಾಲೇಜಿನ ಉಪನ್ಯಾಸಕ ರಾಜೇಂದ್ರ ಶೆಟ್ಟಿಗಾರ (28) ಹಾಗೂ ಹೈಸ್ಕೂಲ್ ವಿದ್ಯಾರ್ಥಿ ಭರತ್ ಶೆಟ್ಟಿಗಾರ (15) ನೀರಲ್ಲಿ ಮುಳುಗಿ ಮೃತಪಟ್ಟ ದುರ್ದೈವಿಗಳು. ಉಳ್ಳೂರು – ಕಂದಾವರದ ಬೊಬ್ಬರ್ಯ ಕೊಡ್ಲು ಮದಗಕ್ಕೆ 6 ಜನ ಈಜಲು ತೆರಳಿದ್ದಾರೆ. ಸುಮಾರು 10 ಅಡಿ ನೀರಿರುವ ಮದಗದಲ್ಲಿ ಭರತ್ ಆಯತಪ್ಪಿ ಮುಳುಗಿದ್ದನ್ನು ನೋಡಿದ ರಾಜೇಂದ್ರ ರಕ್ಷಣೆಗೆ ತೆರಳಿದಾಗ ಈಜು ಬಾರದ ಇಬ್ಬರೂ ನೀರಿನಲ್ಲಿ ಮುಳುಗಿದ್ದಾರೆ.
ಭರತ್ ರಜೆಯ ಕಾರಣ ತನ್ನ ತಾಯಿಯ ಮನೆಗೆ ಬಂದಿದ್ದ, ಬಹುಮುಖ ಪ್ರತಿಭಾವಂತ ರಾಜೇಂದ್ರ ಮಂಗಳೂರಿನ ಕಾಲೇಜಿವೊಂದರಲ್ಲಿ ಸೇವೆ ಸಲ್ಲಿಸಿ, ಇತ್ತೀಚೆಗೆ ಶಂಕರನಾರಾಯಣ ಕಾಲೇಜಿಗೆ ಸೇರಿದ್ದರು. ಅಗ್ನಿ ಶಾಮಕ ದಳದವರು ಆಗಮಿಸಿ ಇಬ್ಬರ ಶವವನ್ನು ಮೇಲಕ್ಕೆತ್ತಿದ್ದಾರೆ. ಕಂಡ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.