ಮರ್ದಾಳ: ಕಡಬ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಐತ್ತೂರಿನ ಮುಖ್ಯರಸ್ತೆಯಲ್ಲಿ ಬೃಹತ್ ಗಾತ್ರದ ಕ್ರೇನ್ ಕೆಟ್ಟು ನಿಂತು ಎಂಟು ತಿಂಗಳಾಗುತ್ತಾ ಬಂದರೂ ಇನ್ನು ತೆರವಾಗಿಲ್ಲ. ಇದೀಗ ಪೊಲೀಸರು ನೋಟಿಸು ನೀಡಿದ ಹಿನ್ನೆಲೆಯಲ್ಲಿ ಕ್ರೇನ್ ಮಾಲಕ ಕಡಬ ಠಾಣೆಗೆ ಆಗಮಿಸಿದ ಘಟನೆ ನಡೆದಿದೆ.ಕ್ರೇನ್ ಮಾಲಕ ಬೆಂಗಳೂರು ನಿವಾಸಿ ಎನ್ನಲಾಗಿದೆ.
ಲಾಕ್ ಡೌನ್ ಸಮಯದಲ್ಲಿ ಕ್ರೇನ್ನ ಸೆನ್ಸಾರ್ ಭಾಗವನ್ನು ದುರಸ್ತಿಗಾಗಿ ಮ್ಯೆಕಾನಿಕ್ ಕೊಂಡು ಹೋಗಿದ್ದು ಅವರು ಅಕಾಲಿಕವಾಗಿ ಮರಣ ಹೊಂದಿದ್ದಾರೆ. ಅವರ ವಿಳಾಸ ಮತ್ತು ಇಂಜಿನ್ ಎಲ್ಲಿ ಇಟ್ಟಿದ್ದಾರೆಂಬ ಪೂರಕ ಮಾಹಿತಿ ನಮಗೆ ತಿಳಿದಿಲ್ಲ, ನನಗೂ ರಸ್ತೆ ಅಪಘಾತವಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೆ, ರಸ್ತೆಯಲ್ಲೇ ಕೆಟ್ಟು ನಿಂತ ಕ್ರೇನ್ ಇನ್ನೂ ಕೆಲವು ಭಾಗ ನಿಷ್ಕ್ರೀಯಗೊಂಡಿದೆ. ಈಗ ಬೇರೆ ಇಂಜಿನ್ ಬರುತ್ತಿದ್ದು ಮುಂದಿನ ಒಂದುವರೆ ತಿಂಗಳಿನಲ್ಲಿ ತೆರವು ಮಾಡಲಾಗುವುದು ಎಂದು ತಿಳಿಸಿದ್ದಾರೆ.
ರೈಲ್ವೆ ಇಲಾಖೆಯ ಕಾಮಗಾರಿ ನಿಮಿತ್ತ ತೆರಳುವ ಸಂದರ್ಭ ತಾಂತ್ರಿಕ ದೋಷದಿಂದ ಕ್ರೇನ್ ಕೆಟ್ಟು ಹೋಗಿತ್ತು. ರಸ್ತೆ ತಿರುವು ಇರುವ ಪಕ್ಕವೇ ಈ ಕ್ರೇನ್ ಕೆಟ್ಟು ನಿಂತಿದ್ದು ವಾಹನ ಸವಾರರಿಗೆ ಕಂಟಕವಾಗಿದೆ. ಅಪಘಾತವನ್ನು ತಪ್ಪಿಸುವ ಸಲುವಾಗಿ ಕಡಬ ಪೊಲೀಸರು ಎರಡೂ ಕಡೆಯಲ್ಲೂ ಬ್ಯಾರಿಕೇಡ್ ಅಳವಡಿಸಿದ್ದಾರೆ. ಆದರೆ ಸ್ಥಳೀಯರು ಸೇರಿದಂತೆ ಈ ರಸ್ತೆಯಲ್ಲಿ ಯಾತ್ರಾರ್ಥಿಗಳು ಸಂಚರಿಸುತ್ತಿದ್ದು ಕ್ರೇನ್ ಕೆಟ್ಟುನಿಂತ ಜಾಗದಿಂದ ಸ್ವಲ್ಪವೇ ದೂರದಲ್ಲಿ ದೊಡ್ಡದ ತಿರುವು ಇದ್ದು ಅಪಘಾತ ಸಂಭವಿಸುವ ಸಾಧ್ಯತೆಗಳಿವೆ.