

ಮಂಗಳೂರು: “ಹಾಕೊಡ್ಚಿ ಅಣ್ಣಾ.. ಬರ್ತ್ ಡೇ ಎನ್ನಾ” ಎಂದರೆ ಸಾಕು ಜನರಿಗೆ ಆ ದಿನ ನೆನಪಾಗುತ್ತೆ. ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ ಘಟನೆ ಮಂಗಳೂರಿನಲ್ಲಿ ನಡೆದಿತ್ತು.
2012ರ ಜುಲೈ 28 ರಂದು ಹಿಂದೂ ಸಂಘಟನೆಯ ಕಾರ್ಯಕರ್ತರು ಪಡೀಲ್ ಹೋಂ ಸ್ಟೇಗೆ ದಾಳಿ ಮಾಡಿ ಅಲ್ಲಿ ಬರ್ತ್ ಡೇ ಪಾರ್ಟಿಯಲ್ಲಿ ನಿರತರಾಗಿದ್ದವರ ಮೇಲೆ ಹಲ್ಲೆ ನಡೆಸಿದ ಪ್ರಕರಣದ ವಿಚಾರಣೆ ಆ.6ರಂದು ಮಂಗಳೂರಿನ ಜಿಲ್ಲಾ ಸೆಷನ್ಸ್ ನ್ಯಾಯಾಲಯದಲ್ಲಿ ನಡೆದಿದ್ದು, ತೀರ್ಪು ಹೊರಬಂದಿದೆ. ಮಹತ್ತರ ತೀರ್ಪು ಪ್ರಕಟವಾಗಿದೆ.
ಸಾಕ್ಷ್ಯಾಧಾರಗಳ ಕೊರತೆಯಿಂದ ಆರೋಪಿಗಳು ಖುಲಾಸೆಗೊಂಡಿದ್ದು ನ್ಯಾಯಾಧೀಶ ಕಾಂತರಾಜು ಆದೇಶ ನೀಡಿದ್ದಾರೆ. ಈ ಪ್ರಕರಣದಲ್ಲಿ ಒಟ್ಟು 44 ಆರೋಪಿಗಳ ಪೈಕಿ ಮೂವರು ಸಾವನ್ನಪ್ಪಿದ್ದು,ಓರ್ವ ಪತ್ರಕರ್ತ ನವೀನ್ ಸೂರಿಂಜೆ ಮೇಲಿದ್ದ ಪ್ರಕರಣ ನ್ಯಾಯಾಲಯ ಕೈಬಿಟ್ಟಿತ್ತು.
ಇಂದು ಹಿಂದೂ ಜಾಗರಣಾ ವೇದಿಕೆಯ ಮುಖಂಡ ಸುಭಾಷ್ ಪಡಿಲ್ ಸೇರಿದಂತೆ ಒಟ್ಟು 40 ಆರೋಪಿಗಳನ್ನು ದೋಷ ಮುಕ್ತಗೊಳಿಸಿ ನ್ಯಾಯಾಲಯ ತೀರ್ಪು ನೀಡಿದೆ.ವಕೀಲರಾದ ಶಂಭುಶರ್ಮಾ, ಕಿಶೋರ್ ಕುಮಾರ್ ಅವರ ತಂಡ ಆರೋಪಿಗಳ ಪರ ವಾದ ಮಂಡಿಸಿದ್ದರು.