🖊️ರಾಧಾಕೃಷ್ಣ ಎರುಂಬು



ಮನಸ್ಸು ಶರೀರದ ಆಂತರಿಕ ಹಾಗೂ ಬಾಹ್ಯ ಆರೋಗ್ಯವನ್ನು ಕಾಪಾಡಿಕೊಳ್ಳುವ ಅತಿ ಅಮೂಲ್ಯವಾದ ಅಂಗವಾಗಿದೆ. ಮೆದುಳು ಸರ್ವವನ್ನೂ ನಿಯಂತ್ರಿಸಬಲ್ಲ ಕಂಟ್ರೋಲ್ ರೂಮ್ ಆಗಿದ್ದರೆ, ಮನವೆನ್ನುವ ಘಟಕ ಸರ್ವಕ್ಕೂ ರಕ್ಷಾ ಕವಚ. ನೆನಪುಗಳು, ಸಂದೇಶಗಳು ನೋವು-ನಲಿವುಗಳ ಸೃಷ್ಟಿ ಮತ್ತು ಸಂವಹನಗಳ ಉಪಾದಿ ಮನಸ್ಸು ಆಗಿದೆ. ಶುದ್ಧ ನೀರು ಸರ್ವಕ್ಕೂ ಉಚಿತ ಎನ್ನುವಂತೆ ಶುದ್ಧ ಮನಸ್ಸು ಯಶಸ್ಸಿನ ಕೈಗನ್ನಡಿ ಆಗುತ್ತದೆ. ಮರ್ಕಟನಂತೆ ಕ್ಷಣ ಕ್ಷಣಕ್ಕೂ ಹಾರುವ ಚಾಂಚಲ್ಯತೆ ಹೊಂದಿರುವ ಮನಸ್ಸು ಹಿಡಿತದಲ್ಲಿ ಇಲ್ಲದಿದ್ದರೆ ಜೀವಕ್ಕೂ ಹಿಂಡಿತ ಖಚಿತ. ಮನುಷ್ಯನೆಂಬ ಜೀವಿಯಲ್ಲಿ ಈ ಮನಸ್ಸಿನ ಕಾರ್ಯೋನ್ಮುಖತೆ ಗರ್ಭಾವಸ್ಥೆಯಿಂದಲೇ ತೊಡಗಿಕೊಂಡು ಬರುವುದೆಂಬುದರಲ್ಲಿ ವಿಶ್ವಾಸವಿಡಬಹುದು.
ಸಂಸ್ಕಾರದ ಕಲಿಕೆ ಗರ್ಭದಲ್ಲಿ ಆರಂಭವಾಗುವುದಿದ್ದರೆ ಸುಸಂಸ್ಕಾರದ ಗ್ರಹಿಕೆ ಮನಸ್ಸಿನಲ್ಲಿಯೇ ಆಗುವುದೆಂಬುದರಲ್ಲಿ ಎರಡು ಮಾತಿಲ್ಲ. ತಾಯಿ ತನ್ನ ಗರ್ಭದಲ್ಲಿರುವ ಮಗುವಿಗೂ ಒಳಿತಾದವುಗಳನ್ನೇ ಗ್ರಹಿಸಿ ನೀಡಬೇಕು ಎನ್ನುವುದು ಹಿರಿಯರಿಂದಲೇ ಬಂದಿರುವ ಹಿರಿತನದ ಮಾತು. ಸತ್ಕಾರ್ಯದ ದರ್ಶನ, ಮಗುವಿನ ಚಿತ್ರಗಳು, ಹೂವು, ಪುಣ್ಯಸ್ಥಳ ದರ್ಶನಗಳು ಮಗುವಿನ ಮನಸ್ಸಿಗೆ ಸ್ವಚ್ಛತೆ ನೀಡುತ್ತದೆ ಎನ್ನುವುದಕ್ಕೆ ವೈಜ್ಞಾನಿಕ ಪುರಾವೆಗಳಿವೆ. ಮಗು ಜಗತ್ತಿನ ಬೆಳಗು ಕಂಡ ಮೇಲೆ ಮಗುವಿನ ಬಾಲ್ಯ, ಮಾತುಗಳು, ಭಾವನೆಗಳು ಸಚ್ಚಾರಿತ್ರ್ಯದಿಂದ ಇರಬೇಕಾದರೆ ಒಳ್ಳೆಯ ವಾತಾವರಣವನ್ನು ಸೃಷ್ಟಿಸಬೇಕಲ್ಲವೇ? ಹಿರಿಯರ ಮಾತುಗಳು, ನಡೆನುಡಿಗಳು,ಆಹಾರ ಪದ್ಧತಿ, ಮನೆಯ ದಿನಚರಿಗಳು ಮಗುವಿನ ಮನಸ್ಸಿಗೆ ನೇರ ಸಂಪರ್ಕ ಕೊಡುತ್ತದೆ. ಅದೇ ಮೊಳಕೆ ಒಡೆದು ಗಿಡವಾಗಿ ಮರವಾಗಿ ಫಲವನ್ನು ನೀಡುವುದಲ್ಲವೇ …?
ಆಶ್ರಮದ ಗಿಳಿ ಮತ್ತು ಮಾಂಸದ ಅಂಗಡಿಯ ಗಿಳಿಯ ಮಾತುಗಳ ಕಥೆ ಕೇಳಲಿಲ್ಲವೇ ನಾವು. ಪಕ್ಷಿಗಳ ಮನದಲ್ಲೇ ಅಷ್ಟೊಂದು ಪರಿಣಾಮ ಬೀರುವ ಘಟನೆಗಳು ಮನುಷ್ಯನ ಮನಪಟಲದ ಮೇಲೆ ಎಷ್ಟು ಪರಿಣಾಮ ಬೀರದು… ಊಹಿಸಿಕೊಳ್ಳಿ! ವರ್ಷ ಮೂರಕ್ಕೆ ಮಗುವನ್ನು ತನ್ನ ಕೆಲಸ ಕಾರ್ಯ ಚಟುವಟಿಕೆಗಳ ತರಾತುರಿಯಿಂದ ಇನ್ನೋರ್ವಳ ಮಡಿಲಿಗೆ ಜಾರಿಸುವ ನಮ್ಮ ದಾಹ ಮಗುವಿನ ಮನಸ್ಸಿಗೆ ಎಷ್ಟು ಆಘಾತ ನೀಡದು…! ಒಮ್ಮೆ ಯೋಚಿಸಿ.. ಹಾಗೊಂದು ವೇಳೆ ಮಾಡಿದರೆ ಆ ಮಕ್ಕಳು ನರ್ಸರಿಯ ಶಿಕ್ಷಕಿ, ಸುಶ್ರೂಷಕರ ಸಂಸ್ಕಾರವನ್ನೇ ಮೈಗೂಡಿಸಿಗೊಂಡೀತು. ಹಿಂದೆ ಮುಂದೆ ನೋಡದೆ ಮೂಟೆ ಪುಸ್ತಕದ ಜೊತೆ ಶಾಲೆ ಎಂಬ ಮೆಟ್ಟಲೇರಿದ ಮಗುವಿಗೆ ಸಮಸ್ಯೆಗಳನ್ನೇ ನೀಡುತ್ತಾ ಹದಗೊಳಿಸುತ್ತೇವೆ. ಆಸಕ್ತಿಯಿಂದ ಮಗುವನ್ನು ಶಾಲೆಗೆ ಕರೆಯುವ ವ್ಯವಸ್ಥೆ ನಾವು ಮಾಡುತ್ತಿದ್ದೇವೆಯೇ…? ನಲಿ-ಕಲಿಯಂತಹ ಸರಕಾರಿ ಕಾರ್ಯಕ್ರಮಗಳ ನಿಜವಾದ ಉದ್ದೇಶ, ನೈಜತೆಯ ಶಿಕ್ಷಣಗಳು ಪರಿಣಾಮಕಾರಿ ಶಿಕ್ಷಕಿಯ ಮೇಲೆ ಹೊಂದಿಕೊಂಡಿದೆಯಾದರೂ ಅದು ಸ್ವ-ಪ್ರೇರಣೆ ತಿಳುವಳಿಕೆ ಕಲಿಸುತ್ತದೆ. ಆದರೆ ಸ್ವ ಪ್ರತಿಷ್ಠೆಗಾಗಿ ಐಶಾರಾಮದ ಶಾಲೆಯಲ್ಲಿ ಭಿನ್ನ ಪೋಷಾಕುಗಳು ಅನ್ಯದೇಶಿಯ ಭಾಷೆಗಳಿಗೆ ಮುಗ್ಧ ಹಸುಳೆಗಳನ್ನು ಹಸುಗಳನ್ನು ತಳ್ಳಿದಂತೆ ತಳ್ಳುತ್ತೇವೆ ಇದು ಎಷ್ಟು ವಿಪರ್ಯಾಸ ನೋಡಿ.
ಬೆಳಗ್ಗಿನಿಂದ ರಾತ್ರಿ 12 ರವರೆಗೂ ಜವಾಬ್ದಾರಿಯ ಹೊರೆ ಮಗುವಿನ ಮನದ ಕದವನ್ನು ಎಷ್ಟು ಶಾಂತಿಯಿಂದ ಇರಿಸೀತು? ನೀವೇ ಹೇಳಿ. ವಾರದಲ್ಲಿ ರಜೆಯೊಂದು ಬಂತೆಂದರೆ, ಟ್ಯೂಷನ್ ತರಗತಿಗಳು ಎಂಬ ಬಿಡುವಿಲ್ಲದ ಶೆಡ್ಯೂಲ್ ಗೆ ದೂಡಿಬಿಡುವುದಿಲ್ಲವೇ ನಾವು ..? ಆ ಮಗುವಿಗೂ ಒಂದು ಮನಸ್ಸಿದೆ ಎನ್ನುವುದನ್ನು ಮರೆತು ಬಿಟ್ಟಿಲ್ಲವೇ? ಹಿಂದಿನ ತಲೆಮಾರಿನವರು ಆಟ ಪಾಠಗಳ ಜೊತೆ ಬದುಕಲು ಕಲಿಸಲಿಲ್ಲವೇ? ನಾವು ಆ ಶಿಕ್ಷಣವನ್ನು ನಮ್ಮವರಿಗೆಷ್ಟು ಕೊಡುತ್ತಿದ್ದೇವೆ. ಅವಿಭಕ್ತ ಕುಟುಂಬದತ್ತ ವಾಲಿದ ನಮ್ಮ ಸಂಸ್ಕಾರ, ಸಂಸಾರದೊಳಗೆ ಹೇಗೆ ಸಾರ ನೀಡಬಲ್ಲೆವು? ಬೇಸಿಗೆ ರಜೆ ಬಂತೆಂದರೆ ನೆಂಟರ ಮನೆಗೆ ಕಳುಹಿಸಲು ವ್ಯಾಮೋಹ ಬಿಡದೆ ಮೂರ್ಖರ ಪೆಟ್ಟಿಗೆಗೆ ಜೋತು ಬೀಳುವಂತೆ ಮಾಡುತ್ತಾ ತನಗೆ ಯಾವ ಜವಾಬ್ದಾರಿಯು ಬೇಡ ಎನ್ನುವಂತೆ ಮಗುವಿಗೆ ಜೈಲಿನಂತಹ ವಾಸದ ಪರಿಚಯ ಮಾಡಿ ಕೊಟ್ಟಿಲ್ಲವೇ…? ಆ ಮುಗ್ಧ ಮನಸ್ಸನ್ನು ವಿಚ್ಚನ್ನ ಗೊಳಿಸಿ ಭಾವಗಳೇ ಇಲ್ಲದ ಬದುಕಿಗೆ ದಾರಿತೋರುವುದು ಹಿತವೆಂದೆನಿಸುತ್ತಿದೆಯೇ?” ಪುಸ್ತಕದ ಓದು ಮಸ್ತಕದ ಮಸಿಯ ತೊಳೆಯುವುದು” ಎನ್ನುವುದು ಮಾತು. ಕಥೆ , ಜ್ಞಾನದ ಹೊತ್ತಗೆ, ಹವ್ಯಾಸಗಳು, ಪ್ರವಾಸ ಮನಸ್ಸನ್ನು ಸದಾ ನಗಿಸುತ್ತದೆ ಸ್ವಚ್ಛಗೊಳಿಸುತ್ತದೆ ನಾವೆಷ್ಟು ಪೋಷಣೆ ನೀಡುತ್ತೇವೆ ..ಇದಕ್ಕೆ? ಆಧುನಿಕ ಜಗತ್ತಿನಲ್ಲಿ ವಿಜ್ಞಾನ, ತಾಂತ್ರಿಕತೆ ಮುಂದಿನ ಹೆಜ್ಜೆ ಇಟ್ಟಿದೆ ಆದರೆ ಕುವೆಂಪು, ಮಾಸ್ತಿ, ಭೀಮ್ ಸೇನ್ ಜೋಷಿ , ಶೇಣಿ, ಗುಬ್ಬಿ ವೀರಣ್ಣ ರಂತಹ ಅಸಾಮಾನ್ಯ ಸಾಹಿತಿ, ಸಂಗೀತ ಕಲಾವಿದರ ಪ್ರಪಂಚಕ್ಕೆ ಹಾದಿ ಎಲ್ಲಿ ಮಾಡಿಕೊಡುತ್ತಿದ್ದೇವೆ ? ಬೇಡ…ಬಿಡಿ ನಮ್ಮ ಮಗುವಿನ ನೆಮ್ಮದಿಯ ನೆಲೆಗಾದರೂ ಹವ್ಯಾಸಗಳನ್ನು ಬೆಳೆಸಿಕೊಳ್ಳುವ, ಮನಕ್ಕೆ ಮುದ , ಶರೀರಕ್ಕೆ ಹದ ಕೊಡುವ ಸಾಂಕೇತಿಕ ಕೃಷಿ, ಸಂಸ್ಕೃತಿಯ ಒಲವಿನ ಪರಿಚಯವನ್ನು ನಾವೆಲ್ಲಿ ಮಾಡಿಕೊಟ್ಟಿದ್ದೇವೆ..? ಇದೇ ಮುಂದುವರಿದರೆ ಕಲ್ಲಾದ ಮನಗಳ ಪೈಪೋಟಿಯ ಜೀವನ ಕ್ರಮ 40ರ ವಯಸ್ಸಿಗೆ ದೇಹಕ್ಕೆ ಮುಪ್ಪು, ಶರೀರಕ್ಕೆ ಜರ್ಜರಿತ ಕಾಯಿಲೆಗಳು, ಸಂಬಂಧಗಳ ನಡುವೆ ಅಸಂಬದ್ಧ ಯೋಚನೆ , ಮನಸ್ಸಿಗೆ ಒತ್ತಡಗಳ ಹೊರೆಹೊತ್ತು ಅಮಾನುಷವಾಗಿ ಜೀವ ಕಳೆದು ಅತೃಪ್ತ ಜೀವನ ಮಾಡಿಕೊಳ್ಳಬೇಕಾದ ಅನಿವಾರ್ಯ ಸಂದರ್ಭ ಒದಗಲಾರದೆ..?
ಆಗ ನಾವು ಸಂಸ್ಕಾರ, ನೆಮ್ಮದಿಯ ಬದುಕು ಹುಡುಕುವುದು ಮರುಭೂಮಿಯಲ್ಲಿ ಹಿಡಿ ನೀರಿಗಾಗಿ ಪರದಾಡುವಂತೆ ಅಲೆಯ ಬೇಕಾಗಬಹುದು . ಜ್ಞಾನವಂತರೇ.. ಮಗುವಿಗೆ ವೃತ್ತಿ, ಹಣ ಗಳಿಸುವ ಸಾಧನೆಯ ಹಾದಿಯ ಶಿಕ್ಷಣಕ್ಕಿಂತ ಮನಸ್ಸು ಸ್ವಚ್ಛಗೊಳಿಸುವ, ಬದುಕಲು ಕಲಿಸುವ ಶಿಕ್ಷಣವನ್ನು ಒದಗಿಸುವ ಪ್ರಯತ್ನ ನಡೆಸೋಣವೇ….??
🖊️ರಾಧಾಕೃಷ್ಣ ಎರುಂಬು