


ಆಯಿಲ್ ಟ್ಯಾಂಕರ್ನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 50 ಲಕ್ಷ ರೂಪಾಯಿ ಮೌಲ್ಯದ ಮದ್ಯವನ್ನು ಅಧಿಕಾರಿಗಳು ವಶಕ್ಕೆ ಪಡೆದ ಘಟನೆ ಹುಳ್ಳಿಯಲ್ಲಿ ನಡೆದಿದೆ.
ಲಾರಿ ಬೆಂಗಳೂರಿನಿಂದ ಬೆಳಗಾವಿಗೆ ಹೋಗುತ್ತಿದ್ದು, 3 ಸಾವಿರ ಲೀಟರ್ ಸುಟ್ಟ ಆಯಿಲ್ ಸಾಗಿಸಲು ಕಬ್ಬಿಣದ ಸ್ಮಾಪ್ ಮಾರಾಟಗಾರರ ಹೆಸರಿನಲ್ಲಿ 7 ಲಕ್ಷ ರೂಪಾಯಿ ನಕಲಿ ಬಿಲ್ ಸೃಷ್ಟಿಸಲಾಗಿತ್ತು. ಬಿಲ್ ಪರಿಶೀಲಿಸಿದಾಗ ನಕಲಿ ಎಂದು ಗೊತ್ತಾಗಿದೆ.ವಾಣಿಜ್ಯ ತೆರಿಗೆ ಇಲಾಖೆಯ ಸಹಾಯಕ ಆಯುಕ್ತ ವಿಜಯಕುಮಾರ ಸನದಿ, ಧಾರವಾಡದ ನರೇಂದ್ರ ಟೋಲ್ನಲ್ಲಿ ಟ್ಯಾಂಕರ್ ತಡೆದು ತಪಾಸಣೆ ನಡೆಸಿದಾಗ, ಪ್ರಕರಣ ಬೆಳಕಿಗೆ ಬಂದಿದೆ.
ಘಟನೆ ನಂತರ ಲಾರಿ ಚಾಲಕ ರಾಜಸ್ಥಾನದ ಮೋಹನ್ ಲಾಲ್ ಪರಾರಿಯಾಗಿದ್ದಾನೆ.
ಬೆಂಗಳೂರಿನ ಸೋಮಾನಿ ಟ್ರೇಡರ್ಸ್ ಹೆಸರಲ್ಲಿ ರಾಜಸ್ಥಾನದ ನಿಶಾಂತ ಲುಬ್ರಿಕಂಟ್ಸ್ ಗೆ ಸಾಗಾಟ ಮಾಡಲು ನಕಲಿ ಬಿಲ್ ಸೃಷ್ಟಿಸಲಾಗಿದೆ. ಈ ಎರಡೂ ಹೆಸರುಗಳೂ ನಕಲಿಯಾಗಿವೆ. 20 ಸಾವಿರ ಲೀಟರ್ ಸಾಮರ್ಥ್ಯದ ಟ್ಯಾಂಕರ್ನಲ್ಲಿ ಕೇವಲ 3 ಸಾವಿರ ಲೀಟರ್ ಸುಟ್ಟ ಆಯಿಲ್ ಸಾಗಣೆ ಮಾಡಲು ಬಿಲ್ನಲ್ಲಿ ನಮೂದಿಸಲಾಗಿತ್ತು ಎಂದರು.
ಟ್ಯಾಂಕರ್ನ ನೋಂದಣಿ ಸಂಖ್ಯೆ ಸಹ ನಕಲಿಯಾಗಿದ್ದು, ನಾಗಾಲ್ಯಾಂಡ್ ನೋಂದಣಿ ಸಂಖ್ಯೆ ಬಳಸಲಾಗಿದೆ. ಮದ್ಯದ ಬಾಟಲಿ ಮೇಲೆ ಅಂಟಿಸಿರುವ ಲೇಬಲ್ ಸಹ ನಕಲಿಯಾಗಿದೆ. ವಶಪಡಿಸಿಕೊಳ್ಳಲಾಗಿರುವ ಮದ್ಯವನ್ನು ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ ಎಂದು ಹೇಳಿದರು.
ವಾಣಿಜ್ಯ ತೆರಿಗೆ ಇಲಾಖೆಯ ಜಂಟಿ ಆಯುಕ್ತ ರವಿಕುಮಾರ್, ಉಪ ಆಯುಕ್ತ ಬಾಳಪ್ಪ ಸಂಪಗಾಂವ್ ಅವರ ನೇತೃತ್ವದಲ್ಲಿ ತಪಾಸಣೆ ಮಾಡಲಾಯಿತು.