ಪ್ರೀತಿಸಿದ ಹುಡುಗನಿಗೋಸ್ಕರ ತುಮಕೂರಿನಿಂದ ಬೆಂಗಳೂರಿಗೆ ಬಂದ ಹುಡುಗಿಯ ಮೇಲೆ ಪ್ರೀತಿಸಿದ ಯುವಕ ಹಾಗೂ ಆತನ ಸ್ನೇಹಿತ ಸೇರಿಕೊಂಡು ಅತ್ಯಾಚಾರ ಮಾಡಿರುವ ಅಮಾನವೀಯ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಪುರುಷೋತ್ತಮ್ ಹಾಗು ಚೇತನ್ ಬಂಧಿತ ಆರೋಪಿಗಳು.
ತುಮಕೂರಿನ ಕೊರಟಗೆರೆ ನಿವಾಸಿ ಪುರುಷೋತ್ತಮ್ ಹಾಗೂ ಯುವತಿ ಒಂದು ವರ್ಷದಿಂದ ಪ್ರೀತಿ ಮಾಡುತ್ತಿದ್ದರು. ಮೂಲತಃ ತುಮಕೂರಿನ ನಿವಾಸಿಯಾದ ಯುವತಿ ಪ್ಯಾರಾಮೆಡಿಕಲ್ ಓದುತ್ತಿದ್ದು, ಕಳೆದ ಒಂದು ವರ್ಷದಿಂದ ಪರಸ್ಪರ ಪ್ರೀತಿ ಮಾಡುತ್ತಿದ್ದರು.
ಕಳೆದ ಒಂದು ವಾರದ ಹಿಂದೆ ಯುವತಿಯನ್ನು ಭೇಟಿ ಮಾಡಿದ್ದ ಆರೋಪಿ ಪುರುಷೋತ್ತಮ್, ನಂತರ ಯುವತಿಯ ಮೊಬೈಲ್ ಪಡೆದು ಬೆಂಗಳೂರಿಗೆ ಬಂದಿದ್ದನು. ಎರಡು ದಿನಗಳ ಹಿಂದೆ ಪ್ರಿಯಕರನಿಗೆ ಕರೆ ಮಾಡಿ ನನ್ನ ಮೊಬೈಲ್ ವಾಪಸ್ ಕೊಡು ಎಂದು ಕೇಳಿದ್ದಳು. ಈ ವೇಳೆ ಆರೋಪಿ ಯುವತಿಯನ್ನು ಬೆಂಗಳೂರಿನ ಮೆಜೆಸ್ಟಿಕ್ಗೆ ಬರಲು ಹೇಳಿದ್ದಾನೆ. ಪ್ರಿಯಕರನನ್ನು ನಂಬಿ ಯುವತಿ ಮಂಗಳವಾರ (ಜೂ.6) ರಂದು ಬೆಂಗಳೂರಿನ ಮೆಜೆಸ್ಟಿಕ್ ಗೆ ಬಂದಿದ್ದಾಳೆ. ಈ ವೇಳೆ ಮೊಬೈಲ್ ರೂಮ್ನಲ್ಲಿದೆ ಎಂದು ಹೇಳಿ ಯುವತಿಯನ್ನ ಪುಸಲಾಯಿಸಿ ಗಿರಿನಗರದ ಈರಣ್ಣಗುಡ್ಡೆಯ ತನ್ನ ಸ್ನೇಹಿತ ಚೇತನ್ ಮನೆಗೆ ಕರೆದುಕೊಂಡು ಬಂದಿದ್ದಾನೆ.
ಈ ವೇಳೆ ಯುವತಿಯನ್ನು ಬಲವಂತವಾಗಿ ಕೋಣೆಯಲ್ಲಿ ಕೂಡಿಹಾಕಿ ಅತ್ಯಾಚಾರ ಮಾಡಿದ್ದಾನೆ. ಈ ಘಟನೆ ನಡೆದ ನಂತರ ಪುರುಷೋತ್ತಮ್ನ ಸ್ನೇಹಿತ ಚೇತನ್ ಯುವತಿಯಿದ್ದ ಕೋಣೆಗೆ ಬಂದು, ಅತ್ಯಾಚಾರ ಮಾಡಲು ಯತ್ನಿಸಿದ್ದಾನೆ. ಹುಡುಗಿಯ ಚೀರಾಟ ಕೇಳಿದ ಅಕ್ಕಪಕ್ಕದ ಮನೆಯವರು ಹುಡುಗರ ರೂಂಮ್ನತ್ತ ಬಂದಿದ್ದಾರೆ. ಯುವಕರಿಂದ ಅತ್ಯಾಚಾರ ಯತ್ನಕ್ಕೆ ಒಳಗಾಗುತ್ತಿದ್ದ ಯುವತಿಯನ್ನು ರಕ್ಷಣೆ ಮಾಡಿ ಕೂಡಲೇ ಗಿರಿನಗರ ಪೊಲೀಸರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ.
ಸದ್ಯ ಯುವತಿಯನ್ನ ರಕ್ಷಣೆ ಮಾಡಿದ ಪೊಲೀಸರು ಆಕೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು, ನಂತರ ಪೋಷಕರ ಬಳಿ ಬಿಟ್ಟಿದ್ದಾರೆ. ಇನ್ನು ಆರೋಪಿಗಳಾದ ಚೇತನ್ ಹಾಗು ಪುರುಷೋತ್ತಮ್ ರನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ಈ ಘಟನೆ ಕುರಿತಂತೆ ಗಿರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.