ಲಖನೌ: ಪ್ರತಿಯೊಂದು ಹೆಣ್ಣು ಮಕ್ಕಳು ಮದುವೆ ಎಂದರೆ ಅದೆಷ್ಟು ಕನಸು ಕಟ್ಟಿರುತ್ತಾರೊ, ಅದೇ ರೀತಿ ಸಾಕಷ್ಟು ಕನಸಿನೊಂದಿಗೆ ಹಸೆ ಮಣೆ ಏರಲು ಸಿದ್ಧವಾಗಿದ್ದ ವಧುವಿಗೆ ಮದುವೆ ದಿನವೇ ಕನಸಿನ ಅರಮನೆಗೆ ಬೆಂಕಿ ಬಿದ್ದ ಘಟನೆ ಉತ್ತರ ಪ್ರದೇಶದ ಮಹಾರಾಜಗಂಜ್ನಲ್ಲಿ ನಡೆದಿದೆ.
ಹುಡುಗ ಹೈದರಾಬಾದ್ನಲ್ಲಿ ಕೆಲಸ ಮಾಡುತ್ತಿದ್ದು, ಯಾವುದೋ ಮದುವೆಗೆ ಹೋದಾಗ ಹುಡುಗಿಯೊಬ್ಬಳನ್ನು ನೋಡಿ ಪ್ರೀತಿಸಲು ಆರಂಭಿಸಿದ್ದನು. ಪ್ರೀತಿ ಹೆಮ್ಮರವಾಗಿ ಬೆಳೆದು, ಕುಟುಂಬಸ್ಥರ ಒಪ್ಪಿಗೆಯೊಂದಿಗೆ ಮೇ 16ಕ್ಕೆ ಮದುವೆಯೂ ನಿಶ್ಚಯವಾಗಿತ್ತು. ಆದರೆ ಮದುವೆಯ ದಿನ ಬೆಳಗ್ಗೆ ವರ, ವಧುವಿಗೆ ಕರೆ ಮಾಡಿದ್ದು, ನಾನು ನಿನ್ನನ್ನು ಮದುವೆಯಾಗುವುದಿಲ್ಲ ಎಂದು ಫೋನ್ ಕಟ್ ಮಾಡಿದ್ದಾನೆ. ಇದನ್ನು ಕೇಳಿದ ವಧು ಅಲ್ಲೇ ತಲೆ ತಿರುಗಿ ಬಿದ್ದಿದ್ದಾಳೆ. ಎಚ್ಚರವಾದ ನಂತರ ವರ ಹೇಳಿದ ವಿಚಾರವನ್ನು ತಿಳಿಸಿ ಕಣ್ಣೀರು ಸುರಿಸಿದ್ದಾಳೆ.
ಇದರಿಂದಾಗಿ ಸಿಟ್ಟಿಗೆದ್ದ ಕುಟುಂಬಸ್ಥರು ತಕ್ಷಣ ಆಕೆಯನ್ನು ಕರೆದುಕೊಂಡು, ಮದುವೆ ಆಮಂತ್ರಣ ಪತ್ರಿಕೆ ಹಿಡಿದು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ಪೊಲೀಸರು ಎರಡೂ ಕಡೆಯವರನ್ನು ಕರೆಸಿ ನಡೆದ ವಿಚಾರವನ್ನು ಸವಿಸ್ತಾರವಾಗಿ ತಿಳಿಸುವಂತೆ ತಿಳಿಸಿದ್ದಾರೆ.
ಯುವಕ, ಯುವತಿ ಪ್ರೀತಿಯಲ್ಲಿದ್ದಾಗ, ಯುವಕ ಆಕೆಗೆ ಒಂದು ಸ್ಕೂಟಿಯನ್ನು ಕೊಡಿಸಿದ್ದನಂತೆ, ಕೆಲಸ ಮಾಡಬೇಕು ಎನ್ನುವ ಆಸೆಯಲ್ಲಿದ್ದ ಅವಳಿಗೆ ಲಂಚ ಕೊಟ್ಟು ಕೆಲಸ ಸೇರಲು ಸಹಾಯ ಮಾಡಿದ್ದ. 1.25 ಲಕ್ಷ ರೂಪಾಯಿ ಲಂಚ ನೀಡಲೆಂದು ಕೊಟ್ಟಿದ್ದನಂತೆ. ಗೋರಕ್ಪುರದ ಒಬ್ಬ ವ್ಯಕ್ತಿಗೆ ಲಂಚ ನೀಡಿ ಕೆಲಸ ಗಿಟ್ಟಿಸಿಕೊಳ್ಳಲಾಗಿತ್ತು. ಆದರೆ ಈ ಮಧ್ಯೆ ಲಂಚ ಪಡೆದ ವ್ಯಕ್ತಿ ಹಾಗೂ ಯುವತಿ ಹೆಚ್ಚು ಸ್ನೇಹ ಬೆಳೆಸಿಕೊಂಡಿದ್ದಾರೆ. ಕೆಲ ಖಾಸಗಿ ಕ್ಷಣಗಳನ್ನೂ ಕಳೆದಿದ್ದಾರೆ. ಅದರ ವಿಡಿಯೋ ಮಾಡಿಕೊಂಡಿದ್ದ ಆತ ಅದನ್ನು ಆಕೆಯ ಪ್ರಿಯತಮನಿಗೆ ಮದುವೆಯ ದಿನವೇ ಕಳುಹಿಸಿಕೊಟ್ಟಿದ್ದಾನೆ. ಅದರಿಂದ ಸಿಟ್ಟಿಗೆದ್ದ ವರ ಮದುವೆ ಕ್ಯಾನ್ಸಲ್ ಮಾಡಿದ್ದಾನೆ. ಎರಡೂ ಕಡೆಯವರ ಮನ ಒಲಿಸಲು ಪೊಲೀಸರು ಸಾಕಷ್ಟು ಪ್ರಯತ್ನ ಪಟ್ಟರು ಅದು ಸಾಧ್ಯವಾಗಿಲ್ಲ ಎನ್ನಲಾಗಿದೆ.