ವಿಶೇಷ ಅತಿಥಿಯಾಗಿ ನಟ, ಹಿನ್ನಲೆ ಧ್ವನಿ ಕಲಾವಿದ, ನಿರೂಪಕ ಪ್ರದೀಪ್ ಬಡೆಕ್ಕಿಲ ಭಾಗಿ
ಸರಕಾರಿ ಪ್ರೌಢ ಶಾಲೆ ಮಾಣಿಲದಲ್ಲಿ ಸ್ವಾತಂತ್ರ್ಯ ದಿನಾಚರಣೆ ಹಾಗೂ 2022-23ನೇ ಸಾಲಿನ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ ನಡೆಯಿತು. ಬೆಳಗ್ಗೆ ಧ್ವಜರೋಹಣ ಕಾರ್ಯಕ್ರಮ ನಡೆದು ಬಳಿಕ ಸಭಾ ಕಾರ್ಯಕ್ರಮ ನಡೆಯಿತು.
ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಶಿವಪ್ರಸಾದ್ ಸೂರಂಪಳ್ಳ ಇವರ ಅಧ್ಯಕ್ಷತೆಯಲ್ಲಿ ಮೂಡಿಬಂದ ಈ ಕಾರ್ಯಕ್ರಮದಲ್ಲಿ ನಟ, ಹಿನ್ನಲೆ ಧ್ವನಿ ಕಲಾವಿದ, ನಿರೂಪಕ ಪ್ರದೀಪ್ ಬಡೆಕ್ಕಿಲ ವಿಶೇಷ ಅತಿಥಿಯಾಗಿ ಭಾಗವಹಿಸಿದರು.
ಪ್ರದೀಪ್ ಬಡೆಕ್ಕಿಲ ಸ್ವಾತಂತ್ರ್ಯೋತ್ಸವದ ಬಗ್ಗೆ ಮಾತನಾಡಿ ಬಳಿಕ ಶಾಲಾ ಮಕ್ಕಳೊಂದಿಗೆ ಸಂವಾದ ನಡೆಸಿದರು. ಮಕ್ಕಳಿಂದ ಸುರಿದ ಪ್ರಶ್ನೆಗಳಿಗೆ ಉತ್ತರಿಸುತ್ತಾ ತಮ್ಮ ಬಾಲ್ಯದ ಬಗ್ಗೆ ಮೆಲುಕು ಹಾಕಿ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಮಾಣಿಲ ಗ್ರಾಮ ಪಂಚಾಯತ್ ಉಪಾಧ್ಯಕ್ಷ ರಾಜೇಶ್ ಕುಮಾರ್ ಬಾಳೆಕಲ್ಲು, ಶಾಲಾ ಸ್ಥಳ ದಾನಿಗಳು ನಡುಮನೆ ಮಹಾಬಲ ಭಟ್, ಪಂಚಾಯತ್ ಸದಸ್ಯ ಶ್ರೀಧರ್ ಬಾಳೆಕಲ್ಲು ಉಪಸ್ಥಿತರಿದ್ದು ಸ್ವಾತಂತ್ರ್ಯ ದಿನಾಚರಣೆಯ ಮಹತ್ವ ತಿಳಿಸಿ, ಕಾರ್ಯಕ್ರಮಕ್ಕೆ ಶುಭಹಾರೈಸಿದರು.
ವೇದಿಕೆಯಲ್ಲಿ ಮಾಣಿಲ ಗ್ರಾಮ ಪಂಚಾಯತ್ ಅಧ್ಯಕ್ಷೆ ವನಿತಾ ತಾರಿದಳ, ನಿವೃತ್ತ ಹಿರಿಯ ಶಿಕ್ಷಕ ಅನಂತ್ ಭಟ್, ಮಾಣಿಲ ಗ್ರಾಮ ಪಂಚಾತಯತ್ ಸದಸ್ಯ ವಿಷ್ಣು ಕೊಮ್ಮುಂಜೆ, ಶಾಲಾ ನಿವೃತ್ತ ಮುಖ್ಯೋಪಾಧ್ಯಾಯರಾದ ಸುಬ್ರಹ್ಮಣ್ಯ ಭಟ್ ಕೆ.ಜಿ, ಶಾಲಾ ಮುಖ್ಯ ಶಿಕ್ಷಕ ಭುವನೇಶ್ವರ್, ಶಾಲಾ ಶಿಕ್ಷಕಿ ಲತಾ ಯು, ವಿಷ್ಣು ಕನ್ನಡಗುಳಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ 2022-23 ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಿ, ನಗದು ಬಹುಮಾನ ನೀಡಿ ಅಭಿನಂದಿಸಲಾಯಿತು. ಜೊತೆಗೆ ಕನ್ನಡ ವಿಷಯದಲ್ಲಿ 125 ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ನಗದು ನೀಡಿ ಅಭಿನಂದಿಸಲಾಯಿತು. ಹಾಗೂ ಶಾಲೆಗೆ ಶೇಕಡಾ 100 ರಷ್ಟು ಫಲಿತಾಂಶ ತಂದುಕೊಟ್ಟ ಎಲ್ಲಾ ವಿದ್ಯಾರ್ಥಿಗಳನ್ನು ಗೌರವಿಸಿ ಅಭಿನಂದಿಸಲಾಯಿತು.
ಸ್ವಾತಂತ್ರೋತ್ಸವದ ಬಗ್ಗೆ ಮಕ್ಕಳು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು. ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಶಾಲಾ ಮುಖ್ಯ ಶಿಕ್ಷಕ ಭುವನೇಶ್ವರ್ ಸ್ವಾಗತಿಸಿ, ಶಾಲಾ ಶಿಕ್ಷಕ ಉಮಾನಾಥ ರೈ ಧನ್ಯವಾದಗೈದರು. ಸಹಶಿಕ್ಷಕ ಸುದೇಶ್ .ಕೆ ಕಾರ್ಯಕ್ರಮ ನಿರೂಪಿಸಿದರು.