ಮಂಗಳೂರು: ಕನ್ಯಾಕುಮಾರಿ ಸಮುದ್ರದಲ್ಲಿ ಆಳ ಮೀನುಗಾರಿಕೆಗೆ ತೆರಳಿದ್ದ ಮಂಗಳೂರಿನ ಮೀನುಗಾರರ ತಮಿಳುನಾಡಿನ ಮೀನುಗಾರರು ಕಲ್ಲೆಸೆದು ಹಲ್ಲೆ ನಡೆಸಿದ ಘಟನೆ ನಡೆದಿದೆ.
ಆಳಸಮುದ್ರಕ್ಕೆ ಸ್ಮಾಲ್ ರಿಬ್ಬನ್ ಫಿಶ್ ಅಂದರೆ ಪಾಂಬೋಲ್ ಮೀನು ಹಿಡಿಯಲು ತೆರಳಿದ್ದ ಮಂಗಳೂರು ಮತ್ತು ಉಡುಪಿ ಭಾಗದ ಸುಮಾರು 300 ಬೋಟುಗಳಿಗೆ ಸಮುದ್ರದ ಮಧ್ಯ ಲ್ಲೇ ತಡೆಯೊಡ್ಡಲಾಗಿದೆ. ಬೋಟುಗಳನ್ನು ಹಿಂಬಾಲಿಸಿಕೊಂಡು ಬಂದ ತಮಿಳುನಾಡಿನ ಮೀನುಗಾರರು, ಕರ್ನಾಟಕದ ಬೋಟುಗಳ ಮೇಲೆ ಕಲ್ಲು , ದೊಣ್ಣೆಗಳನ್ನು ಎಸೆದು ಗಾಜುಗಳನ್ನು ಪುಡಿಗಟ್ಟಿದ್ದಾರೆ. 10ಕ್ಕೂ ಅಧಿಕ ಬೋಟುಗಳಿಗೆ ಹಾನಿಯಾಗಿದೆ. ಈ ನಡುವೆ ಇನ್ನು ಕೆಲವು ಬೋಟುಗಳು ದಾಳಿಯಿಂದ ತಪ್ಪಿ ಸಿಕೊಂಡು ಮಂಗಳೂರಿಗೆ ಬಂದಿವೆ.
ಮಂಗಳೂರಿನಿಂದ ಸುಮಾರು 200 ಮತ್ತು ಮಲ್ಪೆ , ಉಡುಪಿ ಭಾಗದ ಸುಮಾರು 100 ಬೋಟುಗಳು ಆಳಸಮುದ್ರಕ್ಕೆ ತೆರಳಿ ಮೀನುಗಾರಿಕೆಯನ್ನು ಮಾಡುತ್ತಿದ್ದು , ಈ ನಡುವೆ ಬುಧವಾರದಂದು ತಮಿಳುನಾಡಿನ ಮೀನುಗಾರರು ದಾಳಿ ನಡೆಸಲು ಆರಂಭಿಸಿದ್ದಾರೆ. ಇವರ ದಾಳಿಯಿಂದ ಸುಮಾರು 1500ಕ್ಕೂ ಅಧಿಕ ಮಂದಿ ಮೀನುಗಾರಾರರು ಮೀನುಗಾರಿಕೆ ನಡೆಸಲಾಗದೇ ಮರಳಿ ಬಂದಿದ್ದಾರೆ.
ಪ್ರತೀ ಬೋಟಿಗೂ 10 ಲಕ್ಷ ರೂಪಾಯಿಗೂ ಅಧಿಕ ಹಾನಿ ಉಂಟಾಗಿದೆ. ತೀರದಿಂದ 12 ನಾಟಿಕಲ್ ಮೈಲಿನ ಅನಂತರ ಆಳಸಮುದ್ರ ಮೀನುಗಾರಿಕೆಯಲ್ಲಿ ಯಾರೂ ಕೂಡಾ ಮೀನುಗಾರಿಕೆ ಮಾಡಬಹುದಾಗಿದೆ. ಅದಕ್ಕೆ ರಾಜ್ಯದ ವ್ಯಾಪ್ತಿ ಇರುವುದಿಲ್ಲ . ಆದರೆ ತಮಿಳುನಾಡಿನ ಮೀನುಗಾರರು ಪ್ರಚೋದಿತರಾಗಿ ಆಕ್ರಮಣ ನಡೆಸಿದ್ದಾರೆ. ತಮಿಳುನಾಡಿನ ಮೀನುಗಾರರ ಅಕ್ರಮಣ, ದಾಳಿ ಮೀನುಗಾರರ ನಡುವಿನ ಸಂಘರ್ಷ, ಅಂತಾರಾಜ್ಯ ವಿವಾದಕ್ಕೆ ಕಾರಣ ಮಾಡಿಕೊಟ್ಟಿದೆ.
ಜಿಲ್ಲಾಧಿಕಾರಿ, ಸರಕಾರ ಕೂಡಲೇ ಮಧ್ಯೆ ಪ್ರವೇಶಿಸಿ ನಮಗೆ ನ್ಯಾಯ ಒದಗಿಸಿಕೊಡಬೇಕು ಎಂದು ಮೀನುಗಾರ ಮುಖಂಡರು ಆಗ್ರಹಿಸಿದ್ದಾರೆ. ಇದು ಅಂತಾರಾಜ್ಯ ವಿಚಾರವಾಗಿರುವುದರಿಂದ ಸರಕಾರದ ಮಟ್ಟದಲ್ಲಿ ಮಾತುಕತೆ ನಡೆಸಿ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಮೀನುಗಾರಿಕಾ ಇಲಾಖಾಧಿಕಾರಿಗಳು ಪ್ರತಿಕ್ರಿಯೆ ನೀಡಿದ್ದಾರೆ.