ಮಡಿಕೇರಿ: ಮಡಿಕೇರಿ ನಗರ ವ್ಯಾಪ್ತಿಯಲ್ಲಿ ಗಾಂಜಾ ಮಾರಾಟಗಾರರನ್ನು ಪತ್ತೆಹಚ್ಚಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸೂಚಿಸಿದ್ದು, ಅದರಂತೆ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ 6ಮಂದಿಯನ್ನು ಬಂಧಿಸುವಲ್ಲಿ ಕೊಡಗು ಜಿಲ್ಲಾ ಅಪರಾಧ ಪತ್ತೆದಳ ಯಶಸ್ವಿಯಾಗಿದೆ.
ಮಾಹಿತಿ ಕಲೆ ಹಾಕಿದ ಅಪರಾಧ ಪತ್ತೆ ದಳದ ಸಿಬ್ಬಂದಿಗಳು ಮಡಿಕೇರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ರಾಣಿಪೇಟೆ ರಸ್ತೆಯ ಸಮೀಪದ ಮನೆಯೊಂದರಲ್ಲಿ ಅಕ್ರಮವಾಗಿ ಯಾರಿಗೂ ತಿಳಿಯದಂತೆ ಗಾಂಜಾ ಮಾರಾಟ ಮಾಡುತ್ತಿದ್ದುದನ್ನು ಪತ್ತೆ ಹಚ್ಚಿ ಜೂ.7ರಂದು ದಾಳಿ ನಡೆಸಿದ ಪೊಲೀಸರು ತ್ಯಾಗರಾಜ ಕಾಲೋನಿಯ ಎಂಎ.ಅಸ್ಗರ್, ಅಬ್ದುಲ್ ರಹೀಂ,ಮಹದೇವಪೇಟೆಯ ಜಬೀವುಲ್ಲಾ, ಸುಂಟಿಕೊಪ್ಪ ಅಯ್ಯಪ್ಪ ದೇವಸ್ಥಾನ ಬಳಿಯ ಸಫಾನ್, ಮಡಿಕೇರಿ ಆಜಾದ್ ನಗರದ ನೌಷದ್ ಆಲಿ, ಭಗವತಿ ನಗರದ ಡಿ.ಆರ್.ಸುರೇಶ್ ಎಂಬವರನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳಿಂದ ಅಂದಾಜು 50 ಸಾವಿರ ರೂ. ಮೌಲ್ಯದ 415 ಗ್ರಾಂ ಗಾಂಜಾ ಮತ್ತು 35,760 ರೂ. ನಗದನ್ನು ವಶಪಡಿಸಿಕೊಳ್ಳಲಾಗಿದೆ. ಜಿಲ್ಲಾ ಪೊಲೀಸ್ ಅಧೀಕ್ಷಕಿ ಕ್ಷಮಾ ಮಿಶ್ರಾ ಅವರ ಮಾರ್ಗದರ್ಶನದಲ್ಲಿ ಡಿಸಿಆರ್ ಬಿ ಇನ್ಸ್ಪೆಕ್ಟರ್ ಎನ್. ಕುಮಾರ್ ಆರಾಧ್ಯ, ಎಎಸ್ಐ ಹಮೀದ್,ಸಿಬ್ಬಂದಿಗಳಾದ ಯೋಗೇಶ್ ಕುಮಾರ್ ,ನಿರಂಜನ್ , ವಸಂತ, ಅನಿಲ್ ಕುಮಾರ್ ವೆಂಕಟೇಶ್, ಶರತ್ ರೈ , ಶಶಿಕುಮಾರ್ ಮತ್ತು ಮಹೇಶ್ ಕಾರ್ಯಚರಣೆಯಲ್ಲಿ ಭಾಗವಹಿಸಿದ್ದರು.