


ವಿಟ್ಲ : ವಿಟ್ಲದ ನಿವಾಸಿ ಹಿರಿಯ ಚಾಲಕರಾದ ಮೇಗಿನ ಪೇಟೆ ನಿವಾಸಿ ಡ್ರೈವರ್ ಮಾಲಿಂಗಣ್ಣ ಎಂದೇ ಖ್ಯಾತರಾದ ಮಾಹಾಲಿಂಗ ನಾಯ್ಕ (75) ಜ.19ರಂದು ಬೆಳಿಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ತನ್ನ 18ನೇ ವಯಸ್ಸಿನಿಂದ ಚಾಲಕ ವೃತ್ತಿಯನ್ನು ಆರಂಭಿಸಿದ ಮಾಲಿಂಗಣ್ಣ ಲಾರಿ, ಬಸ್ಸು ಚಾಲಕರಾಗಿ ದೀರ್ಘಾವದಿಯ ಸೇವೆ ಸಲ್ಲಿಸಿ ಕೆಲವು ವರ್ಷಗಳ ಹಿಂದೆ ಹೆವಿ ಡ್ರೈವಿಂಗ್ ಗೆ ವಿದಾಯ ಹೇಳಿ ರಿಕ್ಷಾವೊಂದನ್ನು ಖರೀದಿಸಿ ವಿಟ್ಲದಲ್ಲಿ ಬಾಡಿಗೆ ಮಾಡುತ್ತಿದ್ದರು. ನಾಲ್ಕೈದು ದಿನಗಳಿಂದ ಅನಾರೋಗ್ಯವಾಗಿ ಆಸ್ಪತ್ರೆ ಸೇರಿದ ಇವರು ಗುಣಮುಖರಾಗಿ ಮತ್ತೆ ರಿಕ್ಷಾ ಚಾಲನೆಗೆ ರೆಡಿಯಾಗಿದ್ದರು.
ಆದರೆ ಜ.19ರ ಬೆಳಿಗ್ಗೆ ಮಲಗಿದಲ್ಲಿಂದ ಎದ್ದು ಹೋಗುವ ಸಂದರ್ಭಕ್ಕೆ ತಕ್ಷಣ ಅಲ್ಲಿಯೇ ಬಿದ್ದು ಮೃತರಾಗಿದ್ದು, ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ಮಗ ರಘುನಾಥ್ ಮೇಗಿನಪೇಟೆ ತಿಳಿಸಿದ್ದಾರೆ. ಮಾಲಿಂಗಣ್ಣ ತಮ್ಮ ಡ್ರೈವಿಂಗ್ ವೃತ್ತಿಯೊಂದಿಗೆ ಗಾಡಿ, ಯಂತ್ರಗಳ ರಿಪೇರಿ ಕೆಲಸ ಮಾಡುತ್ತಿದ್ದರು. ಸಹಕಾರ ಮನೋಭಾವ ಇದ್ದ ಇವರು ಜನಾನುರಾಗಿಯಾಗಿದ್ದರು ಮತ್ತು ದೈವಭಕ್ತರಾಗಿದ್ದರು. ಇವರು ಈ ತಿಂಗಳ ಸಂಕ್ರಮಣ ಸೇವೆಗಾಗಿ ತಮ್ಮ ರಿಕ್ಷಾದಲ್ಲಿಯೇ ಅಡ್ಕಸ್ಥಳದ ತರವಾಡು ಮನೆಗೆ ಹೋಗಿ ಬಂದಿದ್ದರು. ಇವರ ಪತ್ನಿ 15 ವರ್ಷಗಳ ಹಿಂದೆ ನಿಧನರಾಗಿದ್ದು, ಇದೀಗ ಮೂವರು ಮಕ್ಕಳಾದ ದಯಾನಂದ, ವಾಸು ನಾಯ್ಕ. ಮತ್ತು ರಘುನಾಥ್ ಮೇಗಿನಪೇಟೆ ಇವರನ್ನು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.







