ಮಂಗಳೂರು: ದೇಶದಲ್ಲಿ ಉಂಟಾಗಿರುವ ಆಕ್ಸಿಜನ್ ಪೂರೈಕೆ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದಿಂದ ಸಮುದ್ರ ಸೇತು-2 ಕಾರ್ಯಾಚರಣೆ ನಡೆಯುತ್ತಿದ್ದು, ಇದರ ಅಂಗವಾಗಿ ಭಾರತದ ನೌಕಾಸೇನಾ ಹಡಗು ಐಎನ್ಎಸ್ ತಲ್ವಾರ್, 40 ಮೆಟ್ರಿಕ್ ಟನ್ ಆಮ್ಲಜನಕವನ್ನು ಮಂಗಳೂರು ಬಂದರಿಗೆ ತರಲಿದೆ.
ಈಗಾಗಲೇ ಕೇಂದ್ರ ಸರ್ಕಾರ ಆಮ್ಲಜನಕದ ಟ್ಯಾಂಕರ್ ನ್ನು ಉಚಿತವಾಗಿ ನಿರ್ವಹಣೆ ಮಾಡುವಂತೆ ನವಮಂಗಳೂರು ಬಂದರಿಗೆ ಸೂಚನೆ ನೀಡಿದೆ. ಬಹರೈನ್ನ ಮನಾಮಾದಿಂದ ಎರಡು ಕ್ರಯೋಜೆನಿಕ್ ಐಸೋ ಕಂಟೈನರ್ಗಳಲ್ಲಿ 40 ಮೆಟ್ರಿಕ್ ಟನ್ ಆಕ್ಸಿಜನ್ ಬಂದಿಳಿಯಲಿದ್ದು, ಆಕ್ಸಿಜನ್ ಜೊತೆಗೆ ಕೋವಿಡ್ ಚಿಕಿತ್ಸೆಗೆ ಅಗತ್ಯವಿರುವ ಮೆಡಿಕಲ್ ಉಪಕರಣಗಳೂ ಬರಲಿವೆ. ಮಧ್ಯಾಹ್ನ ಸುಮಾರು 2 ಗಂಟೆಗೆ ನವಮಂಗಳೂರು ಬಂದರಿಗೆ ಈ 40 ಮೆಟ್ರಿಕ್ ಟನ್ ಆಕ್ಸಿಜನ್ ಬಂದಿಳಿಯಲಿದೆ.
ವಿದೇಶಗಳಿಂದ ಆಕ್ಸಿಜನ್ ತರುವ ಉದ್ದೇಶದಿಂದ ಭಾರತೀಯ ನೌಕಾಪಡೆ ಆಪರೇಷನ್ ಸಮುದ್ರ ಸೇತು 2 ಕಾರ್ಯಾಚರಣೆ ಆರಂಭಿಸಿದೆ. ಏಳು ಭಾರತೀಯ ನೌಕಾ ಹಡಗುಗಳಾದ ಕೋಲ್ಕತ್ತಾ, ಕೊಚ್ಚಿ, ತಲ್ವಾರ್, ತಬಾರ್, ತ್ರಿಕಾಂಡ್, ಜಲಶ್ವಾ ಮತ್ತು ಐರಾವತ್ ಈ ಕಾರ್ಯಾಚರಣೆಗೆ ನಿಯೋಜನೆಗೊಂಡಿವೆ.
ಮೊದಲ ಹಂತದಲ್ಲಿ ಬಹರೈನ್, ಸಿಂಗಾಪುರ ಮತ್ತು ಥಾಯ್ಲೆಂಡ್ಗಳಿಂದ ಆಮ್ಲಜನಕ ತರಲು ಯೋಜನೆ ರೂಪಿಸಲಾಗಿದೆ. ದೇಶದಲ್ಲಿ ಉಂಟಾಗಿರುವ ಆಮ್ಲಜನಕ ಸಮಸ್ಯೆ ಸರಿದೂಗಿಸುವ ಉದ್ದೇಶದಿಂದ ಆಪರೇಷನ್ ಸಮುದ್ರ ಸೇತು-2 ಯೋಜನೆ ಹಮ್ಮಿಕೊಳ್ಳಲಾಗಿದೆ.