ಮಂಗಳೂರು: ಯುವಕರ ತಂಡವೊಂದು ಮಾರಕಾಸ್ತ್ರಗಳೊಂದಿಗೆ ಅಕ್ರಮವಾಗಿ ಮನೆಗೆ ನುಗ್ಗಿ ಮಹಿಳೆಯ ಕೊಲೆಗೆ ಯತ್ನಿಸಿ ದಾಂಧಲೆ ನಡೆಸಿದ ಘಟನೆ ಕುಲಶೇಖರ ಶಕ್ತಿನಗರದಲ್ಲಿ ಭಾನುವಾರ ರಾತ್ರಿ ನಡೆದಿದೆ. ಈ ವಿಚಾರವಾಗಿ ಮಹಿಳೆ ತಡವಾಗಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಇದೀಗ 7 ಯುವಕರ ಮೇಲೆ ಪ್ರಕರಣ ದಾಖಲಾಗಿದೆ.


ಆರೋಪಿಗಳನ್ನು ಹೇಮಂತ್ (19), ರಂಜಿತ್ (28), ಯತೀರಾಜ್ (23), ಅವಿನಾಶ್ (23), ಧನುಷ್ (19) , ಪ್ರಜ್ವಲ್ (24), ದೀಕ್ಷಿತ್ (21) ಎಂದು ಗುರುತಿಸಲಾಗಿದೆ. ಆರೋಪಿಗಳು ತಲವಾರು, ರಾಡ್ ಹಾಗೂ ಇನ್ನಿತರ ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಮೇ 30 ರಂದು ರಾತ್ರಿ 8 ಗಂಟೆಗೆ ಸರಿಪಲ್ಲದ ವೀಣಾರವರ ಮನೆಗೆ ಅಕ್ರಮವಾಗಿ ಪ್ರವೇಶಿಸಿ ತಲವಾರ್ ಬೀಸಿದ್ದು, ಇದಲ್ಲದೆ ಟಿವಿ ಮಿಕ್ಸಿ ಸೋಪಾ ಇತ್ಯಾದಿ ಮನೆಯ ಸೊತ್ತುಗಳಿಗೆ ಹಾನಿ ಮಾಡಿದ್ದಾರೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.

ಪ್ರಮುಖ ಆರೋಪಿ ಹೇಮಂತ್ ಮಹಿಳೆಯ ಮಗಳನ್ನು ಬೈಕ್ ನಲ್ಲಿ ಕರೆದುಕೊಂಡು ಹೋಗುತ್ತಿದ್ದುದನ್ನು ನೋಡಿದ ಆಕೆಯ ಸಹೋದರರು ಹೇಮಂತ್ ಗೆ ಹಾಗೂ ರಂಜಿತ್ ಗೆ ಬೈದಿದ್ದು, ಇದೇ ಕಾರಣಕ್ಕೆ ರಂಜಿತ್ ಸ್ನೇಹಿತರನ್ನು ಕರೆತಂದು ಬಂದು ಕೊಲೆಗೆ ಯತ್ನಿಸಿ ಬೆದರಿಕೆಯೊಡ್ದಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.











