ಮಂಗಳೂರು : ಪಾಠದ ವೇಳೆ ಧರ್ಮ ನಿಂದನೆ ಮಾಡಿದ ವಿಚಾರದಲ್ಲಿ ನಗರದ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ನಗರದ ವೆಲೆನ್ಸಿಯಾದಲ್ಲಿ ಖಾಸಗಿ ಶಾಲೆಯೊಂದರಲ್ಲಿ ವರ್ಕ್ ಈಸ್ ವರ್ಶಿಪ್ ಎಂಬ ಪಠ್ಯದ ವೇಳೆ ವಿವರಿಸಿದ ಶಿಕ್ಷಕಿ ಹಿಂದೂ ಧರ್ಮದ ಅವಹೇಳನ ಮಾಡಿದ್ದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ಅದೇ ಶಾಲೆಯ ಪ್ರಭ ಎಂಬ ಕ್ರಿಶ್ಚಿಯನ್ ಶಿಕ್ಷಕಿ ಪಾಠದ ನೆಪದಲ್ಲಿ ಹಿಂದೂ ಧರ್ಮವನ್ನು ಮತ್ತು ದೇಶದ ಪ್ರಧಾನಿಯನ್ನು ಅತ್ಯಂತ ಕೀಳು ಮಟ್ಟದಲ್ಲಿ ಅಪಹಾಸ್ಯ ಮಾಡಿ ಮಕ್ಕಳಲ್ಲಿ ತಪ್ಪು ಸಂದೇಶ ನೀಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಮಕ್ಕಳ ಮೂಲಕ ಈ ವಿಚಾರ ಗಮನಕ್ಕೆ ಬಂದಿದ್ದು ಶಿಕ್ಷಕಿ ಹಾಗೂ ಶಿಕ್ಷಣ ಸಂಸ್ಥೆಯ ವಿರುದ್ಧ ಕ್ರಮ ಜರುಗಿಸುವಂತೆ ದೂರಿನಲ್ಲಿ ಮನವಿ ಮಾಡಿದ್ದಾರೆ. ಶನಿವಾರ ಇದೇ ವಿಚಾರಕ್ಕೆ ಖಾಸಗಿ ಶಾಲೆಯ ಮುಂದೆ ಪೋಷಕರು ಹಾಗೂ ಹಿಂದೂ ಸಂಘಟನೆಯ ಕೆಲವರು ಪ್ರತಿಭಟನೆ ನಡೆಸಿದ್ದರು
ಶಿಕ್ಷಕಿಯನ್ನು ಅಮಾನತು ಮಾಡುವಂತೆಯೂ ಆಗ್ರಹಿಸಿದ್ದರು. ಈ ವೇಳೆ ಘಟನಾ ಸ್ಥಳಕ್ಕೆ ಆಗಮಿಸಿದ್ದ ಐವನ್ ಡಿಸೋಜಾ ಸೋಮವಾರ ಈ ಬಗ್ಗೆ ವಿಚಾರಿಸಿ ಕ್ರಮ ಜರುಗಿಸುವ ಭರವಸೆ ನೀಡಿದ್ದರು. ಇದೀಗ ಹಿಂದೂ ಸಂಘಟನೆಯ ನೇತೃತ್ವದಲ್ಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಸಿದ್ದು ಸೂಕ್ತ ನ್ಯಾಯಕ್ಕೆ ಆಗ್ರಹಿಸಲಾಗಿದೆ.