ಮಂಗಳೂರು.ರಾಜ್ಯದಲ್ಲಿ ಡ್ರಗ್ಸ್ ಮಾಫಿಯಾ ಹೊರ ಬರುತ್ತಿದ್ದಂತೆ ಮಂಗಳೂರು ಪೊಲೀಸರೂ ಡ್ರಗ್ಸ್ ಮಾಫಿಯಾದ ವಿರುದ್ಧ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದಾರೆ. ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿರುವ ಗಾಂಜಾ ಸಾಗಾಟದ ಆರೋಪಿಗಳನ್ನು ಇಂದು ನಗರದ ಪೊಲೀಸ್ ಕವಾಯತ್ ಮೈದಾನದಲ್ಲಿ ಪರೇಡ್ ನಡೆಸಲಾಯಿತು.
ಮಂಗಳೂರು ಹಾಗೂ ಕಾಸರಗೋಡು ಮೂಲದ ನೂರಕ್ಕೂ ಹೆಚ್ಚು ಆರೋಪಿಗಳ ಪರೇಡ್ ನಡೆಸಿದ್ದು,ಪ್ರತೀ ಆರೋಪಿಯನ್ನು ಪೊಲೀಸ್ ಕಮೀಷನರ್ ವಿಕಾಶ್ ಕುಮಾರ್ ವಿಚಾರಣೆ ನಡೆಸಿದರು.ಡ್ರಗ್ಸ್ ಮಾಫಿಯಾದಲ್ಲಿ ತೊಡಗಿಕೊಂಡರೆ ಕಠಿಣ ಕ್ರಮ ಜರುಗಿಸೋದಾಗಿ ಕಮೀಷನರ್ ಆರೋಪಿಗಳಿಗೆ ಎಚ್ಚರಿಕೆ ನೀಡಿದರು.ಇಂದು ಸಂಜೆ ಇದೇ ಮೈದಾನದಲ್ಲಿ ಡ್ರಗ್ಸ್ ವ್ಯಸನಿಗಳ ಪರೇಡನ್ನೂ ಪೊಲೀಸರು ನಡೆಸಲಿದ್ದಾರೆ.
ಈ ಬಗ್ಗೆ ನಗರ ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ಅವರು ಮಾತನಾಡಿ, ಇಂದು ಮಂಗಳೂರು ಕಮಿಷನರೇಟ್ ವ್ಯಾಪ್ತಿಯ ವಿವಿಧ ಠಾಣಾ ವ್ಯಾಪ್ತಿಯಲ್ಲಿ ಗಾಂಜಾ ಸಾಗಾಟದಲ್ಲಿ ಭಾಗಿಯಾಗಿದ್ದವರ ಪರೇಡ್ ನಡೆಸಲಾಗಿದೆ. ಇವರು ಯಾವುದಾದರೂ ಡ್ರಗ್ಸ್ ಸಾಗಾಟ ಹಾಗೂ ಅಪರಾಧ ಕೃತ್ಯದಲ್ಲಿ ಭಾಗಿಯಾಗಿದ್ದಾರೆಯೇ ಎಂದು ತನಿಖೆ ನಡೆಸಲಾಯಿತು ಎಂದರು.
ವಿದೇಶಗಳಿಂದಲೂ ಗಾಂಜಾ ಸರಬರಾಜು ಆಗುತ್ತಿದ್ರೆ, ಆಯಾ ದೇಶಗಳ ಕೇಂದ್ರ ಸಂಘಟಕರೊಂದಿಗೆ ಸಂಪರ್ಕದಲ್ಲಿರುತ್ತೇವೆ. ಕಳೆದ ವರ್ಷ ನಾಲ್ವರ ಮೇಲಿನ ಗುಮಾನಿಯಿಂದ ಪ್ರಸ್ತಾಪ ಕಳಿಸಲಾಗಿದೆ. ಓರ್ವನ ಮೇಲಿನ ಆರೋಪ ಸಾಬೀತು ಆಗಿರುವ ಹಿನ್ನೆಲೆ ಆತನ ಮೇಲೆ ಗೂಂಡಾ ಕಾಯ್ದೆ ಜರುಗಿಸಲಾಗಿದೆ. ಮುಂದಿನ ಒಂದು ತಿಂಗಳ ಅವಧಿಯಲ್ಲಿ ಎಲ್ಲಾ ಆರೋಪಿಗಳ ಮೇಲೆ ಒಂದು ಕಣ್ಣಿಟ್ಟಿರುತ್ತೇವೆ. ಯಾರಾದರೂ ಇಂತಹ ಕೃತ್ಯಗಳಲ್ಲಿ ತೊಡಗಿದ್ದಲ್ಲಿ ತಕ್ಷಣ ಅವರನ್ನು ಜೈಲಿಗಟ್ಟಲಾಗುತ್ತದೆ. ಅಲ್ಲದೇ ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದರು.