ಮಂಗಳೂರು: ತಲಪಾಡಿ ಟೋಲ್ ಗೇಟ್ ನಲ್ಲಿ ಸಿಟಿ ಬಸ್ ಸಂಚಾರ ಕುರಿತು ಸಂಭವಿಸಿದ ವಿವಾದದ ಕುರಿತು ದ.ಕ. ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆದಿದ್ದು, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಸ್ಥಳೀಯರು ಹಾಗೂ ಸಿಟಿ ಬಸ್ಸು ಮಾಲೀಕರ ಸಂಘದವರೊಂದಿಗೆ ಪರಸ್ಪರ ಸಮಾಲೋಚನೆ ನಡೆಸಿದ ಬಳಿಕ ಇನ್ನು ಮುಂದೆ ಎಲ್ಲಾ ಸಿಟಿ ಬಸ್ಸುಗಳು ತಲಪಾಡಿಯನ್ನು ದಾಟಿಕೊಂಡು ಮುಂದಿನ ಬಸ್ಸು ನಿಲ್ದಾಣದಲ್ಲಿ ತಂಗಲು ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಪಾಸ್ ವ್ಯವಸ್ಥೆಗೆ ಅಸ್ತು : ತಲಪಾಡಿ ಟೋಲ್ ಕೇಂದ್ರದಲ್ಲಿ ನಗರದ ಖಾಸಗಿ ಬಸ್ಸುಗಳಿಗೆ ನಿಗದಿಪಡಿಸಿದ ದರದಿಂದ ಜನಸಾಮಾನ್ಯರಿಗೆ ತುಂಬಾ ತೊದರೆಯಾಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ಸಭೆಯಲ್ಲಿ 14,000 ರಷ್ಟು ಅನಿಯಮಿತ ಪಾಸುಗಳನ್ನು ಕೊಡುವುದರ ಬಗ್ಗೆ ಸಭೆಯಲ್ಲಿ ಸೌಹಾರ್ದಯುತವಾಗಿ ನಿರ್ಣಯ ಮಾಡಲಾಯಿತು.
ದಕ್ಷಿಣ ಕನ್ನಡ ಜಿಲ್ಲೆಯಿಂದ ಕೇರಳ ಪ್ರವೇಶಿಸುವ ಗಡಿಭಾಗವಾದ ತಲಪಾಡಿಯಲ್ಲಿ ತಪಾಸಣೆ ಬಿಗಿಗೊಳಿಸಲಾಗಿದೆ. ಕಳೆದ ಒಂದು ವಾರದಿಂದ ತಪಾಸಣೆಯನ್ನು ಬಿಗಿಗೊಳಿಸಲಾಗಿದ್ದು, ಕೊರೋನಾ ಪರೀಕ್ಷೆಯ ನೆಗೆಟಿವ್ ವರದಿ ಹೊಂದಿದ್ದವರಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ.
ಬಿಗಿ ತಪಾಸಣೆಯಿಂದಾಗಿ ನಿತ್ಯ ಪ್ರಯಾಣಿಕರು, ವಿದ್ಯಾರ್ಥಿಗಳು, ಉದ್ಯೋಗಿಗಳಿಗೆ ಹೆಚ್ಚಿನ ಸಮಸ್ಯೆ ಎದುರಿಸುತ್ತಿದ್ದಾರೆ. ತಲಪಾಡಿಯಿಂದ ಮುಂದೆ ಬಸ್ ಪ್ರಯಾಣಕ್ಕೆ ಟೋಲ್ ಬಿಸಿಯೂ ತಟ್ಟಿರುವುದರಿಂದ ಈ ಕುರಿತು ಜನತೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಭೆ ನಡೆಸಿದ್ದರು.