ಮಡಂತ್ಯಾರು: ಇಲ್ಲಿಯ ಯಶವಂತ ನಾಯಕ್ ರವರ ಪುತ್ರ ಮಾಧವ ನಾಯಕ್ ರವರು ಮಾ.6 ರಂದು ತಮ್ಮ ಕಾರಿನಲ್ಲಿ ಮಂಗಳೂರಿಗೆ ಪ್ರಯಾಣಿಸುತ್ತಿರುವ ಸಂದರ್ಭದಲ್ಲಿ, ಕಾರನ್ನು ನಿಲ್ಲಿಸುವಂತೆ ಸೂಚಿಸಿದ ಸಂಚಾರಿ ಪೊಲೀಸರೋರ್ವರು ಕಾರಿನ ಬಾಗಿಲಿಗೆ ಕಪ್ಪು ಬಣ್ಣದ ಪ್ಲಾಸ್ಟಿಕ್ ಇದೆ ಎಂದು 500 ರೂ. ದಂಡ ವಿಧಿಸಿದ್ದರು.

ಮಾಧವ ನಾಯಕ್ ರವರು ಟ್ರಾಫಿಕ್ ಪೊಲೀಸ್ ವಿಧಿಸಿದ ದಂಡವನ್ನು ಪಾವತಿಸಿ, ಅವರಿಂದ ರಶೀದಿ ಸ್ವೀಕರಿಸಿ ಅಲ್ಲಿಂದ ತೆರಳಿದ್ದರು. ನಂತರ ಆ ರಶೀದಿಯನ್ನು ಪರಿಶೀಲಿಸಿದಾಗ ಟ್ರಾಫಿಕ್ ಪೊಲೀಸ್ ಅದರಲ್ಲಿ ಕಾರ್ ನಂಬರ್ ನಮೂದಿಸಿರಲಿಲ್ಲ. ಈ ಬಗ್ಗೆ ಮಂಗಳೂರು ಸಂಚಾರಿ ಪೊಲೀಸ್ ಠಾಣೆಯ ಅಧಿಕಾರಿಗಳ ಗಮನಕ್ಕೆ ತಂದಾಗ, ಅವರು ಇದು ಮಂಗಳೂರು ಸಂಚಾರಿ ಪೊಲೀಸ್ ಠಾಣೆಯ ರಶೀದಿಯಲ್ಲವೆಂದು ತಿಳಿಸಿದ್ದಾರೆ.

ಹಾಗಾದರೆ ರಸ್ತೆ ಬದಿ ನಿಂತು ವಾಹನಗಳಿಗೆ ದಂಡ ವಿಧಿಸಿ ನೀಡಿದ ರಶೀದಿ ನಕಲಿಯಾಗಿದೆಯೇ, ಸಾರ್ವಜನಿಕರಿಗೆ ಹಾಗೂ ಸರಕಾರಕ್ಕೆ ವಂಚಿಸಲಾಗುತ್ತಿದೆಯೇ, ಈ ರೀತಿ ಹಗಲು ದರೋಡೆ ಮಾಡುತ್ತಿರುವವರಿಗೆ ಯಾರು ಹೊಣೆ?

ಇಂತಹ ನಕಲಿ ರಶೀದಿಯನ್ನು ನೀಡುತ್ತಿರುವ ಟ್ರಾಫಿಕ್ ಪೊಲೀಸರನ್ನು ಪತ್ತೆಹಚ್ಚಿ, ಈ ರೀತಿ ಸಾರ್ವಜನಿಕರಿಂದ ಹಣವನ್ನುಪಡೆದು ಸರಕಾರಕ್ಕೆ ವಂಚನೆ ಮಾಡುತ್ತಿರುವವರ ವಿರುದ್ಧ ಸೂಕ್ತ ತನಿಖೆ ನಡೆಸುವಂತೆ ಯಶವಂತ ನಾಯಕ್ ಒತ್ತಾಯಿಸಿದ್ದಾರೆ.









