ಉಳ್ಳಾಲ, (ನ 13): ನಾಲ್ಕು ದಿವಸಗಳ ಹಿಂದೆ ಪಜೀರು ಗೋವನಿತಾಶ್ರಮದಿಂದ ನಾಪತ್ತೆಯಾಗಿದ್ದ ಎರಡು ಮಕ್ಕಳ ತಾಯಿ, ವಿಧವೆ ಮಹಿಳೆಯೊಬ್ಬಳು ಉಳ್ಳಾಲದಲ್ಲಿ ಮಧ್ಯವಯಸ್ಕ ಮುಸ್ಲಿಂ ಪುರುಷನೊಂದಿಗೆ ಪತ್ತೆಯಾಗಿದ್ದು, ಕೊಣಾಜೆ ಪೊಲೀಸರು ಇಬ್ಬರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಮಂಗಳೂರಿನ ಅಡ್ಯಾರ್ ಪದವು ಮೂಲದ ಮಹಿಳೆ ವಿಧವೆಯಾಗಿದ್ದು ಅದೇ ಪರಿಸರದ ನಿವಾಸಿ ಆಗಿರುವ ಶೌಕತ್ ಎಂಬಾತನ ಜೊತೆ ಈ ಹಿಂದೆ ಸಂಪರ್ಕದಲ್ಲಿದ್ದಳು. ಈ ವಿಚಾರ ಅಲ್ಲಿನ ಹಿಂದೂ ಸಂಘಟನೆ ಕಾರ್ಯಕರ್ತರಿಗೆ ತಿಳಿದು ಇತ್ತೀಚೆಗೆ, ಮಹಿಳೆ ಮತ್ತು ಆಕೆಯ ಇಬ್ಬರು ಮಕ್ಕಳನ್ನು ವಿಶ್ವ ಹಿಂದು ಪರಿಷತ್ತಿಗೆ ಸೇರಿದ ಕೊಣಾಜೆ ಬಳಿಯ ಪಜೀರು ಗೋವನಿತಾಶ್ರಮಕ್ಕೆ ಸೇರಿಸಿದ್ದರೆನ್ನಲಾಗಿದೆ. ನಾಲ್ಕು ದಿವಸಗಳ ಹಿಂದೆ ಮಹಿಳೆ ತನ್ನ ಇಬ್ಬರು ಮಕ್ಕಳನ್ನು ಬಿಟ್ಟು ಆಶ್ರಮದಿಂದ ನಾಪತ್ತೆಯಾಗಿದ್ದರು. ಈ ಬಗ್ಗೆ ಕೊಣಾಜೆ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು.
ಗುರುವಾರ ಮಹಿಳೆ, ಉಳ್ಳಾಲದಲ್ಲಿ ಶೌಕತ್ ಜೊತೆ ಬುರ್ಖಾಧಾರಿಯಾಗಿ ಪತ್ತೆಯಾಗಿದ್ದರು ಎನ್ನಲಾಗಿದ್ದು, ತನ್ನ ಹೆಸರನ್ನು ಆಯಿಷಾ ಎಂದು ಬದಲಿಸಿಕೊಂಡಿದ್ದಳು ಎಂಬ ಮಾಹಿತಿ ಹಿನ್ನೆಲೆಯಲ್ಲಿ ಕೊಣಾಜೆ ಪೊಲೀಸರು ಇಬ್ಬರನ್ನೂ ವಶಕ್ಕೆ ತೆಗೆದು ವಿಚಾರಣೆ ನಡೆಸುತ್ತಿದ್ದಾರೆ. ಅಡ್ಯಾರ್ ಮೂಲದವನೇ ಆಗಿರುವ ಶೌಕತ್ ಕೂಡ ವಿವಾಹಿತನಾಗಿದ್ದು ಆತನ ಹಿರಿ ಮಗಳಿಗೆ ಮುಂದಿನ ವಾರ ಮದುವೆ ಫಿಕ್ಸ್ ಆಗಿದ್ಯಂತೆ. ಈ ನಡುವೆಯೇ ಶೌಕತ್, ತನ್ನ ಕುಟುಂಬವನ್ನು ತೊರೆದಿದ್ದಾನೆ ಎನ್ನಲಾಗುತ್ತಿದೆ. ಬೇರೆ ಯುವತಿಯರ ಜೊತೆಗೂ ಆತ ಅಕ್ರಮ ಸಂಬಂಧಗಳನ್ನು ಇರಿಸಿದ್ದಾನೆಂದು ತಿಳಿದು ಬಂದಿದೆ.
ಆದರೆ, ಹಿಂದು ಮಹಿಳೆ ಪೊಲೀಸರಲ್ಲಿ ಶೌಕತ್ ಜೊತೆಯೇ ತೆರಳುವುದಾಗಿ ಪಟ್ಟು ಹಿಡಿದಿದ್ದಾಳೆ. ಬಜರಂಗದಳದ ಕಾರ್ಯಕರ್ತರು ಠಾಣೆಯಲ್ಲಿದ್ದು ಲವ್ ಜಿಹಾದ್ ಶಂಕೆ ವ್ಯಕ್ತಪಡಿಸಿದ್ದಾರೆ. ಮಧ್ಯ ವಯಸ್ಕ ವ್ಯಕ್ತಿಯೇ ಮಹಿಳೆಯನ್ನು ಪುಸಲಾಯಿಸಿ ಮತಾಂತರಿಸಲು ಯತ್ನಿಸಿದ್ದಾನೆಂದು ದೂರಿದ್ದಾರೆ.