ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಮರವೂರು ಸೇತುವೆ ಹಾನಿಗೊಳಗಾಗಲು ಜಿಲ್ಲಾಡಳಿತದ ನಿರ್ಲಕ್ಷ್ಯ ಹಾಗೂ ಮರಳು ಮಾಫಿಯಾವೇ ಪ್ರಮುಖ ಕಾರಣ ಎಂದು ಮಾಜಿ ಸಚಿವ ಅಭಯಚಂದ್ರ ಜೈನ್ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಚಿವ ಅಭಯಚಂದ್ರ ಜೈನ್ ಅವರು, ಜೆಸಿಬಿ ಮೂಲಕ ಸೇತುವೆ ಸುತ್ತಮುತ್ತ ಮರಳು ಮಾಫಿಯಾ ನಡೆಯುತ್ತಿದ್ದು, ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ಈ ಬಗ್ಗೆ ಮೌನ ವಹಿಸಿರುವುದು ಈ ದುರಂತಕ್ಕೆ ಕಾರಣ ಎಂದು ಆರೋಪಿಸಿದರು.
ಸಂಬಂಧಪಟ್ಟ ಅಧಿಕಾರಿಗಳು ಪರ್ಯಾಯ ಸೇತುವೆಯ ನಿರ್ಮಾಣಕ್ಕೆ ಮೊದಲು ಈ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತ ಕ್ರಮ ವಹಿಸಬೇಕಿತ್ತು. ಜಿಲ್ಲಾಧಿಕಾರಿಗಳು ತಾಲೂಕು ಕೇಂದ್ರಗಳ ಅತಿಥಿ ಗೃಹಗಳಲ್ಲಿ ಶಿಬಿರ ನಡೆಸಿ ಸ್ಥಳೀಯ ಸಮಸ್ಯೆಗಳನ್ನು ಅರಿತುಕೊಳ್ಳುತ್ತಿದ್ದು, ಅಂತಹ ವ್ಯವಸ್ಥೆ ಈಗ ಇಲ್ಲ ಎಂದು ಅಭಯಚಂದ್ರ ಜೈನ್ ಅವರು ಹೇಳಿದರು. ಮರವೂರು ಸೇತುವೆಯ ಜತೆಗೆ ಬಹುಗ್ರಾಮ ಕುಡಿಯುವ ನೀರಿಗಾಗಿ ಹಿಂದಿನ ಶಾಸಕರಾದ ವಿಜಯ ಕುಮಾರ್ ಶೆಟ್ಟಿಯವರ ಮುತುವರ್ಜಿಯಲ್ಲಿ ನಿರ್ಮಿಸಲಾದ ಕಿಂಡಿ ಅಣೆಕಟ್ಟಿಗೂ ಅಪಾಯವನ್ನು ತಂದೊಡ್ಡಿದ್ದು, ಜತೆಗೆ ಕೊಂಕಣ ರೈಲ್ವೆಯ ಸೇತುವೆಯೂ ಇಲ್ಲಿ ಹಾದು ಹೋಗುತ್ತಿದ್ದು, ಅದಕ್ಕೂ ಹಾನಿಯಾಗುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದರು.
ಯುವ ಕಾಂಗ್ರೆಸ್ ಮಾಜಿ ಜಿಲ್ಲಾಧ್ಯಕ್ಷ ಮಿಥುನ್ ರೈ , ಸ್ಥಳೀಯ ಬಾಬು ಶೆಟ್ಟಿ, ಮುಖಂಡ ವಿನಯರಾಜ್, ಶಾಲೆಟ್ ಪಿಂಟೋ, ಅನಿಲ್ ಕುಮಾರ್, ಮೆರಿಲ್ ರೇಗೋ, ಸವದ್ ಸುಳ್ಯ, ಸಿರಾಜ್, ಹನೀಫ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.