ಮಂಗಳೂರು: ಹಣತೆ ವ್ಯಾಪಾರಕ್ಕಾಗಿ ನಗರಕ್ಕೆ ಬಂದಿದ್ದ ತಮಿಳುನಾಡು ಮೂಲದ ಮಣ್ಣಿನ ದೀಪ ಮಾರಾಟಗಾರ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ತಮಿಳುನಾಡಿನ ಸೇಲಂ ಮೂಲದ ಮಾಯವೇಳ್ ಪೆರಿಯಸಾಮಿ (52) ಮೃತ ವ್ಯಕ್ತಿ. ಆರೋಪಿ ಹೂವಿನ ಹಡಗಲಿ ಮೂಲದ ರವಿ ಅಲಿಯಾಸ್ ವಕೀಲ ನಾಯ್ಕ (42) ಎಂಬಾತನನ್ನು ಬಂದರು ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಮೃತ ಪೆರಿಯಸಾಮಿ ಮತ್ತು ಅವರ ಪತ್ನಿ ಅಕ್ಟೋಬರ್ 14 ರಂದು ನಗರಕ್ಕೆ ಬಂದು ಅಳಕೆ ಮಾರುಕಟ್ಟೆ ಪ್ರದೇಶದ ಬಳಿ ಮಣ್ಣಿನ ದೀಪಗಳನ್ನು ಮಾರಾಟ ಮಾಡಿಕೊಂಡಿದ್ದರು. ಆರೋಪಿಯೂ ಪೆರಿಯಸಾಮಿ ಬಳಿ ಹಲವು ಬಾರಿ ಮಣ್ಣಿನ ದೀಪ ಖರೀದಿಸಿದ್ದ. ಹಣತೆ ವ್ಯಾಪರದ ನೆಪದಲ್ಲಿ ಪೆರಿಯಸಾಮಿಯನ್ನು ಕುಳೂರು ಮೈದಾನಕ್ಕೆ ಕರೆದೊಯ್ದು ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ. ಇದೇ ವೇಳೆ ಕೊಲೆಯಾದ ಮಾಯವೇಳ್ ಪೆರಿಯಸಾಮಿ ಅವರ ಮೃತ ದೇಹದ ಅವಶೇಷಗಳಾದ ತಲೆಬುರುಡೆ, ಮೂಳೆ ಇತ್ಯಾದಿಗಳು ಕೂಳೂರು ಮೈದಾನದ ಬಳಿ ಪತ್ತೆಯಾಗಿವೆ. ಹಣದ ದುರಾಸೆಗೆ ಆರೋಪಿ ಪೆರಿಯಸಾಮಿಯನ್ನು ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂದರ್ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.