

ಮಂಗಳೂರು: ನೈತಿಕ ಪೊಲೀಸ್ಗಿರಿಯಲ್ಲಿ ಭಾಗಿಯಾಗಿದ್ದ ಬಜರಂಗದಳದ ಮೂವರನ್ನು ಗಡಿಪಾರು ಮಾಡಲು ದಕ್ಷಿಣ ಕನ್ನಡ ಜಿಲ್ಲೆ ಪೊಲೀಸ್ ಇಲಾಖೆ ನಿರ್ಧರಿಸಿದೆ. ಕಾನೂನು ಸುವ್ಯವಸ್ಥೆ ಡಿಸಿಪಿ ಎದುರು ಹಾಜರಾಗಲು ಸೂಚನೆ ನೀಡಲಾಗಿದೆ. ಅಧಿಕೃತವಾಗಿ ಒಂದು ವರ್ಷ ಕಾಲ ಗಡಿಪಾರು ಮಾಡುವ ಸಾಧ್ಯತೆ ಇದೆ.
ಇತ್ತೀಚೆಗೆ ನಡೆದ ಎರಡು ನೈತಿಕ ಪೊಲೀಸ್ ಗಿರಿ ಕೇಸ್ ನಲ್ಲಿ ಮೂವರು ಭಾಗಿಯಾಗಿದ್ದು, ಸುಲ್ತಾನ್ ಜ್ಯುವೆಲ್ಲರಿ ಹಾಗೂ ಮರೋಳಿ ಹೋಳಿ ಆಚರಣೆ ವೇಳೆ ನೈತಿಕ ಪೊಲೀಸ್ ಗಿರಿ ನಡೆಸಿದ ವಿಚಾರವಾಗಿ ಸ್ಥಳೀಯ ಠಾಣೆಗಳ ಇನ್ಸ್ಪೆಕ್ಟರ್ ಗಳಿಂದ ಗಡಿಪಾರಿಗೆ ವರದಿ ನೀಡಿರುವುದರಿಂದ ಅಧಿಕೃತವಾಗಿ ಕಾನೂನು ಪ್ರಕಾರ ಗಡಿಪಾರು ಅಸ್ತ್ರ ಪ್ರಯೋಗ ಮಾಡಲಾಗಿದೆ. ಇದೀಗ ನೋಟೀಸ್ ನೀಡಿ ಗಡಿಪಾರು ಪ್ರಕ್ರಿಯೆಗೆ ಚಾಲನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಈ ವಿಚಾರವಾಗಿ ಮಂಗಳೂರು ಪೊಲೀಸ್ ಕಮಿಷನರ್ ಕುಲದೀಪ್ ಜೈನ್ ಮಾತನಾಡಿ ನಮ್ಮ ನಗರದಲ್ಲಿ ಪದೇ ಪದೇ ಕ್ರೈಂನಲ್ಲಿ ಭಾಗಿಯಾದವರ ಮೇಲೆ ಕ್ರಮ ಆಗಿದೆ. ಮತ್ತೆ ಮತ್ತೆ ಕ್ರೈಂ ಮಾಡಿದವರ ಮೇಲೆ ಕ್ರಮ ತೆಗೆದುಕೊಳ್ಳುವ ಕೆಲಸ ಆಗುತ್ತಿದೆ. ಅಪರಾಧ ಕೃತ್ಯಗಳಲ್ಲಿ ತೊಡಗಿದವರು ನಮಗೆ ಅವರು ಆರೋಪಿಗಳು ಅಷ್ಟೇ. ಅವರು ಯಾವ ಸಂಘಟನೆಯವರು, ಅವರ ಹಿನ್ನೆಲೆಯೇನು ನಮಗೆ ಗೊತ್ತಿಲ್ಲ. ಪದೇ ಪದೇ ಅಪರಾಧ ಕೃತ್ಯಗಳಲ್ಲಿ ತೊಡಗಿಸಿಕೊಂಡವರ ವಿರುದ್ಧ ಕ್ರಮ ಜರುಗಿಸುತ್ತಿದ್ದೇವೆ. ನೈತಿಕ ಪೊಲೀಸ್ ಪ್ರಕರಣದಲ್ಲಿ ಭಾಗಿಯಾಗಿದ್ದ ಮೂವರ ಮೇಲೆ ಪ್ರಸ್ತಾವನೆ ಬಂದಿದೆ. ಹೀಗಾಗಿ ಒಂದು ವರ್ಷದಲ್ಲಿ 60 ಮಂದಿಯನ್ನು ಗಡೀಪಾರು ಮಾಡಲು ಪಟ್ಟಿ ಮಾಡಿದ್ದೇವೆ. ಆ ಪೈಕಿ ಹಲವು ಸಂಘಟನೆಯವರು ಇರಬಹುದು. ಇಂಥವರ ವಿರುದ್ಧ ರೌಡಿ ಶೀಟ್ ತೆರೆಯೋದು, ಗೂಂಡಾ ಕಾಯ್ದೆ ಹೇರುವ ಪ್ರಕ್ರಿಯೆಯೂ ಆಗಲಿದೆ. ಜಿಲ್ಲೆಯ ಶಾಂತಿ ಕಾಪಾಡುವ ದೃಷ್ಟಿಯಿಂದ ಈ ರೀತಿಯ ಕ್ರಮ ಯಾವಾಗಲೂ ನಡೆಸುತ್ತೇವೆ ಎಂದು ತಿಳಿಸಿದ್ದಾರೆ.