ಮಂಗಳೂರು: ನೀರುಮಾರ್ಗ ಸುಬ್ರಹ್ಮಣ್ಯ ಭಜನಾ ಮಂದಿರ ಸಮೀಪ ಸ್ಕಂದಶ್ರೀ ಸೇವಾ ಸಮಿತಿಯ ದಶಮಾನೋತ್ಸವ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮವನ್ನು ಉಡುಪಿಯ ಉಜ್ಜಲ್ ಗ್ರೂಪ್ ಆಫ್ ಕಂಪನೀಸ್ನ ಮ್ಯಾನೇಜಿಂಗ್ ಡೈರೆಕ್ಟರ್ ಅಜಯ್ ಪಿ. ಶೆಟ್ಟಿ ಉದ್ಘಾಟಿಸಿದರು. ಸತೀಶ್ ಶೆಟ್ಟಿ ಮೂಡುಜಪುಗುತ್ತು ಸಭಾಧ್ಯಕ್ಷತೆ ವಹಿಸಿದರು. ಹಿರಿಯ ಪತ್ರಕರ್ತ ವಿಜಯ್ ಕೋಟ್ಯಾನ್ ಪಡು, ಕುಸುಮ ಟ್ರಾವೆಲ್ಸ್ ಮಾಲಕ ಸತ್ಯರಾಜ್ ಶೆಟ್ಟಿ ಸುಬ್ರಹ್ಮಣ್ಯ ಭಜನಾ ಮಂಡಳಿಯ ಅಧ್ಯಕ್ಷ ಶೇಷಾದ್ರಿ ಭಟ್, ಸ್ಕಂದ ಸೇವಾ ಸಮಿತಿ ಅಧ್ಯಕ್ಷ ಕೇಶವ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಹುಬ್ಬಳಿಯ ಸಾಮಾಜಿಕ ಕಾರ್ಯಕರ್ತ ಕಿರಣ ರಾಮ್ ಮಾತನಾಡಿ ಭವ್ಯ ಭಾರತದ ನೈಜ ಇತಿಹಾಸ ಮತ್ತು ಈ ನೆಲದ ಸಂಸ್ಕೃತಿಯನ್ನು ಮುಂದಿನ ಪೀಳಿಗೆಯ ಮಕ್ಕಳಿಗೆ ತಿಳಿಹೇಳುವ ಕೆಲಸವಾದಾಗ ಈ ನೆಲದ ಅಸ್ಮಿತೆ ಉಳಿಸಲು ಸಾಧ್ಯ. ಭಾರತದಲ್ಲಿ ಜನಿಸಿದ ನಾವೆಲ್ಲರೂ ಧನ್ಯರು, ಭಾಗ್ಯವಂತರು ಎಂದು ಹೇಳಿದರು. ನೀರುಮಾರ್ಗ ಸ್ಕಂದಶ್ರೀ ಸೇವಾ ಸಮಿತಿ ಸಾಂಸ್ಕೃತಿಕ, ಧಾರ್ಮಿಕ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಮಾಡುತ್ತಿರುವ ಸಾಮಾಜಿಕ ಕಾರ್ಯ ಶ್ಲಾಘನೀಯವಾಗಿದೆ. ಗ್ರಾಮ ಗ್ರಾಮದಲ್ಲಿ ಈ ರೀತಿ ಸಂಘಟನಾತ್ಮಕ ಕೆಲಸಗಳು ಆದಾಗ ಸಮೃದ್ದ ನಾಡು ನಿರ್ಮಾಣ ಸಾಧ್ಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಯೋಧರು ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಸಾಧನೆಗೈದವರಿಗೆ ಸನ್ಮಾನ ಕಾರ್ಯಕ್ರಮ ಜರುಗಿತು. ಜಗದೀಶ್ ಐತಾಳ್ ಸುರತ್ಕಲ್ ಅವರ ನೇತೃತ್ವದಲ್ಲಿ ಸಾರ್ವಜನಿಕ ಶನೈಶ್ಚರ ಪೂಜೆ ನಡೆಯಿತು.
ಹರೀಶ್ ನೀರುಮಾರ್ಗ ಸ್ವಾಗತಿಸಿ ಶ್ರೀದೇವಿ ನೀರುಮಾರ್ಗ ವರದಿ ವಾಚಿಸಿದರು. ಪ್ರಮೀಳಾ ತಾರನಾಥ ಸನ್ಮಾನ ಪಾತ್ರ ವಾಚಿಸಿದರು. ಜ್ಯೋತಿಲಕ್ಷ್ಮಿವಿನೋದ್ ವಂದಿಸಿದರು. ಕೀರ್ತಿರಾಜ್ ಪಡು ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ, ಪರಮಾತ್ಮ ಪಂಜುರ್ಲಿ ನಾಟಕ ಪ್ರದರ್ಶನ ನಡೆಯಿತು.