ಮಂಗಳೂರು: ನಗರದ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆಸಿದ್ದ 13 ದೇವಸ್ಥಾನ ಹಾಗೂ 7 ಮನೆ ಕಳ್ಳತನಕ್ಕೆ ಸಂಬಂಧಿಸಿದಂತೆ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ 4 ಮಂದಿ ಆರೋಪಿಗಳನ್ನು ಸುರತ್ಕಲ್ ಪೊಲೀಸರು ಮತ್ತು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ತರೀಕೆರೆ ಚಿಕ್ಕಮಗಳೂರಿನ ನಾಗಾ ನಾಯ್ಕ (55) ಮತ್ತು ದಾವಣಗೆರೆಯ ಮಾರುತಿ ಸಿ ವಿ (33) ಎಂದು ಗುರುತಿಸಲಾಗಿದ್ದು ಡಿ. 3 ರಂದು ಸೆರೆ ಹಿಡಿಯಲಾಗಿದೆ. 2018 – 2021 ರ ನಡುವೆ ಸುಮಾರು 13 ದೇವಸ್ಥಾನ ಹಾಗೂ 3 ಮನೆ ಕಳ್ಳತನದಲ್ಲಿ ಭಾಗಿಯಾಗಿದ್ದಾರೆ.
ನಾಗಾನಾಯಕ್ ಉರ್ವ, ಬಜ್ಪೆ, ಸುರತ್ಕಲ್, ಮೂಲ್ಕಿ, ಪಣಂಬೂರು, ಕಾವೂರು, ಉಳ್ಳಾಲ ಸೇರಿದಂತೆ ಹಲವು ಪ್ರಕರಣಗಳಲ್ಲಿ ಬೇಕಾಗಿದ್ದ.ಈತನ ವಿರುದ್ಧ ಇತರ ಜಿಲ್ಲೆಗಳಲ್ಲೂ ಹಲವು ಪ್ರಕರಣಗಳು ದಾಖಲಾಗಿವೆ.
ಈತ ನಗರದ ಮೈದಾನಗಳಲ್ಲಿ ವಾಸವಿದ್ದು. ಹಗಲು ಹೊತ್ತಿನಲ್ಲಿ ಒಂಟಿ ಮನೆಗಳನ್ನು, ದೇವಸ್ಥಾನಗಳನ್ನು ಟಾರ್ಗೇಟ್ ಮಾಡಿ ರಾತ್ರಿ ಕಳ್ಳತನ ಮಾಡಿ ನಂತರ ತನ್ನ ಊರಿಗೆ ಹೋಗಿ ಮತ್ತೋರ್ವ ಆರೋಪಿ ಮಾರುತಿಯ ಜುವಲ್ಲರಿ ಶಾಪ್ ನಲ್ಲಿ ಮಾರಾಟ ಮಾಡುತ್ತಿದ್ದ.
ಆರೋಪಿ ಮಾರುತಿಯು ಈ ಹಿಂದೆ ಆಟೋ ಚಾಲಕನಾಗಿ ಕೆಲಸ ಮಾಡುತ್ತಿದ್ದು, ನಾಗನಾಯ್ಕನ ಜೊತೆ ಸೇರಿ ಸ್ವಂತ ಜುವೆಲ್ಲರಿ ನಡೆಸುತ್ತಿದ್ದ. ಸದ್ಯ ಮಾರುತಿಯನ್ನು ಪೊಲೀಸರು ಬಂಧಿಸಿದ್ದು, 18 ಲಕ್ಷ ರೂ ಮೌಲ್ಯದ 406 ಗ್ರಾಂ ಚಿನ್ನಾಭರಣ ಮತ್ತು 10.40 ಲಕ್ಷ ರೂ ಮೌಲ್ಯದ 6 ಕೆಜಿ ಬೆಳ್ಳಿ ವಸ್ತುಗಳನ್ನು ಬೆಳ್ಳಿ ಆಭರಣಗಳನ್ನು ವಶಕ್ಕೆ ಪಡೆದಿದ್ದಾರೆ.
ಮತ್ತೊಂದು ಪ್ರಕರಣ:
2021ರಲ್ಲಿ ಕುಳಾಯಿ, ಕಾನ, ಹೊಸಬೆಟ್ಟು ಮತ್ತು ಕಡಂಬೋಡಿಯಲ್ಲಿ ನಡೆದ ನಾಲ್ಕು ಮನೆ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಒಬ್ಬನನ್ನು ಸುರತ್ಕಲ್ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಕೊಯಮತ್ತೂರಿನ ರಾಜನ್ ಚಿನ್ನ ತಂಬಿ (57) ಮತ್ತು ಪಿ ಬಿ ಪ್ರಮೋದ್ ಎಂದು ಗುರುತಿಸಲಾಗಿದೆ. ಆರೋಪಿಯಿಂದ 16,50,000 ಮೌಲ್ಯದ ಒಟ್ಟು 366.632 ಗ್ರಾಂ ವಶಪಡಿಸಿಕೊಳ್ಳಲಾಗಿದೆ.
ಕದ್ದ ಚಿನ್ನಾಭರಣಗಳನ್ನು ರಾಜನ್ ಚಿನ್ನ ತಂಬಿ ಬೆಂಗಳೂರಿನ ಪಿ ಬಿ ಪ್ರಮೋದ್ ನಡೆಸುತ್ತಿದ್ದ ಲಕ್ಷ್ಮೀ ಕೇರಳ ಮೆಸ್ ನ ರೂಂ ನಲ್ಲಿ ಇರಿಸಿದ್ದ. ರಾಜನ್ ಚಿನ್ನಾ ಹಲವು ಅಂತಾರಾಜ್ಯ ಪ್ರಕರಣಗಳಲ್ಲಿ ಬೇಕಾಗಿದ್ದು, ಆತನ ಮೇಲೆ ತಮಿಳುನಾಡು, ಕೇರಳ ಮತ್ತು ಕರ್ನಾಟಕದಲ್ಲಿ ಪ್ರಕರಣಗಳಿವೆ.