ಮಂಗಳೂರು: ಇತ್ತೀಚಿನ ದಿನಗಳಲ್ಲಿ ಮಂಗಳೂರು ಪೊಲೀಸರು ದೇಹ ಕರಗಿಸಿದ್ದೇ ಕಮ್ಮಿ. ಬೊಜ್ಜು ಹೊಟ್ಟೆ ಬೆಳೆಸಿರುವ ಪೊಲೀಸರ ದೇಹ ಗಾತ್ರದಲ್ಲೂ ಗಣನೀಯ ಏರಿಕೆ ಕಾಣುವಂತಾಗಿತ್ತು. ಇದರಿಂದ ಅವರ ಕರ್ತವ್ಯ ನಿರ್ವಹಣೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿತ್ತು.
ಇದೀಗ ಮಂಗಳೂರು ಪೊಲೀಸ್ ಆಯುಕ್ತ ಶಶಿಕುಮಾರ್ ಅವರ ವಿಶೇಷ ಕಾಳಜಿಯಿಂದಾಗಿ ಮಂಗಳೂರು ಪೊಲೀಸರು ಫಿಟ್ನೆಸ್ ನತ್ತ ಹೆಚ್ಚು ಗಮನ ಹರಿಸುವಂತೆ ಆಗಿದೆ. ಆಯ್ದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ನಗರದ ಫಾದರ್ ಮುಲ್ಲರ್ ಸಂಸ್ಥೆಯ ಆಶ್ರಯದಲ್ಲಿ ವಿಶೇಷ ಫಿಟ್ನೆಸ್ ಕಾರ್ಯಕ್ರಮ ನಡೆಯಿತು.
ಒಂದು ತಿಂಗಳ ಕಾಲ ದಢೂತಿ ಪೊಲೀಸರು ದೇಹ ದಂಡಿಸಿ ಸಣಕಲು ಆಗಲಿದ್ದಾರೆ. ಜೊತೆಗೆ ಅವರ ಕರ್ತವ್ಯ ಕ್ಷಮತೆಯಲ್ಲೂ ಗಣನೀಯ ಪ್ರಗತಿ ಕಂಡುಬರಲಿದೆ.ಫಿಟ್ನೆಸ್ ಕಾರ್ಯಕ್ಕೆ ಕಂಬಳ ವೀರ ಶ್ರೀನಿವಾಸ್ ಗೌಡ, ಒಂದು ಮೊಟ್ಟೆಯ ಕಥೆ ಖ್ಯಾತಿಯ ನಟ ನಿರ್ದೇಶಕ ರಾಜ್ ಬಿ ಶೆಟ್ಟಿ, ಯೋಗ ಶಿಕ್ಷಕಿ ಮೈತ್ರಿ ಮಲ್ಲಿ, ಪತಂಜಲಿ ಸಂಸ್ಥೆಯ ಡಾ. ಜ್ಞಾನೇಶ್ವರ್ ಮತ್ತು ಆಟಂ ಫಿಟ್ನೆಸ್ ಗ್ರೂಪ್ನ ಮೊಹಿತ್ ಮಲ್ಲಿ ಅತಿಥಿಗಳಾಗಿ ಆಗಮಿಸಿದ್ದರು.