ಮಂಗಳೂರು: ಹುಲಿವೇಷಧಾರಿಯೊಬ್ಬ ಹುಲಿವೇಷ ಕುಣಿತದ ವೇಳೆ ಆಯ ತಪ್ಪಿ ಬಿದ್ದು ಗಾಯಗೊಂಡ ಘಟನೆ ಮಂಗಳೂರಿನ ಮಂಗಳಾದೇವಿ ದೇವಸ್ಥಾನದ ವಠಾರದಲ್ಲಿ ನಡೆದಿದೆ.
ದೇವರ ಎದುರು ಹುಲಿವೇಷ ಧರಿಸಿ ಪ್ರದರ್ಶನದ ವೇಳೆ ಘಟನೆ ನಡೆದಿದ್ದು, ಮುಳಿಹಿತ್ಲು ಎಂಬಲ್ಲಿನ ಹುಲಿವೇಷ ತಂಡದ ಕುಣಿತದ ವೇಳೆ ದುರ್ಘಟನೆ ನಡೆದಿದೆ. ಹುಲಿವೇಷಧಾರಿಯೊಬ್ಬರು ಕಸರತ್ತು ಪ್ರದರ್ಶನದ ವೇಳೆ ರಿವರ್ಸ್ ಪಲ್ಟಿ ಹೊಡೆಯುತ್ತಿದ್ದರು. ಈ ವೇಳೆ ಆಯ ತಪ್ಪಿ ತಲೆ ನೆಲಕ್ಕೆ ಬಡಿದು ಅನಾಹುತ ನಡೆದಿದೆ. ತಲೆ ನೆಲಕ್ಕೆ ಬಡಿದು ಕತ್ತು ಉಳುಕಿದ ಪರಿಣಾಮ ಹುಲಿವೇಷಧಾರಿಗೆ ಗಾಯವಾಗಿದ್ದು, ತಕ್ಷಣ ಆಸ್ಪತ್ರೆಗೆ ದಾಖಲಿಸಿ ಹುಲಿವೇಷಧಾರಿ ಯುವಕನಿಗೆ ಚಿಕಿತ್ಸೆ ನೀಡಲಾಗಿದೆ. ಸದ್ಯ ಸಣ್ಣ ಗಾಯಗಳೊಂದಿಗೆ ಅಪಾಯದಿಂದ ಯುವಕ ಪಾರಾಗಿದ್ದಾನೆ. ನಿರಂತರ ಅಭ್ಯಾಸದ ಜೊತೆಗೆ ಹಲವು ವರ್ಷಗಳಿಂದ ಹುಲಿವೇಷ ಕಸರತ್ತು ನಡೆಸಲಾಗುತ್ತದೆ. ಹರಕೆಯ ಕಾರಣಕ್ಕೆ ಮಂಗಳಾದೇವಿ ದೇವರ ಎದುರು ಕಸರತ್ತು ನಡೆಸುವುದು ಹಾಗೂ ನವರಾತ್ರಿ ಹಿನ್ನೆಲೆ ಹುಲಿವೇಷ ಧರಿಸಿ ಕುಣಿತ ಮತ್ತು ಕಸರತ್ತು ಪ್ರದರ್ಶಿಸುವ ಸಂಪ್ರದಾಯ ಇದೆ.