ಮಂಗಳೂರು: ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಕಳ್ಳಸಾಗಣೆಯಾಗುತ್ತಿದ್ದ ₹ 1.69 ಕೋಟಿ ಮೌಲ್ಯದ ಒಟ್ಟು 306.21 ಕ್ಯಾರೆಟ್ ವಜ್ರಗಳನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಅಕ್ರಮವಾಗಿ ವಜ್ರದ ಹರಳುಗಳನ್ನು ವಿದೇಶಕ್ಕೆ ಸಾಗಿಸಲು ಯತ್ನಿಸಿದ್ದ ವ್ಯಕ್ತಿಯನ್ನು ಸಿಐಎಸ್ಎಫ್ (CISF) ಅಧಿಕಾರಿಗಳು ಬಂಧಿಸಿದ್ದಾರೆ. ಕೇರಳದ ಕಾಸರಗೋಡು ನಿವಾಸಿಯಾಗಿರುವ ವ್ಯಕ್ತಿ ದುಬೈಗೆ ತೆರಳಲು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದನು.
ಈ ವೇಳೆ ಪ್ರಯಾಣಿಕನ ಅನುಮನಾಸ್ಪದ ವರ್ತನೆ ಕಂಡು CISF ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ. ಸಿಐಎಸ್ಎಫ್ ಸಿಬ್ಬಂದಿ ತಪಾಸಣೆ ನಡೆಸುವಾಗ ಆತನ ಪ್ಯಾಂಟ್ ಒಳಗೆ ಒಳ ಉಡುಪಿನಲ್ಲಿ ಬಚ್ಚಿಟ್ಟಿದ್ದ ಎರಡು ಪೊಟ್ಟಣಗಳಲ್ಲಿ ಹರಳುಗಳಿದ್ದುದು ಕಂಡುಬಂದಿದೆ. ಆ ಎರಡು ಪೊಟ್ಟಣಗಳನ್ನು ವಶಕ್ಕೆ ಪಡೆದು ಪರಿಶೀಲಿಸಿದಾಗ ಅದರೊಳಗೆ 13 ಸಣ್ಣ ಪೊಟ್ಟಣಗಳಲ್ಲಿ ವಜ್ರದ ಹರಳುಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದುದು ಪತ್ತೆಯಾಗಿತ್ತು. ಭದ್ರತಾ ಸಿಬ್ಬಂದಿ ಕಾಸರಗೋಡಿನ ಆ ಪ್ರಯಾಣಿಕನನ್ನು ವಶಕ್ಕೆ ಪಡೆದು, ಕಸ್ಟಮ್ಸ್ ಅಧಿಕಾರಿಗಳ ಸುಪರ್ದಿಗೆ ಒಪ್ಪಿಸಿದ್ದರು.
https://twitter.com/blrcustoms/status/1662488909329342465?s=20
ಆರೋಪಿಯನ್ನು ಬಂಧಿಸಿದ ಕಸ್ಟಮ್ಸ್ ಅಧಿಕಾರಿಗಳು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದಾರೆ. ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ಕಸ್ಟಮ್ಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.