Monday, June 15, 2026
spot_imgspot_img
spot_imgspot_img

ಮಂಗಳೂರು: ಬಹುಕೋಟಿ ವಂಚನಾ ಜಾಲ ಪತ್ತೆ; 10 ವರ್ಷಗಳಲ್ಲಿ 200 ಕೋಟಿಗೂ ಅಧಿಕ ವಂಚನೆ..!

- Advertisement -
- Advertisement -

ಐಷಾರಾಮಿ ಮನೆಯಲ್ಲಿ ಅಡಗುತಾಣದಲ್ಲಿ ತಲೆ ಮರೆಸಿ ಕೊಂಡಿದ್ದ ಆರೋಪಿ ರೋಹನ್ ಸಾಲ್ದನ ಬಂಧನ..!

ಮಂಗಳೂರು: ಮಹತ್ವದ ಕಾರ್ಯಾಚರಣೆಯಲ್ಲಿ ಮಂಗಳೂರು ಪೊಲೀಸರು ಶ್ರೀಮಂತರು ಮತ್ತು ಬೇರೆ ಬೇರೆ ನಗರಗಳ ಉದ್ಯಮಿಗಳನ್ನೇ ಗುರಿಯಾಗಿಸಿ ದೇಶಾದ್ಯಂತ ನೆಟ್ವರ್ಕ್ ಇಟ್ಟುಕೊಂಡು ಭಾರೀ ವಂಚನಾ ಜಾಲ ಎಸಗುತ್ತಿದ್ದ ಕತರ್ನಾಕ್ ಆರೋಪಿಯನ್ನು ಬಂಧಿಸಲಾಗಿದೆ. ಪೊಲೀಸರ ಮಾಹಿತಿ ಪ್ರಕಾರ, ಹತ್ತು ವರ್ಷಗಳಲ್ಲಿ ಇನ್ನೂರು ಕೋಟಿಗೂ ಅಧಿಕ ವಂಚನೆ ಎಸಗಿದ ಜಾಲ ಎನ್ನಲಾಗುತ್ತಿದ್ದು ಪ್ರಮುಖ ಆರೋಪಿ ರೊನಾಲ್ಡ್ ಸಲ್ದಾನನ್ನು ಜಪ್ಪಿನಮೊಗರಿನ ಮನೆಯಿಂದಲೇ ಸೆರೆ ಹಿಡಿದಿದ್ದಾರೆ.

ಮಂಗಳೂರಿನ ಸಿಇಎನ್ ಠಾಣೆಯಲ್ಲಿ ಇತ್ತೀಚೆಗೆ ಎರಡು ವಂಚನೆ ಪ್ರಕರಣ ದಾಖಲಾಗಿದ್ದು ಇದಕ್ಕೆ ಸಂಬಂಧಿಸಿ 20ಕ್ಕೂ ಹೆಚ್ಚು ಸೈಬರ್ ಠಾಣೆ ಪೊಲೀಸರು ಗುರುವಾರ ರಾತ್ರಿ ಮಹತ್ತರ ಕಾರ್ಯಾಚರಣೆ ನಡೆಸಿದ್ದರು. ಆರೋಪಿ ಜಪ್ಪಿನಮೊಗರು ಬಳಿಯ ತಂದೊಳಿಗೆ ಎಂಬಲ್ಲಿ ದುಬಾಯ್ಸ್ ಹೆಸರಿನ ಐಷಾರಾಮಿ ಮನೆಯಲ್ಲಿ ಇದ್ದಾಗಲೇ ಮಿಂಚಿನ ಕಾರ್ಯಾಚರಣೆ ನಡೆಸಿ ಸೆರೆಹಿಡಿದಿದ್ದಾರೆ. ದುಬಾಯ್ಸ್ ರೊನಾಲ್ಡ್ ಸಲ್ದಾನ (42) ಬಂಧಿತ ಆರೋಪಿಯಾಗಿದ್ದು ಆತನ ಜೊತೆಗಿದ್ದ ಇನ್ನೊಬ್ಬ ಸಹಚರನನ್ನೂ ಬಂಧಿಸಲಾಗಿದೆ.

ದೇಶದ ಪ್ರಮುಖ ನಗರಗಳಲ್ಲಿ ಏಜಂಟರನ್ನು ಇಟ್ಟುಕೊಂಡಿದ್ದು ದೊಡ್ಡ ಬಿಸಿನೆಸ್ ಮಾಡುವವರನ್ನು ದೊಡ್ಡ ಮೊತ್ತದ ಸಾಲ ಕೊಡಿಸುವುದಾಗಿ ಬಲೆಗೆ ಹಾಕುತ್ತಿದ್ದ. ನೂರು ಕೋಟಿ ಸಾಲವನ್ನು ಕೇವಲ 3ರಿಂದ ನಾಲ್ಕು ಪರ್ಸೆಂಟ್ ಬಡ್ಡಿಗೆ ಕೊಡುವುದಾಗಿ ಹೇಳಿ ಡೀಲ್ ಕುದುರಿಸುತ್ತಾನೆ. ಇದಕ್ಕಾಗಿ ಮಂಗಳೂರಿನ ಜಪ್ಪಿನಮೊಗರಿನಲ್ಲಿ ಐಷಾರಾಮಿ ಮನೆ ಮಾಡಿಕೊಂಡಿದ್ದು ಅಲ್ಲಿಂದಲೇ ವ್ಯವಹಾರ ಮಾಡುತ್ತಿದ್ದ. ಡೀಲ್ ಒಪ್ಪಿಕೊಂಡು ಮನೆಗೆ ಬಂದವರಿಗೆ ಭಾರೀ ಆತಿಥ್ಯವನ್ನೂ ಕೊಡಿಸುತ್ತಿದ್ದ

ಮನೆಯಲ್ಲೇ ಹೈಫೈ ಬಾರ್ ಅಂಡ್ ರೆಸ್ಟೋರೆಂಟ್ ರೀತಿ ಮಾಡಿಕೊಂಡಿದ್ದು ಬಂದವರ ಮುಂದೆ ತಾನೊಬ್ಬ ಆಗರ್ಭ ಶ್ರೀಮಂತ ಎಂದು ಪೋಸು ಕೊಡುತ್ತಿದ್ದ. ಅಲ್ಲದೆ, ಕುಡಿಯಲು ವಿದೇಶಿ ಮದ್ಯ ಮತ್ತು ಮಜಾ ಮಾಡಲು ಮಲೇಶ್ಯನ್ ಯುವತಿಯರನ್ನೂ ಇಟ್ಟುಕೊಂಡಿದ್ದ. ಮನೆಯ ಒಳಗೆಲ್ಲ ವಿದೇಶಿ ಬ್ರಾಂಡಿನ ಬಾಟಲಿಗಳಿದ್ದು ಬಂಗಾರದ ಬಣ್ಣದ ಮೂರ್ತಿಗಳು, ಆಕರ್ಷಕ ಚಿತ್ತಾರಗಳು ನೋಡಿದರೆ ಅವಾಕ್ಕಾಗೋ ರೀತಿ ಮಾಡಿಕೊಂಡಿದ್ದ. ಡೀಲ್ ಕುದುರಿಸಿದ ಬಳಿಕ ಹಣ ನೀಡುವುದಕ್ಕು ಮೊದಲು ಅಗ್ರಿಮೆಂಟ್ ಮಾಡೋದಕ್ಕೆ ಸ್ಟಾಂಪ್ ಪೇಪ‌ರ್ ಮೊತ್ತ ಕೇಳುತ್ತಾನೆ. ನೂರು ಕೋಟಿಗೆ ಸ್ಟಾಂಪ್ ಪೇಪರ್ ಮೊತ್ತ ನಾಲ್ಕು ಕೋಟಿ ಆಗುತ್ತೆ ಅಲ್ಲಿಗೆ ಡೀಲ್ ಚುಕ್ತಾ ಎಂದು ಭರವಸೆ ನೀಡುತ್ತಾನೆ. ಹೇಗೂ ನೂರು ಕೋಟಿ ಕೈಗೆ ಸಿಗುತ್ತಲ್ವಾ ಎಂದುಕೊಂಡು ನಾಲ್ಕು ಕೋಟಿ ಕೊಟ್ಟುಬಿಡುತ್ತಾರೆ.

ನಾಲ್ಕು ಕೋಟಿಯಷ್ಟು ನಗದು ಮೊತ್ತ ಸಿಕ್ಕೊಡನೆ ನೂರು ಕೋಟಿ ನಗದು ರೆಡಿ ಮಾಡ್ತೀನಿ, ಒಂದೆರಡು ದಿನ ಟೈಮ್ ಕೊಡಿ ಎಂದು ಹೇಳಿ ಕಾಲ ತಳ್ಳುತ್ತಾನೆ. ಅಲ್ಲಿಂದಲೇ ಫೋನ್ ಸ್ವಿಚ್ ಮಾಡಿಕೊಂಡು ನಾಪತ್ತೆ ಆಗುತ್ತಾನೆ. ಬೇರೆ ರಾಜ್ಯಗಳಿಂದ, ಬೇರೆ ಬೇರೆ ನಗರಗಳಿಂದ ದೊಡ್ಡ ಸಾಲಕ್ಕಾಗಿ ಬಂದಿದ್ದವರು ಮಿಕಗಳಾಗಿ ಬಿಡುತ್ತಾರೆ. ನಗದು ರೂಪದಲ್ಲಿ ಕೊಟ್ಟಿದ್ದರಿಂದ ಹೆಚ್ಚಿನವರು ಕೇಸು ಕೊಡದೇ ಹೋಗಿದ್ದು ಜಾಸ್ತಿಯಂತೆ. ಸದ್ಯಕ್ಕೆ ಮಂಗಳೂರಿನಲ್ಲಿ ಎರಡು ಕೇಸು, ಚಿತ್ರದುರ್ಗದ ಮೂಲದ ಒಬ್ಬರಿಗೆ ಮತ್ತೊಂದು ವಂಚನೆ, ಮುಂಬೈನಲ್ಲಿ ಇನ್ನೊಂದು ಕೇಸು ದಾಖಲಾಗಿದೆ.

ಮನೆಯ ಹೊರಗಡೆ ರಿಮೋಟ್ ಆಧರಿತ ದೊಡ್ಡ ಗೇಟ್ ಅಳವಡಿಸಿದ್ದು ಯಾರಿಗೂ ಒಳಗಡೆ ಬರಲು ಆಗದಂತೆ ಮಾಡಿಕೊಂಡಿದ್ದ. ಪೊಲೀಸರು ಬಂದಾಗಲೂ ಗೇಟ್ ತೆರೆಯದೆ ಒಳಗಡೆ ಇದ್ದ. ಹೀಗಾಗಿ ಹತ್ತಡಿ ಎತ್ತರದ ಗೇಟ್ ಒಳಗೆ ಹಾರಿ ಪೊಲೀಸರು ಎಂಟ್ರಿ ಕೊಟ್ಟಿದ್ದು ಈ ವೇಳೆ ಮಲೇಶಿಯಾ ಯುವತಿ ಜೊತೆಗೆ ಕುಳಿತು ರೊನಾಲ್ಡ್ ಬಿಯರ್ ಹೀರುತ್ತಿದ್ದ. ಪೊಲೀಸರು ಗ್ಲಾಸ್ ಚೇಂಬರ್ ಒಡೆದುಕೊಂಡೇ ಒಳಗೆ ನುಗ್ಗಿದ್ದು ಈ ವೇಳೆ ಓರ್ವ ಹೊರಗಡೆ ಓಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಎಂಟು ಗಂಟೆ ರಾತ್ರಿಗೆ ಪೊಲೀಸರು ಎದುರಿನ ಗದ್ದೆಯಲ್ಲಿ ಆತನನ್ನು ಬೆನ್ನಟ್ಟಿ ಹಿಡಿದಿದ್ದಾರೆ.

ಪೊಲೀಸರು ಪ್ರಾಥಮಿಕ ತಪಾಸಣೆ ನಡೆಸಿದ ವೇಳೆ ನಲ್ವತ್ತು ಕೋಟಿಯಷ್ಟು ಮೊತ್ತ ಆತನ ವಿವಿಧ ಬ್ಯಾಂಕ್ ಖಾತೆಗಳಲ್ಲಿರೋದು ಪತ್ತೆಯಾಗಿದೆ. ಅಲ್ಲದೆ, ಜಪ್ಪಿನಮೊಗರು ನೇತ್ರಾವತಿ ನದಿಯಲ್ಲಿ ಬೋಟ್ ಹಾಕಲು 5-10 ಕೋಟಿಯಷ್ಟು ಇನ್ವೆಸ್ಟ್ ಮಾಡಿದ್ದಾನಂತೆ. ದುಬಾಯ್ಸ್ ಹೆಸರಿನಲ್ಲಿ ಬೇರೆ ಬೇರೆ ಬಿಸಿನೆಸ್ ಹೊಂದಿದ್ದಾನೆ. ಈತನ ಪತ್ನಿ ಚೆನ್ನೈಯಲ್ಲಿದ್ದು ಒಂದು ಮಗು ಇದೆ. ಇದೇ ರೀತಿಯ ಮೋಸದ ಜಾಲ ಹೆಣೆದು ಹಲವಾರು ಮಂದಿಗೆ ವಂಚನೆ ಎಸಗಿರುವ ಮಾಹಿತಿ ಪೊಲೀಸರಿಗೆ ಲಭಿಸಿದ್ದು ಉತ್ತರ ಭಾರತದ ಸೈಬರ್ ಕಳ್ಳರ ರೀತಿಯಲ್ಲೇ ರೊನಾಲ್ಡ್ ಹೈ ಫೈ ಉದ್ಯಮಗಳನ್ನು ಯಾಮಾರಿಸಿ ಹಣ ಕೀಳುತ್ತಿದ್ದ. ಹಿಂದೊಮ್ಮೆ ಈತನ ಪತ್ತೆಗಾಗಿ ಸಿಐಡಿ ಪೊಲೀಸರು ಬಂದಿದ್ದರು ಎನ್ನುವ ಮಾಹಿತಿ ಇದ್ದು ಅವರು ಕೂಡ ರೊನಾಲ್ಡ್ ಎಸೆದ ಜಾಲಕ್ಕೆ ಸಿಲುಕಿ ಹಿಂದಕ್ಕೆ ತೆರಳಿದ್ದರು.

ಪೊಲೀಸರು ರೈಡ್ ಮಾಡಿದರೂ ಯಾರಿಗೂ ತಿಳಿಯದ ರೀತಿ ಒಳಗಡೆಯೇ ಅಡಗುತಾಣಗಳನ್ನು ಮಾಡಿಕೊಂಡಿದ್ದ. ಒಂದು ಕೋಣೆ ಹೊಕ್ಕರೆ ಮತ್ತೊಂದು ಕೋಣೆ ತೆರೆಯುವುದಲ್ಲದೆ, ಅಲ್ಲಿಂದಲೇ ಮೇಲೆ – ಕೆಳಗಿನ ಮಹಡಿಗಳಿಗೆ ಸಂಪರ್ಕ ಇತ್ತು. ಅಲ್ಲದೆ, ಎಲ್ಲಾ ಮೂಲೆಗಳಲ್ಲಿ ಸಿಸಿಟಿವಿಗಳಿದ್ದು ಅದನ್ನು ನೋಡಿಕೊಂಡೇ ಹೊರಗಿನವರು ಬಂದ್ರೆ ಗೇಟ್ ಬಂದ್ ಮಾಡಿ, ಎಸ್ಕೆಪ್ ಆಗೋದು ಮಾಡ್ತಿದ್ದ.

ಕತರ್ನಾಕ್ ಆರೋಪಿ ಈ ಹಿಂದಿನಿಂದಲೂ ಮೋಸದ ಜಾಲ ಎಸಗುತ್ತಿದ್ದರೂ ಪತ್ತೆಯಾಗಿರಲಿಲ್ಲ ಯಾಕೆ ಎನ್ನೋದು ಕೂಡ ಯಕ್ಷಪ್ರಶ್ನೆಯಾಗಿ ಕಾಡಿದೆ. ಈಗಿನ ಪೊಲೀಸ್ ಕಮಿಷನ‌ರ್ ಸುಧೀರ್ ರೆಡ್ಡಿ ಪೊಲೀಸರನ್ನು ನೇರವಾಗಿ ನುಗ್ಗಿ ಎತ್ತಾಕ್ಕೊಂಡು ಬರಲು ಹೇಳಿದ್ದರಿಂದ ಮಿಕ ಬಲೆಗೆ ಬಿದ್ದಿದೆ ಎನ್ನುವ ಮಾತು ಕೇಳಿಬಂದಿದೆ.

- Advertisement -

Related news

error: Content is protected !!