Saturday, June 28, 2025
spot_imgspot_img
spot_imgspot_img

ಮಂಗಳೂರು: ಖಾಸಗಿ ಬಸ್‌ನಲ್ಲಿ ತಿಗಣೆ ಕಡಿತ ಪ್ರಕರಣ; 1.29 ಲ.ರೂ. ಪರಿಹಾರಕ್ಕೆ ಗ್ರಾಹಕ ವೇದಿಕೆ ಆದೇಶ

- Advertisement -
- Advertisement -

ಮಂಗಳೂರು: ನಗರದಿಂದ ಬೆಂಗಳೂರಿಗೆ ಖಾಸಗಿ ಬಸ್‌ನಲ್ಲಿ ರಾತ್ರಿ ವೇಳೆಗೆ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರಿಗೆ ತಿಗಣೆ ಕಚ್ಚಿ, ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಂತ್ರಸ್ತ ಮಹಿಳೆಗೆ 1.29 ಲಕ್ಷ ರೂ. ಅನ್ನು ಶೇ.6 ಬಡ್ಡಿ ವಿಧಿಸಿ ಪರಿಹಾರವಾಗಿ ನೀಡುವಂತೆ ಬಸ್ ಮಾಲಕರಿಗೆ ದಕ್ಷಿಣ ಕನ್ನಡ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶ ಹೊರಡಿಸಿದೆ.

ಘಟನೆ ಬಗ್ಗೆ ಮಹಿಳೆ ನೀಡಿದ ದೂರನ್ನು ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಸೋಮಶೇಖರಪ್ಪ ಕೆ.ಹಂಡಿಗೋಲ್ ಮತ್ತು ಶಾರದಮ್ಮ ಎಚ್.ಜಿ. ಸಂತ್ರಸ್ತ ಮಹಿಳೆಗೆ ಪರಿಹಾರ ನೀಡುವಂತೆ ಆದೇಶಿಸಿದ್ದಾರೆ. ಈ ಬಗ್ಗೆ ನಟ ಶೋಭರಾಜ್ ಪಾವೂರು ಪತ್ನಿ ಹಾಗೂ ಕಲಾವಿದೆ ದೀಪಿಕಾ ಸುವರ್ಣ ಆಯೋಗಕ್ಕೆ ದೂರು ನೀಡಿದ್ದರು. 2022ರ ಆ.16ರಂದು ರಾತ್ರಿ ದೀಪಿಕಾ ಅವರಿಗೆ ಬಸ್‌ನಲ್ಲಿ ತಿಗಣೆ ಕಾಟ ನೀಡಿತ್ತು.

ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡ ಆಯೋಗವು ದೀಪಿಕಾ ಅವರಿಗೆ ಮೆಡಿಕಲ್ ಬಿಲ್ ಮೊತ್ತ 18,650 ರೂ. ಮತ್ತು ಶೇ.6ರ ವಾರ್ಷಿಕ ಬಡ್ಡಿ ಪಾವತಿಸಬೇಕು. ಬಸ್ಸಿನ ಟಿಕೆಟ್‌ನ ಮೊತ್ತ 840 ರೂ. ಜೊತೆಗೆ ದೂರು ನೀಡಿನ ದಿನಾಂಕದಿಂದ ಇಲ್ಲಿಯವರೆಗೆ ಶೇ.6ರ ವಾರ್ಷಿಕ ಬಡ್ಡಿಯೊಂದಿಗೆ ಮರು ಪಾವತಿ ಮಾಡಬೇಕು. ಮಾನಸಿಕ ಕಿರಿಕಿರಿ, ಆರ್ಥಿಕ ನಷ್ಟ ಮತ್ತು ಇತರ ಕಾರಣಗಳಿಗಾಗಿ 1 ಲಕ್ಷ ರೂ. ಮತ್ತು ಶೇ.6ರ ಬಡ್ಡಿ ಪಾವತಿಸಬೇಕು. ದೂರು, ವ್ಯಾಜ್ಯದ ಮೊತ್ತವಾಗಿ 10 ಸಾವಿರ ರೂ. ಪಾವತಿಸಬೇಕು ಎಂದು ತಿಳಿಸಲಾಗಿದೆ.

45 ದಿನದಲ್ಲಿ ಈ ಮೊತ್ತವನ್ನು ಸಂತ್ರಸ್ತೆಗೆ ಪಾವತಿ ಮಾಡದಿದ್ದಲ್ಲಿ ಶೇ.8 ಹೆಚ್ಚುವರಿ ಬಡ್ಡಿಯೊಂದಿಗೆ ಪಾವತಿಸಬೇಕು. ಈ ಆದೇಶವನ್ನು ಉಲ್ಲಂಘನೆ ಮಾಡಿದಲ್ಲಿ ಸಿವಿಲ್ ಅಥವಾ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಅವಕಾಶವಿದೆ ಎಂದು ಆದೇಶಿಸಲಾಗಿದೆ.

- Advertisement -

Related news

error: Content is protected !!