ಶಿಡ್ಲಘಟ್ಟ: ‘ಗ್ರಾಮ ಪಂಚಾಯಿತಿ ಚುನಾವಣೆಗೆ ಮಂಗಳವಾರ ಮತದಾನ ನಡೆಯಲಿದ್ದು ಅದಕ್ಕೂ ಮುನ್ನ ಕೆಲವು ಅಭ್ಯರ್ಥಿಗಳು ಮಾಟ, ಮಂತ್ರ, ವಾಮಾಚಾರದ ಮೊರೆ ಹೋಗಿದ್ದಾರೆ’ ಎಂದು ಕಂಬಾಲಹಳ್ಳಿಯ ಗ್ರಾಮಸ್ಥರು ಆರೋಪಿಸಿದ್ದಾರೆ.
ತಾಲ್ಲೂಕಿನ ಬಶೆಟ್ಟಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಂಬಾಲಹಳ್ಳಿಯ ಸರ್ಕಾರಿ ಶಾಲೆ ಮತಗಟ್ಟೆಯ ಸುತ್ತ ಅರಿಸಿನ, ಕುಂಕುಮ ಹಚ್ಚಿರುವ ನಿಂಬೆಹಣ್ಣುಗಳನ್ನು ಹೂತಿಟ್ಟು, ಪೂಜೆ ಸಲ್ಲಿಸಿರುವುದು ಕಂಡು ಬಂದಿದೆ.
ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ದಾಸಮ್ಮ ಅವರ ಪತಿ ವೆಂಕಟಪ್ಪ ಹಾಗೂ ಮಗ ರಾಮಾಂಜಿ ಈ ಕೃತ್ಯವೆಸಗಿದ್ದಾರೆ ಎಂದು ಆರೋಪಿಸಿರುವ ಗ್ರಾಮಸ್ಥರು, ದಿಬ್ಬೂರಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಸ್ಥಳಕ್ಕೆ ಪೊಲೀಸರು ಹಾಗೂ ಚುನಾವಣಾಧಿಕಾರಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಎದುರಾಳಿಗಳ ಸಂಚು: ‘ನನ್ನ ಪತ್ನಿಗೆ ಹೆಚ್ಚು ಬೆಂಬಲ ವ್ಯಕ್ತವಾಗುತ್ತಿರುವುದನ್ನು ಕಂಡು ಎದುರಾಳಿಗಳು ನಮ್ಮ ಮೇಲೆ ಇಲ್ಲ ಸಲ್ಲದ ಆರೋಪವನ್ನು ಮಾಡುತ್ತಿದ್ದಾರೆ. ನಾನು ನಮ್ಮ ಕುಟುಂಬದವರು ಯಾವುದೇ ವಾಮಾಚಾರ ನಡೆಸಿಲ್ಲ’ ಎಂದು ಅಭ್ಯರ್ಥಿ ದಾಸಮ್ಮ ಅವರ ಪತಿ ವೆಂಕಟಪ್ಪ ಅವರು ಪ್ರತಿಕ್ರಿಯಿಸಿದ್ದಾರೆ.