ಮಾಣಿ – ಪೆರಾಜೆ ವಿದ್ಯಾನಗರದ ಬಾಲವಿಕಾಸ ಆಂಗ್ಲಮಾಧ್ಯಮ ಶಾಲೆಯಲ್ಲಿ ಮೇ 07 ರಂದು ಸಂಸ್ಥೆಯ ಎಲ್ಲಾ ಶಿಕ್ಷಕ ವೃಂದದವರಿಗೆ, ಶಿಕ್ಷಕರು ಮತ್ತು ವಿದ್ಯಾರ್ಥಿಗಳ ನಡುವಿನ ಆರೋಗ್ಯಕರ ಬಾಂಧವ್ಯ ಹೇಗಿರಬೇಕು? ಎಂಬ ಬಗ್ಗೆ ತರಬೇತಿ ಕಾರ್ಯಾಗಾರ ಕಾರ್ಯಕ್ರಮ ನಡೆಯಿತು.
ತರಬೇತುದಾರರಾಗಿ ಆಗಮಿಸಿದ್ದ ಉಪ್ಪಿನಂಗಡಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕರು ಹಾಗೂ ಸಮಾಜ ಕಾರ್ಯ ವಿಭಾಗದ ಮುಖ್ಯಸ್ಥ ಡಾ ll ನಂದೀಶ್ ವೈ ಡಿ ಯವರು, ” ಮಕ್ಕಳ ಮನಸ್ಸನ್ನು ಶಿಕ್ಷಕರು ಗೆಲ್ಲುವುದು ಹೇಗೆ? ಭಾವನಾತ್ಮಕವಾಗಿ ಅವರೊಂದಿಗೆ ಸ್ಪಂದಿಸುವುದು ಹೇಗೆ? ಮಕ್ಕಳ ಬಾಲ್ಯಾವಸ್ಥೆಯಲ್ಲಿ ಹಾಗೂ ಹದಿಹರೆಯದಲ್ಲಿ ಶಿಕ್ಷಕರು ಅವರಿಗೆ ತೋರಿಸಬೇಕಾದ ಆತ್ಮೀಯತೆಯ ಪ್ರೀತಿ, ಕಾಳಜಿಯ ಕುರಿತಾಗಿ ಬಹಳ ಮನಮುಟ್ಟುವಂತೆ ಕಾರ್ಯಾಗಾರವನ್ನು ನಡೆಸಿಕೊಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಬಾಲವಿಕಾಸ ಟ್ರಸ್ಟಿನ ಕಾರ್ಯದರ್ಶಿ ಮಹೇಶ್ ಶೆಟ್ಟಿ ಜೆ, ” ಕಲಿಕೆ ಅನ್ನುವುದು ನಿರಂತರ ಪ್ರಕ್ರಿಯೆ. ಶಿಕ್ಷಕರು ವೈಯಕ್ತಿಕವಾಗಿ ಹಾಗೂ ಔದ್ಯೋಗಿಕವಾಗಿ ಬೆಳವಣಿಗೆ ಹೊಂದಲು ತರಬೇತಿಗಳು ಪ್ರಯೋಜನಕಾರಿ. ಅದೆಷ್ಟೋ ವಿಧದ ತರಬೇತಿಗಳಿಂದ ಅನುಭವಗಳನ್ನು ಪಡೆದುಕೊಂಡು, ತರಬೇತುದಾರರು ನಡೆಸಿಕೊಡುವ ಇಂತಹ ತರಬೇತಿಗಳನ್ನು ಶಿಕ್ಷಕರು ಸಂಪೂರ್ಣವಾಗಿ ಸದ್ವಿನಿಯೋಗಿಸಿಕೊಳ್ಳಬೇಕು ” ಎಂದರು. ಕಾರ್ಯಾಗಾರದ ಕೊನೆಯಲ್ಲಿ ಶಿಕ್ಷಕಿಯರಾದ ಐಡಾ ಲೋಬೋ ಹಾಗೂ ಜಯಶೀಲ ತಮ್ಮ ಅನಿಸಿಕೆ – ಅನುಭವವನ್ನು ಹಂಚಿಕೊಂಡರು. ಶಾಲೆಯ ಆಡಳಿತಾಧಿಕಾರಿ ರವೀಂದ್ರ ದರ್ಬೆ ಸ್ವಾಗತಿಸಿ, ವಂದಿಸಿ ಶಿಕ್ಷಕಿ ರಶ್ಮಿ ಕೆ ಫೆರ್ನಾಂಡೀಸ್ ನಿರೂಪಿಸಿದರು.