ವಿಟ್ಲ: ಮಾಣಿಲ ಶ್ರೀಧಾಮ ಶ್ರೀದುರ್ಗಾಮಹಾಲಕ್ಷ್ಮೀ ಕ್ಷೇತ್ರದಲ್ಲಿ ಶ್ರೀ ವರಮಹಾಲಕ್ಷ್ಮಿ ವ್ರತಾಚರಣೆಯ ಬೆಳ್ಳಿಹಬ್ಬ ಮಹೋತ್ಸವದ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರ ಮಾರ್ಗದರ್ಶನದಂತೆ 48 ದಿನಗಳ ಪರ್ಯಂತ ಸಾಮೂಹಿಕ ಶ್ರೀ ಲಕ್ಷ್ಮೀ ಪೂಜೆ ನಡೆದು ಬಳಿಕ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ವ್ರತಾಚರಣೆ ನಡೆಯಿತು.
ಬೆಳಿಗ್ಗೆ 12ತೆಂಗಿನಕಾಯಿಯ ಗಣಪತಿ ಯಾಗ , ತ್ರಿಕಾಲ ಪೂಜೆ ನಡೆದ ನಂತರ ಸಾಮೂಹಿಕ ಕುಂಕುಮಾರ್ಚನೆ ನಡೆಯಿತು. ಬಳಿಕ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಮಾತನಾಡಿ ಆಶೀರ್ವಚನ ನೀಡಿದರು. ಇಂಧನ ಖಾತೆ ರಾಜ್ಯ ಸಚಿವ ಭಗವಂತ್ ಖೂಬ ಸಮಾರಂಭವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿ.ಜೆ.ಪಿ. ರಾಜ್ಯ ಅಧ್ಯಕ್ಷ ನಳಿನ್ ಕುಮಾರ್ ಕಟೀಲು ವಹಿಸಿದ್ದರು.
ಮಾಣಿಲ ಶ್ರೀಧಾಮ ಶ್ರೀದುರ್ಗಾಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಮಾತನಾಡಿ ಹಿಂದು ಸಮಾಜದಲ್ಲಿ ಐಕ್ಯತೆಯ ಅಗತ್ಯವಿದ್ದು, ದೇಶದ ಆಚಾರವಿಚಾರಗಳನ್ನು ಯುವ ಪೀಳಿಗೆಗೆ ಧಾರೆಯೆರೆಯುವ ಕಾರ್ಯ ನಡೆಯಬೇಕು. ವರಮಹಾಲಕ್ಷ್ಮೀ ವ್ರತಾಚರಣೆಯ ಮೂಲಕ ಸುಸಂಸ್ಕೃತವಾಗಿಸುವ ಸಮಾಜ ನಿರ್ಮಾಣದ ಕಲ್ಪನೆಯನ್ನು ಇಟ್ಟುಕೊಳ್ಳಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸೌಂದರ್ಯ ರಮೇಶ್, ಸತೀಶ್ ಶೆಟ್ಟಿ ಪಟ್ಲ, ಕೊರಗಪ್ಪ ಪೂಜಾರಿ ಬಾಳೆಕಲ್ಲು, ಸಿ.ಎ.ಸುಧೀರ್ ಶೆಟ್ಟಿ ಎಣ್ಮಕಜೆ, ಗಣೇಶ್ ಕುಲಾಲ್, ದೇವಪ್ಪ ಕುಲಾಲ್ ಪಂಜಿಕಲ್ಲು, ಯಾದವ ಕೋಟ್ಯಾನ್ ಅವರನ್ನು ಸನ್ಮಾನಿಸಲಾಯಿತು.
ಮಾಜಿ ಸಚಿವರಾದ ಬಿ. ರಮಾನಾಥ ರೈ, ಬಿ. ನಾಗರಾಜ ಶೆಟ್ಟಿ ಕೃಷ್ಣ ಜೆ. ಪಾಲೆಮಾರ್, ದ.ಕ.ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ್ ಎಂ., ಮಾಜಿ ಶಾಸಕರಾದ ಸಂಜೀವ ಮಠಂದೂರು, ಪದ್ಮನಾಭ ಕೊಟ್ಟಾರಿ, ಕ್ಷೇತ್ರದ ಟ್ರಸ್ಟಿಗಳಾದ ಭಾಸ್ಕರ ಶೆಟ್ಟಿ ಪುಣೆ, ಉದ್ಯಮಿ ಗಿರಿಧರ ಶೆಟ್ಟಿ, ರಂಜಿತ್ ಶೆಟ್ಟಿ ಗುಬ್ಯ, ರಂಜಿತ್ ಮಡಗಾಂವ್, ರಾಕೇಶ್, ಜನಾರ್ದನ ನಾಸಿಕ್, ಮಹಿಳಾ ಸಮಿತಿ ಗೌರವಾಧ್ಯಕ್ಷೆ ರೇವತಿ ಪೆರ್ನೆ, ಸುರೇಶ್ ಪತಾರೆ, ನಿತಿನ್ ಅಡ್ಸಲ್, ಲಿಭೇಷ್ ನಾಯರ್, ಸಂದೀಪ್ ಪತಾರೆ, ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ವನಿತಾ ವಿ.ಶೆಟ್ಟಿ ಸುಣ್ಣಂಬಳ ಮತ್ತಿತರರು ಉಪಸ್ಥಿತರಿದ್ದರು.
ಬೆಳ್ಳಿಹಬ್ಬ ಮಹೋತ್ಸವ ಸಮಿತಿ ಅಧ್ಯಕ್ಷ ಮೋನಪ್ಪ ಭಂಡಾರಿ ಮಂಗಳೂರು ಸ್ವಾಗತಿಸಿದರು. ಗೀತಾ ಪುರುಷೋತ್ತಮ, ನವೀನ್ ಕುಲಾಲ್, ಸುಧೀರ್ ಶೆಟ್ಟಿ, ಅಭಿಜಿತ್, ಉಮಾವತಿ ಚಂದ್ರಶೇಖರ್, ರೇಶ್ಮಾ ಮನೋಹರ್, ಎಚ್. ಕೆ. ನಯನಾಡು ಸನ್ಮಾನ ಪತ್ರ ವಾಚಿಸಿದರು. ಪ್ರಧಾನ ಕಾರ್ಯದರ್ಶಿ ದೇವಪ್ಪ ಕುಲಾಲ್ ಪಂಜಿಕಲ್ಲು ವಂದಿಸಿದರು. ದಿನೇಶ್ ಸುವರ್ಣ ರಾಯಿ ಕಾರ್ಯಕ್ರಮ ನಿರೂಪಿಸಿದರು.