ಪುತ್ತೂರು: ಹೋಂ ನರ್ಸ್ ಕೆಲಸ ಮಾಡಿಕೊಂಡಿದ್ದ ವಿವಾಹಿತೆಯೋರ್ವರು ಸುಮಾರು ಏಳು ತಿಂಗಳಿನಿಂದ ನಾಪತ್ತೆಯಾಗಿರುವುದಾಗಿ ಅವರ ಪತಿ ಪುತ್ತೂರು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಬನ್ನೂರು ಅಡೆಂಚಿಲಡ್ಕ ಕೃಷ್ಣಪ್ಪ ಎಂಬವರ ಪತ್ನಿ ಜ್ಯೋತಿ (26) ನಾಪತ್ತೆಯಾದವರು. ಹೋಮ್ ನರ್ಸ್ ಕೆಲಸ ಮಾಡಿಕೊಂಡು ಬೇರೆ ಬೇರೆ ಜಿಲ್ಲೆಗಳಿಗೆ ಹೋಗುತ್ತಿದ್ದ ಜ್ಯೋತಿಯವರು ಕಳೆದ ಜ.21ರಂದು ಬೆಳಿಗ್ಗೆ ಅಡೆಂಚಿಲಡ್ಕ ಮನೆಯಿಂದ ಹೋದವರು ವಾಪಾಸು ಮನೆಗೆ ಬಾರದೇ ನಾಪತ್ತೆಯಾಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
ದೂರವಾಣಿ ಸಂಪರ್ಕಕ್ಕೆ ಸಿಗುತ್ತಿದ್ದ ಅವರು ಜುಲೈ 15ರಂದು ಕರೆ ಮಾಡಿ ಮಕ್ಕಳ ಜೊತೆ ಮಾತನಾಡಿ ತನ್ನ ಇರುವಿಕೆಯ ಬಗ್ಗೆ ಸರಿಯಾದ ಮಾಹಿತಿ ತಿಳಿಸದೇ ಇದ್ದು, ಬಳಿಕ ಕರೆ ಮಾಡಿದಾಗ ಯಾವುದೇ ದೂರವಾಣಿ ಸಂಪರ್ಕಕ್ಕೆ ಸಿಗದೇ, ಮೊಬೈಲ್ ಸ್ವಿಚ್ ಆಫ್ ಆಗಿದೆ.
ಪತ್ನಿ ಬರಬಹುದೆಂದು ಹಾಗೂ ಕರೆ ಮಾಡಬಹುದೆಂದು ಕಾದರೂ ಈವರೆಗೆ ಮನೆಗೂ ಬಾರದೇ, ದೂರವಾಣಿ ಕರೆಯೂ ಮಾಡದೇ ಇರುವುದರಿಂದ ಹಾಗೂ ಮೊಬೈಲ್ ಸ್ವಿಚ್ ಆಫ್ ಆಗಿರುವುದರಿಂದ ಪತ್ನಿಯನ್ನು ಹುಡುಕಿಕೊಡುವಂತೆ ಕೃಷ್ಣಪ್ಪರವರು ತಡವಾಗಿ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಮುಂದಾಗಿದ್ದಾರೆ