ಬೆಂಗಳೂರು(ನ 5): ರಾಜ್ಯಾದ್ಯಂತ ಇರುವ ಮಸೀದಿಗಳಿಗೆ ಅಳವಡಿಸಿರುವ ಧ್ವನಿವರ್ಧಕಗಳ ನಿಷೇಧಿಸಿ ತೆರವುಗೊಳಿಸಲು ಸೂಚಿಸಬೇಕು ಎಂದು ವಕೀಲ ಹರ್ಷ ಮುತಾಲಿಕ್ ಅವರು ಪೋಲಿಸ್ ಮಹಾ ನಿರ್ದೇಶಕರಿಗೆ 30.09.2020 ರಂದು ಮನವಿ ಸಲ್ಲಿಸಿದ್ದರು. ಇದೀಗ ಅವರ ಉಲ್ಲೇಖಕ್ಕೆ ಡೈರೆಕ್ಟರ್ ಜನರಲ್ ಮತ್ತು ಇನ್ಸ್ಪೆಕ್ಟರ್ ಜನರಲ್ ಆಫ್ ಪೋಲಿಸ್ ರವರ ಕಛೇರಿಯಿಂದ ಆದೇಶವೊಂದು ಹೊರಬಿದ್ದಿದ್ದು ರಾಷ್ಟ್ರಾದ್ಯಂತ ಗಮನ ಸೆಳೆಯುವಂತೆ ಮಾಡಿದೆ.
ರಾಜ್ಯದಾದ್ಯಂತ ನಮಾಜ್ನ ಪ್ರಸಾರ ಮಾಡುತ್ತಿರುವುದು ಸರ್ವೇಸಾಮಾನ್ಯವಾಗಿದ್ದು, ಈ ರೀತಿಯ ಅನಧಿಕೃತ ಧ್ವನಿವರ್ಧಕಗಳ ಬಳಕೆ ಹಾಗೂ ಮೈಕ್ರೋಫೋನ್ ಬಳಕೆಯನ್ನು ಮಾಡಬಾರದೆಂದು ಈಗಾಗಲೇ ಮಾನ್ಯ ಘನ ಸರ್ವೋಚ್ಛ ನ್ಯಾಯಾಲಯವು ಆದೇಶವನ್ನು ಮಾಡಿದೆ. ಆದರೆ ದುರದೃಷ್ಟವಶಾತ್ ಇಲ್ಲಿಯವರೆವಿಗೂ ಯಾವುದೇ ಒಂದೇ ಒಂದು ಮಸೀದಿಗಳು , ಅವುಗಳನ್ನು ತೆಗೆದಿರುವುದಿಲ್ಲ ಮತ್ತು ಈ ಘನ ಸರ್ವೋಚ್ಛ ನ್ಯಾಯಾಲಯದ ಆದೇಶವನ್ನು ಪೊಲೀಸ್ ಇಲಾಖೆಯವರಾಗಲೀ ಅಥವಾ ಸಂಬಂಧಿಸಿದ ಅಧಿಕಾರಿಗಳಾಗಲೀ ಇಲ್ಲಿಯವರೆವಿಗೂ ಯಾವುದೇ ರೀತಿ ಕ್ರಮಗಳನ್ನು ತೆಗೆದುಕೊಂಡಿರುವುದಿಲ್ಲ. ಇತ್ತೀಚೆಗೆ ಮಾನ್ಯ ಘನ ಅಲಹಾಬಾದ್ ಉಚ್ಛ ನ್ಯಾಯಾಲಯವೂ ಕೂಡ ಈ ವಿಚಾರಕ್ಕೆ ಸಂಬಂಧಿಸಿದಂತೆ , ಧ್ವನಿವರ್ಧಕಗಳ ಬಳಕೆ ಮಾಡಬಾರದೆಂದು ಆದೇಶ ಹೊರಡಿಸಿತ್ತು.
ನಮ್ಮ ರಾಜ್ಯದಲ್ಲಿ ನಮಾಜ್ ನ ಉಪದ್ರವ ಇದ್ದು , ಈ ರೀತಿ ಪ್ರತಿದಿನ ದಿನಕ್ಕೆ 5 ಬಾರಿ ಮುಸ್ಲಿಂ ಬಾಂಧವರು ನಮಾಜ್ ಮಾಡುತ್ತಾರೆ. ಪ್ರತಿ ಶುಕ್ರವಾರ ವಿಶೇಷವಾಗಿ ಯಾರೋ ಒಬ್ಬ ವ್ಯಕ್ತಿ ಮೈಕ್ಗಳಲ್ಲಿ ಮಾತನಾಡುತ್ತಾರೆ. ಹೀಗೆ ಪ್ರತಿ ದಿನ ಜೋರಾಗಿ ಮಾಲಿನ್ಯ ನಿಯಂತ್ರಣ ಕಾಯ್ದೆಯ ನಿಯಮ ಮೀರಿ ಮಿತಿಗಿಂತಲೂ ಹೆಚ್ಚಿಗೆ ಧ್ವನಿವರ್ಧಕಗಳನ್ನು ಹಾಕುವುದರಿಂದ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದ ಕಡೆ ಗಮನ ಕೊಡಲು ಆಗುವುದಿಲ್ಲ, ಅದೇ ರೀತಿ ವಯೋವೃದ್ಧರಿಗೆ ಆರೋಗ್ಯದ ಸಮಸ್ಯೆ ಇದ್ದು ಅಂತಹವರಿಗೆ ಬೇರೆ ಬೇರೆ ಸಮಸ್ಯೆಗಳು ಉಲ್ಬಣವಾಗುತ್ತಿವೆ.
ಹೃದಯ ರೋಗ ಸಮಸ್ಯೆ ಇರುವವರಿಗೆ ಸಮಸ್ಯೆಯೇ ಉಂಟಾಗುತ್ತಿದೆ ಹಾಗೂ ಬೇರೆ ಧರ್ಮದವರು ತಾವು ಪ್ರಾರ್ಥನೆ ಹಾಗೂ ಧ್ಯಾನ ಮಾಡಲು ಆಗುವುದಿಲ್ಲ ಮತ್ತು ಈ ಕೋವಿಡ್ ಸಮಯದಲ್ಲಿ ವಿದ್ಯಾರ್ಥಿಗಳು ಮನೆಗಳಲ್ಲಿಯೇ ವಿದ್ಯಾಭ್ಯಾಸ ಮಾಡಬೇಕಾದ ಅನಿವಾರ್ಯವಿದೆ . ಆದರೆ ಎಲ್ಲಾ ಮಸೀದಿಗಳು ಊರಿನ ಒಳಗಡೆ ಇದ್ದು, ವಾಸವಾಗಿರುವ ಮನೆಗಳ ಮಧ್ಯದಲ್ಲಿಯೇ ಇರುವುದರಿಂದ ವಿದ್ಯಾರ್ಥಿ ಗಳಗೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿದೆ. ಹಾಗಾಗಿ ಈ ರೀತಿ ಧ್ವನಿವರ್ಧಕಗಳ ಮುಖಾಂತರ ನಮಾಜ್ ಮಾಡುವ ಮಸೀದಿಗಳಿಗೆ ಧ್ವನಿವರ್ಧಕಗಳ ನಿರ್ಬಂಧ ಹೇರಿ ಅವುಗಳನ್ನು ತೆರವುಗೊಳಿಸಬೇಕೆಂದು ಹರ್ಷ ಮುತಾಲಿಕ್ ಅವರು ಪೋಲಿಸ್ ಮಹಾ ನಿರ್ದೇಶಕರಿಗೆ ಮನವಿ ಮಾಡಿದ್ದರು.