ಉಪ್ಪಿನಂಗಡಿ : ಎಂಬಿಬಿಎಸ್ ಎಂ.ಡಿ. ಪದವಿ ಪಡೆದ ವೈದ್ಯರು ಸೂಚಿಸಿದ ಔಷಧದ ಬದಲು ಮೆಡಿಕಲ್ ಸಿಬ್ಬಂದಿ ಬೇರೊಂದು ಔಷಧಿಯನ್ನು ನೀಡಿದ ಪರಿಣಾಮ ರೋಗಿಯೋರ್ವರಿಗೆ ಅನಾರೋಗ್ಯ ಅತೀಯಾದ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ.
ಪ್ರಸಕ್ತ ಉಪ್ಪಿನಂಗಡಿಯ ವಾಸ್ತವ್ಯ ಇರುವ ರೋಗಿಯೋರ್ವರಿಗೆ ನರ ದೌರ್ಬಲ್ಯದ ಕಾರಣಕ್ಕೆ ಮಂಗಳೂರಿನ ನುರಿತ ವೈದ್ಯರಿಂದ ತಪಾಸಣೆ ನಡೆಸಿದ್ದು, ಅವರು ಅಗತ್ಯ ಔಷಧವನ್ನು ಪಡೆಯುವಂತೆ ಶಿಫಾರಸ್ಸು ಮಾಡಿದ್ದು, ವೈದ್ಯರು ನೀಡಿದ ಚೀಟಿಯನ್ನು ಮಂಗಳೂರಿನ ಔಷಧಾಲಯವೊಂದಕ್ಕೆ ಕೊಂಡೊಯ್ದು ಔಷಧಿಯನ್ನು ಕೇಳಿದಾಗ, ವೈದ್ಯರು ನೀಡಿದ ಔಷಧಿಯು ಅಲ್ಲಿ ಲಭ್ಯವಿಲ್ಲದ ಕಾರಣ ಬೇರೊಂದು ಔಷಧಿಯನ್ನು ಅವರಿಗೆ ನೀಡಿ ಕಳುಹಿಸಲಾಗಿತ್ತು. ಔಷಧಾಲಯದಿಂದ ಪರ್ಯಾಯವಾಗಿ ಒದಗಿಸಿದ ಔಷಧಿಯನ್ನು ಸೇವಿಸಿದ ರೋಗಿಯ ಅನಾರೋಗ್ಯ ಉಲ್ಬಣಿಸಿ ದೇಹಾರೋಗ್ಯ ಹದಗೆಟ್ಟಾಗ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ರೋಗಿಯನ್ನು ದಾಖಲಿಸಲಾಗಿತ್ತು. ಈ ವೇಳೆ ಅಲ್ಲಿನ ವೈದ್ಯರು ರೋಗಿ ಈ ಹಿಂದೆ ಪಡೆದುಕೊಂಡ ಔಷಧಿಗಳನ್ನು ಪರಿಶೀಲನೆಗೆ ಒಳಪಡಿಸಿದಾಗ ವೈದ್ಯರು ಸೂಚಿಸಿದ ಔಷಧಕ್ಕೂ ರೋಗಿಯು ಸ್ವೀಕರಿಸುತ್ತಿರುವ ಔಷಧಕ್ಕೂ ವ್ಯತ್ಯಾಸವಿರುವುದು ಕಂಡು ಬಂದಿದ್ದು, ಬಿಲ್ಗಳನ್ನು ಪರಿಶೀಲಿಸಿದಾಗ ಇದಕ್ಕೆ ಮಂಗಳೂರಿನ ಔಷಧಾಲಯದ ಸಿಬ್ಬಂದಿಯ ಕರ್ತವ್ಯ ಲೋಪವೇ ಕಾರಣವೆನ್ನುವುದು ತಿಳಿದುಬರುತ್ತದೆ.
ಈ ಬಗ್ಗೆ, ಆಕ್ರೋಶಗೊಂಡ ರೋಗಿಯ ಕುಟುಂಬಸ್ಥರು ಮಂಗಳೂರಿನ ಔಷಧಾಲಯವನ್ನು ಸಂಪರ್ಕಿಸಿ, ವೈದ್ಯರು ಸೂಚಿಸಿದ ಔಷಧದ ಬದಲು ಅಲ್ಲಿನ ಸಿಬ್ಬಂದಿ ಅವರಿಗೆ ತೋಚಿದ ಔಷಧಿಯನ್ನು ನೀಡಿ ರೋಗಿಯ ದೇಹ ಸ್ಥಿತಿ ಬಿಗಡಾಯಿಸಲು ಕಾರಣವಾಗಿರುವ ಬಗ್ಗೆ ಇಲಾಖಾತ್ಮಕ ದೂರು ನೀಡುವುದಾಗಿ ಎಚ್ಚರಿಸಿದರು. ಎಚ್ಚೆತ್ತ ಔಷಧಾಲಯದ ಸಿಬ್ಬಂದಿ ಉಪ್ಪಿನಂಗಡಿಗೆ ಧಾವಿಸಿ ಬಂದು, ನಮ್ಮಿಂದ ತಪ್ಪಾಗಿದೆ. ವೈದ್ಯರು ಸೂಚಿಸಿದ ಔಷಧಿಗೆ ಪರ್ಯಾಯವಾಗಿ ಬದಲಿ ಔಷಧಿಯನ್ನು ನೀಡುವ ಅಧಿಕಾರ ನಮಗಿಲ್ಲ. ಬದಲಿ ಔಷಧಿ ನೀಡಿದ ಸಿಬ್ಬಂದಿಯ ಪ್ರಮಾದಕ್ಕಾಗಿ ಕ್ಷಮೆಯಾಚಿಸಿದರಲ್ಲದೆ, ಬದಲಿ ಔಷಧಿಯ ಕಾರಣದಿಂದ ಉಂಟಾದ ರೋಗಿಯ ಅನಾರೋಗ್ಯ ಉಲ್ಬಣಿಸಿ ಆಸ್ಪತ್ರೆಯ ವೆಚ್ಚವನ್ನು ಪಾವತಿಸಿ, ಮುಂದಿನ ಎರಡು ತಿಂಗಳ ಕಾಲ ರೋಗಿಗೆ ತೆಗೆದುಕೊಳ್ಳಬೇಕಾದ ಎಲ್ಲಾ ಔಷಧಿಗಳು ನಮ್ಮ ಔಷಧಾಲಯವೇ ಭರಿಸುವುದೆಂದು ವಾಗ್ದಾನ ಮಾಡಿದ್ದಾರೆ ಎಂದು ತಿಳಿದುಬಂದಿದೆ.