ಕೇದಾರನಾಥ ದೇವಾಲಯದ ಆವರಣದಲ್ಲಿ ಛಾಯಾಗ್ರಹಣ ಮತ್ತು ವೀಡಿಯೊಗ್ರಫಿಯನ್ನು ದೇವಾಲಯದ ಸಮಿತಿಯು ಸಂಪೂರ್ಣವಾಗಿ ನಿಷೇಧಿಸಿದೆ. ಫೋಟೋ ತೆಗೆಯುವ ಅಥವಾ ವಿಡಿಯೋ ಮಾಡುವವರ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಕೆ ಫಲಕಗಳನ್ನು ದೇವಾಲಯ ಸಮಿತಿಯು ಅಳವಡಿಸಿದೆ.
ಈ ಬಗ್ಗೆ ಬದರಿನಾಥ-ಕೇದಾರನಾಥ ದೇವಾಲಯ ಸಮಿತಿ ಅಧ್ಯಕ್ಷ ಅಜಯ್ ಅಜೇಂದ್ರ ಮಾತನಾಡಿದ್ದು, ಧಾರ್ಮಿಕ ಸ್ಥಳವು ನಂಬಿಕೆಯ ವ್ಯವಸ್ಥೆಯನ್ನು ಅನುಸರಿಸುತ್ತದೆ ಮತ್ತು ಭಕ್ತರು ಅದನ್ನು ಗೌರವಿಸಬೇಕು ಎಂದು ಮನವಿ ಮಾಡಿಕೊಂಡರು. ಹಾಗೆ, ಎಎನ್ಐ ಜೊತೆ ಮಾತನಾಡಿದ ಇವರು, “ಹಿಂದೆ ಕೆಲವು ಯಾತ್ರಾರ್ಥಿಗಳು ದೇವಸ್ಥಾನದೊಳಗೆ ಅಸಭ್ಯವಾಗಿ ವಿಡಿಯೋ ಮತ್ತು ರೀಲ್ಸ್ ಮಾಡುವುದರ ಜೊತೆಗೆ ಫೋಟೋ ಕ್ಲಿಕ್ ಮಾಡುತ್ತಿದ್ದರು. ಇದನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುವುದು, ಅದಕ್ಕಾಗಿಯೇ ಕೇದಾರನಾಥದಲ್ಲಿ ಎಚ್ಚರಿಕೆ ಫಲಕಗಳನ್ನು ಸಹ ಅಳವಡಿಸಲಾಗಿದೆ’’ ಎಂದು ಮಾಹಿತಿ ನೀಡಿದ್ದಾರೆ.
ದೇವಸ್ಥಾನದ ಹೊರಗೆ ಯುವತಿಯೊಬ್ಬಳು ತನ್ನ ಗೆಳೆಯನಿಗೆ ಪ್ರಪೋಸ್ ಮಾಡುತ್ತಿರುವ ವಿಡಿಯೋ ವೈರಲ್ ಆದ ನಂತರ, ದೇಗುಲದ ಪಾವಿತ್ರ್ಯತೆ ಹಾಳಾಗಬಾರದು ಎಂಬ ದೃಷ್ಟಿಯಲ್ಲಿ ಇನ್ನು ಮುಂದಿನ ದಿನಗಳಲ್ಲಿ ಭಕ್ತರು ದೇವಳದ ಆವರಣ ಹಾಗೂ ದೇವಳದ ಒಳಗೆ ಮೊಬೈಲ್ ಚಿತ್ರೀಕರಣ, ಫೋಟೋಗ್ರಫಿ, ರೀಲ್ಸ್ ಮುಂತಾದವುಗಳನ್ನು ಮಾಡದಂತೆ ತಡೆಗಟ್ಟಲು ಮೊಬೈಲ್ ನಿಷೇಧ ಹೇರಿದೆ.
ದೇವಾಲಯವು ಜನರಿಗೆ ಡೀಸೆಂಟ್ ಉಡುಪುಗಳನ್ನು ಧರಿಸಲು ಮತ್ತು ದೇವಾಲಯದ ಆವರಣದಲ್ಲಿ ಡೇರೆಗಳು ಅಥವಾ ಶಿಬಿರಗಳನ್ನು ಸ್ಥಾಪಿಸುವುದನ್ನು ನಿಲ್ಲಿಸುವಂತೆಯೂ ಕೇಳಿಕೊಂಡಿದೆ. ಆದೇಶವನ್ನು ಪಾಲಿಸದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಬರೆದಿರುವ ಬೋರ್ಡ್ಗಳಲ್ಲಿ ತಿಳಿಸಲಾಗಿದೆ.