ಬೆಂಗಳೂರು: ಮಾದಕ ದ್ರವ್ಯ ಪ್ರಕರಣ ಬೆಳಕಿಗೆ ಬಂದ ಬಳಿಕ 130 ದಿನಗಳ ಕಾಲ ತಲೆಮರೆಸಿಕೊಂಡಿದ್ದ ಆದಿತ್ಯ ಆಳ್ವಾ ಬಂಧನಕ್ಕೆ ಕಾರಣವಾದ್ದದ್ದು ಮೊಬೈಲ್ ಸಂದೇಶ. ಜತೆಗಿದ್ದ ಬಾಣಸಿಗ ಕಳುಹಿಸಿದ್ದ ಸಂದೇಶದ ಜಾಡು ಹಿಡಿದು ಹೊರಟ ಪೊಲೀಸರು ಆದಿತ್ಯಾ ಆಳ್ವಾನನ್ನು ಬಂಧಿಸಿದ್ದಾರೆ ಎಂದು ವರದಿಯಾಗಿದೆ.
ಸಿಸಿಬಿ ಪೊಲೀಸರು ಪ್ರಕರಣ ದಾಖಲಿಸಿಕೊಂಡ ಬಳಿಕ ಆದಿತ್ಯಾ ಅಳ್ವಾ, ಹೈದರಾಬಾದ್ ಸೇರಿದಂತೆ ತೆಲಂಗಾಣದ ಹಲವು ನಗರಗಳಲ್ಲಿ ತಲೆಮರೆಸಿಕೊಂಡಿದ್ದ. ಜತೆಗೆ ಬಾಣಸಿಗ ನೇಪಾಳ ಮೂಲದ ಮಹೇಶ್ ಥಾಪ ಕೂಡ ಜತೆಗಿದ್ದ. ಆದಿತ್ಯಾ ಆಳ್ವಾನಿಗೆ ಬಿಸಿ ಬಿಸಿ ಅಡುಗೆ ಸಿದ್ಧಪಡಿಸಿಕೊಡುತ್ತಿದ್ದ.
ಮೊಬೈಲ್ ಬಳಸದಂತೆ ಮಹೇಶ್ ಥಾಪಾನಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿತ್ತು. ಕುಟುಂಬ ಸದಸ್ಯರ ಜತೆ ಮಾತನಾಡದೆ ಆತ ಚಡಪಡಿಸುತ್ತಿದ್ದ. ನಾನು ಕ್ಷೇಮವಾಗಿದ್ದೇನೆ ಎಂಬ ಸಂದೇಶವನ್ನು ನನ್ನ ಸ್ನೇಹಿತರ ಮೂಲಕ ಕುಟುಂಬಕ್ಕೆ ಕಳುಹಿಸುತ್ತೇನೆ. ಅದಕ್ಕೆ ಅನುಮತಿ ನೀಡಿ ಎಂದು ಕೋರಿದ್ದ.
ಇದರಿಂದ ಪೊಲೀಸರು ನಮ್ಮನ್ನು ಪತ್ತೆ ಹಚ್ಚ ಬಹುದು ಎಂದು ಆದಿತ್ಯ ಆಳ್ವಾ , ಮಹೇಶ್ ಥಾಪನಿಗೆ ಎಚ್ಚರಿಕೆ ನೀಡಿದ್ದ.
ಆದರೂ ಕುಟುಂಬ ಸದಸ್ಯರಿಗೆ ಮಾಹಿತಿ ನೀಡದೆ ಉಳಿಯಲು ಸಾಧ್ಯವಾಗಿಲ್ಲ. ಚೆನ್ನೈನ ರೆಸಾರ್ಟ್ ನಲ್ಲಿ ಇದ್ದ ವೇಳೆ ಅಲ್ಲಿಯ ಸಿಬ್ಬಂದಿಯ ಮೊಬೈಲ್ ಪಡೆದು ಬೆಂಗಳೂರಿನ ತನ್ನ ಸ್ನೇಹಿತರಿಗೆ ಮೆಸೇಜ್ ಮಾಡಿದ್ದ. ಮನೆಯ ಸದಸ್ಯರಿಗೆ ಮಾಹಿತಿ ನೀಡುವಂತೆ ಕೋರಿದ್ದ.
ಇದು ಸಿಸಿಬಿಯ ಗಮನಕ್ಕೆ ಬಂತು. ತಕ್ಷಣ ಎಚ್ಚೆತ್ತುಕೊಂಡ ಸಿಸಿಬಿ ತಂಡ ಚೆನ್ನೈನಲ್ಲಿ ದಾಳಿ ನಡೆಸಿ ಆದಿತ್ಯ ಆಳ್ವಾನನ್ನು ಬಂಧಿಸಿತು. ಆದಿತ್ಯ ಆಳ್ವಾ ಜನತಾ ಪರಿವಾರದ ಹಿರಿಯ ನಾಯಕರಾಗಿದ್ದ ಜೀವರಾಜ ಆಳ್ವಾ ಅವರ ಮಗ.