ನವದೆಹಲಿ: ಜಲಿಯನ್ ವಾಲಾಬಾಗ್ನಲ್ಲಿ ನಡೆದ ಹತ್ಯಾಕಾಂಡ ಘಟನೆಗೂ ಮೊದಲು ಇದು ಪವಿತ್ರ ಸ್ಥಳವಾಗಿತ್ತು ಜಲಿಯನ್ ವಾಲಾಬಾಗ್ ಸ್ಥಳ ಹತ್ಯಾಕಾಂಡದ ಸ್ಥಳ ಅಲ್ಲ. ಈ ಸ್ಮಾರಕ ಸ್ಫೂರ್ತಿ ಇಡೀ ವಿಶ್ವಕ್ಕೆ ಸ್ಫೂರ್ತಿ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ತಿಳಿಸಿದ್ದಾರೆ. ನವೀಕೃತಗೊಂಡ ಜಲಿಯನ್ ವಾಲಾಬಾಗ್ ಸ್ಮಾರಕವನ್ನು ಶನಿವಾರ (ಆಗಸ್ಟ್ 28) ರಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟನೆ ಮಾಡಿ ಅವರು ಮಾತನಾಡಿದ್ದಾರೆ.
ಇತಿಹಾಸವನ್ನು ಮುಂದಿನ ಪೀಳಿಗೆಗೆ ತಿಳಿಸುವ ಅಗತ್ಯವಿದೆ. ನಾನು ನಮ್ಮ ಪರಂಪರೆಯನ್ನು ಉಳಿಸಬೇಕಾದ ಅಗತ್ಯವಿದೆ ಎಂದು ಮೋದಿ ಹೇಳಿದ್ದಾರೆ. ಭಾಷಣ ವೇಳೆ ಅಫ್ಘಾನಿಸ್ಥಾನದ ಪರಿಸ್ಥಿತಿ ಬಗ್ಗೆ ಪ್ರಧಾನಿ ಮೋದಿ ಮಾತನಾಡಿದ್ದಾರೆ. ನಾವು ನಮ್ಮ ಜನರನ್ನ ತೊಂದರೆಯಲ್ಲಿ ಸಿಲುಕಲು ಬಿಡಲ್ಲ. ಆಪರೇಷನ್ ದೇವಿ ಶಕ್ತಿ ಮೂಲಕ ಭಾರತೀಯರ ಸ್ಥಳಾಂತರ ಆಗಿದೆ. ಈ ಸ್ಥಿತಿಯಲ್ಲಿ ಆತ್ಮನಿರ್ಭರ್, ಆತ್ಮವಿಶ್ವಾಸ ಎರಡೂ ಅವಶ್ಯಕವಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಪ್ರಧಾನಿ ಮೋದಿ, ಪಂಜಾಬ್ ನೆಲಕ್ಕೆ ಮತ್ತು ಜಲಿಯನ್ ವಾಲಾಬಾಗ್ ಮಣ್ಣಿಗೆ ಗೌರವ ಅರ್ಪಿಸಿದರು. ಹತ್ಯಾಕಾಂಡದಲ್ಲಿ ಬಲಿಯಾದ ಮುಗ್ಧ ಬಾಲಕ, ಬಾಲಕಿ, ಸಹೋದರ, ಸಹೋದರಿಯರ ಕನಸುಗಳು ಜಲಿಯನ್ ವಾಲಾಬಾಗ್ ಗೋಡೆ ಮೇಲಿನ ಬುಲೆಟ್ ಗುರುತುಗಳಲ್ಲಿ ಈಗಲೂ ಕಾಣುತ್ತಿದೆ. ನಾವು ಅದನ್ನು ಇಂದು ಸ್ಮರಿಸುತ್ತಿದ್ದೇವೆ ಎಂದು ಮೋದಿ ತಿಳಿಸಿದ್ದಾರೆ.
ದೇಶ ವಿಭಜನೆಯ ಮೊದಲು ಮತ್ತು ನಂತರ ಏನಾಯ್ತು ಎಂದು ದೇಶದ ಪ್ರತಿಯೊಂದು ಮೂಲೆಯಲ್ಲೂ ನಾವು ಕಾಣಬಹುದು. ವಿಶೇಷವಾಗಿ ಪಂಜಾಬ್ನಲ್ಲಿ ನಾವು ಅದನ್ನು ಗುರುತಿಸಬಹುದು. ನಾವು ಆಗಸ್ಟ್ 14ನ್ನು ದೇಶ ವಿಭಜನೆಯ ದಿನ ಎಂದು ಆಚರಿಸಲು ತೀರ್ಮಾನಿಸಿದ್ದೇವೆ. ಭಾರತದ ಜನರ ನೋವು ಮತ್ತು ಕಷ್ಟಗಳನ್ನು ನೆನಪಿಸಲು ಈ ದಿನ ಅರ್ಪಿಸಲಾಗಿದೆ ಎಂದು ಮೋದಿ ಹೇಳಿದ್ದಾರೆ. ಆದಿವಾಸಿ ಸ್ವಾತಂತ್ರ್ಯ ಹೋರಾಟಗಾರರ ಶ್ರಮವನ್ನು ತೋರಿಸುವ ಮ್ಯೂಸಿಯಂಗಳ ಕಾರ್ಯವು ದೇಶದ 9 ರಾಜ್ಯಗಳಲ್ಲಿ ಪ್ರಗತಿಯಲ್ಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಜಲಿಯನ್ ವಾಲಾಬಾಗ್ ಸ್ಮಾರಕವು ಶಾಂತಿಯುತ ಪ್ರಜಾಸತ್ತಾತ್ಮಕ ಪ್ರತಿಭಟನೆಯ ಹಕ್ಕನ್ನು ಮುಂದಿನ ಪೀಳಿಗೆಗೆ ನೆನಪಿಸಿಕೊಡಬೇಕು ಎಂದು ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ತಿಳಿಸಿದ್ದಾರೆ.
ಜಲಿಯನ್ ವಾಲಾಬಾಗ್ ಹತ್ಯಾಕಾಂಡವನ್ನು ಪ್ರತಿಭಟಿಸಿದ ಶಹೀದ್ ಉದ್ಧಮ್ ಸಿಂಗ್ ಅವರ ಪಿಸ್ತೂಲ್ ಹಾಗೂ ವೈಯಕ್ತಿಕ ಡೈರಿಯನ್ನು ಯುಕೆಯಿಂದ ಭಾರತಕ್ಕೆ ಮರಳಿ ತರಬೇಕು. ಈ ನಿಟ್ಟಿನಲ್ಲಿ ಭಾರತದ ಸರ್ಕಾರ ಶ್ರಮಿಸಬೇಕು ಎಂದು ಅಮರಿಂದರ್ ಸಿಂಗ್ ಪ್ರಧಾನಿ ಮೋದಿಯನ್ನು ಕೇಳಿಕೊಂಡಿದ್ದಾರೆ.
ಅಮೃತ್ಸರದಲ್ಲಿರುವ ನವೀಕೃತಗೊಂಡ ಜಲಿಯನ್ ವಾಲಾಬಾಗ್ ಸ್ಮಾರಕವನ್ನು ಪ್ರಧಾನಿ ಮೋದಿ ವರ್ಚುವಲ್ ವಿಧಾನದ ಮೂಲಕ ಉದ್ಘಾಟನೆ ಮಾಡಿದ್ದಾರೆ. ಇದೇ ವೇಳೆ ಕೆಲ ಮ್ಯೂಸಿಯಂ ಗ್ಯಾಲರಿಗಳ ಲೋಕಾರ್ಪಣೆಯನ್ನೂ ನೆರವೇರಿಸಿದ್ದಾರೆ. ಹತ್ಯಾಕಾಂಡದ ಘಟನೆ ತೋರಿಸುವ ಮ್ಯೂಸಿಯಂ ಗ್ಯಾಲರಿ ಲೋಕಾರ್ಪಣೆಗೊಂಡಿದೆ. ಅತ್ಯಾಧುನಿಕ ತಂತ್ರಜ್ಞಾನದ ಮ್ಯೂಸಿಯಂ ಗ್ಯಾಲರಿಗಳು ಇದಾಗಿದೆ.