ಮನೆ ಕಿಟಕಿ, ಬಾಗಿಲು ಮುಚ್ಚಿಟ್ಟು ಮನೆಯೊಳಗೆ ವಿಷಾನಿಲ ತುಂಬಿಸಿ ತನ್ನ ಇಬ್ಬರು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾಸನ ನಗರದ ದಾಸರಕೊಪ್ಪಲಿನಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡವರನ್ನು ತುಮಕೂರಿನ ಬೇಕರಿಯಲ್ಲಿ ಕೆಲಸ ಮಾಡುವ ಹಾಸನ ತಾಲೂಕು ಸೀಗೆ ಗ್ರಾಮದ ತೀರ್ಥ ಎಂಬವರ ಪತ್ನಿ ಶಿವಮ್ಮ (36), ಮಕ್ಕಳಾದ ಸಿಂಚು (7) ಪವನ (10) ಎಂದು ಗುರುತಿಸಲಾಗಿದೆ.
ಸಂಜೆ ಪತ್ನಿಗೆ ಕರೆ ಮಾಡಿದ್ದ ಪತಿ ತೀರ್ಥ ತಾನು ಹಾಸನಕ್ಕೆ ಬರುತ್ತಿದ್ದು ರಾತ್ರಿ ಊಟಕ್ಕೆ ಅಡುಗೆ ಸಿದ್ಧಪಡಿಸಲು ಹೇಳಿದ್ದರು. ಆದರೆ ರಾತ್ರಿ ತಡವಾಗಿ ಬಂದ ಆತ ಬಾಗಿಲು ತಟ್ಟಿದಾಗ ಪತ್ನಿ ಬಾಗಿಲು ತೆರೆಯಲಿಲ್ಲ. ಫೋನ್ ಕರೆಯನ್ನೂ ಸ್ವೀಕರಿಸಲಿಲ್ಲ. ಆಕೆ ನಿದ್ರೆ ಹೋಗಿರಬಹುದು ಎಂದು ಭಾವಿಸಿದ ಪತಿ ಮನೆಯ ಮೇಲ್ಬಾವಣಿಗೆ ಹೋಗಿ ಮಲಗಿದ್ದರು. ಬೆಳಗ್ಗೆ ಕೆಳಗೆ ಬಂದು ಪುನಃ ಬಾಗಿಲು ಬಡಿಸರೂ ಬಾಗಿಲು ತೆಗೆಯಲಿಲ್ಲ, ಫೋನ್ ಕರೆ ಮಾಡಿದರೂ ಪ್ರತಿಕ್ರಿಯೆ ಬಾರದ್ದರಿಂದ ಅನುಮಾನಗೊಂಡ ಆತ ಮನೆ ಮಾಲೀಕರ ಸಹಾಯದಿಂದ ಇನ್ನೊಂದು ಕೀ ಪಡೆದು ಬಾಗಿಲು ತೆರೆದು ಒಳಗೆ ಹೋದರು.
ಮನೆಯ ಒಳಗೆ ಗಾಢವಾದ ಎಲ್ಪಿಜಿ ವಾಸನೆ ತುಂಬಿತ್ತು. ಹೀಗಾಗಿ ಮೊದಲು ಕಿಟಕಿ, ಬಾಗಿಲು ತೆರೆದಿಟ್ಟು ಕೆಲ ನಿಮಿಷಗಳ ನಂತರ ಒಳ ಹೋದಾಗ ನೆಲದ ಮೇಲೆ ಕುಳಿತ ತಾಯಿಯ ಕಾಲುಗಳ ಮೇಲೆ ಇಬ್ಬರು ಮಕ್ಕಳೂ ಪ್ರಾಣ ಕಳೆದುಕೊಂಡ ದಾರುಣ ದೃಶ್ಯ ಕಣ್ಣಿಗೆ ಬಿತ್ತು. ಸಾವಿಗೆ ಕಾರಣ ತಿಳಿಯಬೇಕಿದೆ. ಪೆನ್ನನ್ ಮೊಹಲ್ಲಾ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ತನಿಖೆ ನಡೆಸುತ್ತಿದ್ದಾರೆ.