ಕುರ್ನಾಡು ಗ್ರಾಮದ ‘ಮುಡಿಪು ಅಡಿಟೋರಿಯಂ’ ಬಳಿ ನಿರ್ಮಾಣವಾಗುತ್ತಿರುವ ಆಟೋ ಎಲ್.ಪಿ.ಜಿ. ಘಟಕ ಮತ್ತು ಸಂಗ್ರಹದ ಕಾಮಗಾರಿ ನಡೆಸದಂತೆ ಬಂಟ್ವಾಳ ಪ್ರಧಾನ ಸಿವಿಲ್ ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ಉಳ್ಳಾಲ ತಾಲೂಕು ಕುರ್ನಾಡು ಗ್ರಾಮದ ಸ.ನಂ.113(P)-0.24, 111/3(P)-0.40ಹಾಗೂ 111(P)-12 ಸೆಂಟ್ಸ್ ವಿಸ್ತೀರ್ಣದಲ್ಲಿರುವ ಕೊಳ್ನಾಡು ಗ್ರಾಮದ ದಿ.ಪಿ.ಕೆ.ಚಂದ್ರಶೆಟ್ಟಿಗಾರ್ ಅವರ ಪುತ್ರ ಪ್ರವೀಣ್ ಕುಮಾರ್ ಮಾಲಿಕತ್ವದ ‘ಮುಡಿಪು ಆಡಿಟೋರಿಯಂ’ನಲ್ಲಿ ಕಳೆದ ಇಪ್ಪತ್ತು ವರ್ಷಗಳಿಂದ ನಿರಂತರವಾಗಿ ವಿವಾಹ ಸಮಾರಂಭಗಳು, ಬರ್ತ್ ಡೇ ಪಾರ್ಟಿಗಳು ಸೇರಿದಂತೆ ಇನ್ನಿತರ ಸಾರ್ವಜನಿಕ ಸಭೆ-ಸಮಾರಂಭಗಳು ನಡೆಯುತ್ತಿದೆ.
ಸದ್ರಿ ಆಡಿಟೋರಿಯಂ ಕಟ್ಟಡಕ್ಕೆ ತಾಗಿಕೊಂಡಿರುವ ಜಮೀನು ಮಾಲಿಕರಾದ ರಾಮಕೃಷ್ಣ ಪೈ ಎಂಬವರು ಮುಂಬಯಿನ ಕಾನ್ಫಿಡೆನ್ಸ್ ಪೆಟ್ರೋಲಿಯಂ ಇಂಡಿಯಾ.ಪ್ರೈ.ಲಿ ಕಂಪನಿಯ ಸಹಯೋಗದಲ್ಲಿ ಅಟೋ ಎಲ್.ಪಿ.ಜಿ. ವಿತರಣಾ ಘಟಕ ಮತ್ತು ಸಂಗ್ರಹಣಾ ಘಟಕ ಸ್ಥಾಪಿಸಲು ಕಾಮಗಾರಿ ಆರಂಭವಾಗಿದೆ.ಅಟೋ ಎಲ್.ಪಿ.ಜಿ.ವಿತರಣಾ ಘಟಕ ಮತ್ತು ಸಂಗ್ರಹಣಾ ಘಟಕ ಸ್ಥಾಪಿಸಲು ಜಮೀನಿನ ಮಾಲಿಕರು ಮತ್ತು ಮುಂಬಯಿ ಕಂಪನಿಯ ಅಧಿಕಾರಿಗಳು ಸಂಬಂಧಿಸಿದ ಇಲಾಖೆಗೆ ಸುಳ್ಳು ಮಾಹಿತಿ ನೀಡಿ ಕಾನೂನು ಬಾಹಿರವಾಗಿ ಪರವಾನಿಗೆ ಪಡೆದಿದ್ದಾರೆ. ನಿಯಮಬಾಹಿರ ಎಲ್.ಪಿ.ಜಿ.ಘಟಕ ಸ್ಥಾಪನೆಯಿಂದಾಗಿ ಮುಡಿಪು ಆಡಿಟೋರಿಯಂಗೆ ಅಪಾಯ ಬಂದೊದಗುವ ಭೀತಿ ಎದುರಾಗಿದ್ದು ಈ ಹಿನ್ನೆಲೆಯಲ್ಲಿ ಮಾಲಿಕರಾದ ಪ್ರವೀಣ್ ಕುಮಾರ್ ಬಂಟ್ವಾಳ ನ್ಯಾಯಾಲಯದಲ್ಲಿ ಮೂಲದಾವಾ ನಂಬ್ರ 448/2023ರಂತೆ ದಾವೆ ಹೂಡಿದ್ದರು.
ಸದ್ರಿ ದಾವೆಗೆ ಸಂಬಂಧಿಸಿದಂತೆ ವಾದ ಪರ ವಾದವನ್ನು ಪುರಸ್ಕರಿಸಿದ ಬಂಟ್ವಾಳ ಪ್ರಧಾನ ಸಿವಿಲ್ ನ್ಯಾಯಾಲಯವು ‘ಮುಡಿಪು ಆಡಿಟೋರಿಯಂ ‘ ಪರಿಸರದಲ್ಲಿ ಭೂಮಿಯನ್ನು ಅಗೆಯದಂತೆ ಹಾಗೂ ಯಾವುದೇ ಅಟೋ ಎಲ್.ಪಿ.ಜಿ.ಘಟಕ ಸ್ಥಾಪಿಸದಂತೆ ಎದ್ರಿಯವರಿಗೆ ಮಧ್ಯಂತರ ತಡೆಯಾಜ್ಞೆ ನೀಡಿದೆ.