ವಾರಾಣಸಿ: ಹಸಿವಾದಾಗ ಆಹಾರ ಸಿಗದ್ದರಿಂದ ಸಿಟ್ಟಿಗೆದ್ದ ಮನೋರೋಗಿಯೊಬ್ಬ ತನ್ನ ಮಗಳು ಸೇರಿ ಮನೆಯಲ್ಲಿದ್ದವರನ್ನೆಲ್ಲ ಇರಿದಿದ್ದು, ಮಗಳು ಮೃತಪಟ್ಟಿದ್ದಾಳೆ.
ಉತ್ತರ ಪ್ರದೇಶದ ಜೌನಪುರದಲ್ಲಿ ಈ ಪ್ರಕರಣ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಭಡಿಖಾಸ್ ಗ್ರಾಮದ ನಿವಾಸಿ ಮುಮ್ತಾಜ್ ಅಲಿಯಾಸ್ ಸೋನು ಚಾಕು ಇರಿದಿರುವ ವ್ಯಕ್ತಿ.
ಮನೋರೋಗಿಯಾಗಿರುವ ಈತ ಏಳು ವರ್ಷಗಳಿಂದ ಚಿಕಿತ್ಸೆ ಪಡೆಯುತ್ತಿದ್ದ. ನಿನ್ನೆ ಆಸ್ಪತ್ರೆಯಿಂದ ತಪ್ಪಿಸಿಕೊಂಡು ಬಂದವನು ಊಟಕ್ಕಾಗಿ ಅಡುಗೆ ಮನೆಯನ್ನೆಲ್ಲ ತಡಕಾಡಿದ್ದಾನೆ. ಫ್ರಿಡ್ಜ್ ನಲ್ಲೂ ಹುಡುಕಾಡಿದ್ದಾಗ ತಿನ್ನಲೂ ಏನೂ ಸಿಕ್ಕಿಲ್ಲ. ಇದರಿಂದ ಕೋಪಗೊಂಡಿದ್ದ ಈತನ ಎದುರಿಗೆ ಮಗಳು ಬಂದಾಗ ಏಕಾಏಕಿ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ.
‘ಇದನ್ನು ತಡೆಯಲು ಹೆಂಡತಿ ಚಂದಬೇಗಮ್ ಮುಂದಾದಾಗ ಆಕೆಯ ಮೇಲೂ ಹಲ್ಲೆ ನಡೆಸಿದ್ದಾನೆ. ಇದನ್ನು ತಡೆಯಲು ಬಂದ ಮಗ ಹಾಗೂ ಹಾಲು ಮಾರುವವಳಿಗೂ ಚಾಕು ಇರಿದ್ದಾನೆ. ಸದ್ಯ ತಾಯಿ-ಮಗ, ಹಾಲು ಮಾರುವಾಕೆ ಪ್ರಾಣಾಪಾಯದಿಂದ ಪಾರಾಗಿದ್ದು, ಮಗಳು ಚಾಕು ಇರಿತದಿಂದ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾಳೆ.
ಯಾರ ನಿಯಂತ್ರಣಕ್ಕೂ ಸಿಗದೆ ಮನಸೋಇಚ್ಛೆ ಓಡಾಡುತ್ತಿದ್ದ ಸೋನುನನ್ನು ಅಕ್ಕಪಕ್ಕದವರು ಹಿಡಿದು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.