

ವಿಧಾನಸಭೆ ಮಳೆಗಾಲ ಅಧಿವೇಶನ ಕೊನೆಗೊಳ್ಲಲು ಇನ್ನು ಎರಡು ದಿನ ಬಾಕಿ ಇದೆ. ಈ ಮಧ್ಯೆ ಇದೀಗ ಸದನದಲ್ಲಿ ಮೂಡಾ ಹಗರಣ ಕೋಲಾಹಲ ಸೃಷ್ಟಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಕುಟುಂಬದ ವಿರುದ್ಧ ಕೇಳಿ ಬಂದಿರುವ ಮುಡಾ ಬದಲಿ ನಿವೇಶನ ಹಂಚಿಕೆ ಆರೋಪದ ಸಂಬಂಧ ಬಿಜೆಪಿ ಹೋರಾಟವನ್ನು ತೀವ್ರಗೊಳಿಸಿದೆ.
ವಿಧಾನಸಭೆಯಲ್ಲಿ ಬೆಳಗ್ಗೆ ಚರ್ಚೆಗೆ ಅವಕಾಶ ನೀಡದ್ದಕ್ಕೆ ಸಿಟ್ಟಾಗಿರುವ ಬಿಜೆಪಿ ಹಾಗೂ ಜೆಡಿಎಸ್ ಈಗ ವಿಧಾನಸಭೆ-ಪರಿಷತ್ನಲ್ಲಿ ಅಹೋರಾತ್ರಿ ಧರಣಿ ನಡೆಸುತ್ತಿದೆ. ಈ ಹಗರಣವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲು ಬಯಸಿರುವ ಬಿಜೆಪಿ, ಶನಿವಾರದ ನಂತರ ಮೈಸೂರಿಗೆ ಪಾದಯಾತ್ರೆ ನಡೆಸುವ ಬಗ್ಗೆಯೂ ಆಲೋಚಿಸಿದೆ.
ಸದನದ ಹೊರಗೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮಾತನಾಡಿ, ವಾಲ್ಮೀಕಿ-ಮುಡಾ ಹಗರಣಗಳ ಸಂಬಂಧ ಹೋರಾಟಕ್ಕೆ ಆಡಳಿತ ಪಕ್ಷದಿಂದಲೇ ಒತ್ತಡ ಇದೆ. ಇಷ್ಟು ದೊಡ್ಡ ಹಗರಣ ನಡೆದಿದೆ. ನೀವೇನೂ ಹೋರಾಟ ಮಾಡುದಿಲ್ಲವೇ ಎಂದು ನಮ್ಮನ್ನು ಕೇಳುತ್ತಿದ್ದಾರೆ ಎಂದು ಹೇಳಿದರು.
ಈ ಮಧ್ಯೆ, ಮುಡಾ ಹಗರಣದ ಬಗ್ಗೆ ವಿವರಣೆ ನೀಡುವಂತೆ ಮುಖ್ಯಕಾರ್ಯದರ್ಶಿಗೆ ರಾಜ್ಯಪಾಲರು ಸೂಚಿಸಿದ್ದ ಹಿನ್ನೆಲೆಯಲ್ಲಿ ರಾಜಭವನಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿ 40 ನಿಮಿಷಗಳ ಕಾಲ ಚರ್ಚೆ ನಡೆಸಿದ್ದಾರೆ.