ಮೈಸೂರು: ಅಪ್ರಾಪ್ತ ಬಾಲಕ ಕಾರು ಕಲಿಯಲು ಹೋಗಿ, ನಿಯಂತ್ರಣ ತಪ್ಪಿ ಒಂದೇ ಕುಟುಂಬದ ಮೂವರನ್ನು ಬಲಿ ತೆಗೆದುಕೊಂಡ ಘಟನೆ ಮೈಸೂರು-ಬೆಂಗಳೂರು ರಸ್ತೆಯಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದೆ.
ನಗರದ ಬಾರ್ವೊಂದರಲ್ಲಿ ಕೆಲಸ ಮಾಡುತ್ತಿದ್ದ ಟಿ.ಕೆ.ಲೇಔಟ್ ನಿವಾಸಿ ರಮೇಶ್(41), ಪತ್ನಿ ಉಷಾ(36), ಪುತ್ರ ಮನೀಶ್(5) ಮೃತಪಟ್ಟವರು. ಮತ್ತೊಬ್ಬ ಪುತ್ರ ಸಿದ್ದಾರ್ಥ(3) ತೀವ್ರ ಗಾಯಗೊಂಡು ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
9ನೇ ತರಗತಿ ವಿದ್ಯಾರ್ಥಿಯಾದ ಅಪ್ರಾಪ್ತ ಬಾಲಕ ಸರಿಯಾಗಿ ಕಾರು ಕಲಿಯದೆ ಮುಖ್ಯ ರಸ್ತೆಯಲ್ಲಿ ರಾತ್ರಿ ವೇಳೆಯಲ್ಲಿ ಓಡಿಸುವ ಸಾಹಸಕ್ಕೆ ಇಳಿದಿದ್ದಾನೆ. ದಂಡಿ ಮಾರಮ್ಮನ ದೇವಸ್ಥಾನದ ಬಳಿ ಕಾರು ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ರಸ್ತೆಯ ಮತ್ತೊಂದು ಬದಿಗೆ ನುಗ್ಗಿದೆ. ಆ ವೇಳೆ ಎದುರಿನಿಂದ ಬರುತ್ತಿದ್ದ ರಮೇಶ್ ಬೈಕ್ಗೆ ಡಿಕ್ಕಿಯಾಗಿದೆ.
ಕಾರು ಡಿಕ್ಕಿಯಾದ ರಭಸಕ್ಕೆ ಮೂವರು ಸ್ಥಳದಲ್ಲಿಯೇ ಮೃತಪಟ್ಟರು. ತಂದೆ, ತಾಯಿ, ಅಣ್ಣನನ್ನು ಕಳೆದುಕೊಂಡ ಮೂರು ವರ್ಷದ ಬಾಲಕ ಸಿದ್ಧಾರ್ಥ್ ತಬ್ಬಲಿಯಾಗಿದ್ದಾನೆ.