ಮೈಸೂರು: ಮೈಸೂರು ವಿಶ್ವವಿಖ್ಯಾತ ಮೈಸೂರು ದಸರಾ ಆಚರಣೆ ಕೊರೋನಾದಿಂದಾಗಿ ಸರಳವಾಗಿ ಕೊರೋನಾ ಆಚರಿಸಲು ನಿರ್ಧರಿಸಲಾಗಿದೆ. ಅರಮನೆಯ ಆವರಣದಲ್ಲೇ ಈ ಬಾರಿ ಜಂಬೂ ಸವಾರಿ ನಡೆಸಲಾಗುವುದು. ಈ ಹಿನ್ನೆಲೆಯಲ್ಲಿ ನಾಳೆ ಗಜಪಡೆ ಮೈಸೂರಿಗೆ ಆಗಮಿಸಲಿದೆ. ಕೊರೊನಾ ಹಿನ್ನೆಲೆಯಲ್ಲಿ ಸರಳ, ಸಾಂಪ್ರದಾಯಿಕವಾಗಿ ದಸರಾ ಆಚರಣೆ ಮಾಡಲಾಗುತ್ತಿದೆ.
ನಾಳೆ ವೀರನಹೊಸಹಳ್ಳಿಯಿಂದ ಬೆಳಗ್ಗೆ 10ರಿಂದ 11ರ ಒಳಗೆ ಗಜಪಯಣಕ್ಕೆ ಸಾಂಪ್ರದಾಯಿಕ ಪೂಜೆ ಬಳಿಕ ಅಂಬಾರಿ ಆನೆಗಳಾದ ಅಭಿಮನ್ಯು ಮತ್ತು ತಂಡದವರು ಮೈಸೂರಿಗೆ ಪಯಣ ಬೆಳೆಸಲಿದ್ದಾರೆ. ನಾಳೆ ಮೈಸೂರಿನ ಅರಣ್ಯ ಭವನದ ಅಂಗಳಕ್ಕೆ ಬರಲಿರುವ ಆನೆಗಳನ್ನು ಅಕ್ಟೋಬರ್ 2ರಂದು ಅರಮನೆಗೆ ಬರಮಾಡಿಕೊಳ್ಳಲಾಗುವುದು. ಜಂಬೂ ಸವಾರಿಯಲ್ಲಿ ಈ ಬಾರಿ ಅಂಬಾರಿ ಹೊರಲಿರುವ ಅಭಿಮನ್ಯು, ಆತನ ಜೊತೆಗೆ ಹೆಜ್ಜೆ ಹಾಕಲಿರುವ ವಿಕ್ರಮ, ಗೋಪಿ, ವಿಜಯಾ, ಕಾವೇರಿ ಆನೆಗಳು ನಾಳೆ ಮೈಸೂರಿಗೆ ಬರಲಿವೆ. ಗಜಪಯಣದ ಬಳಿಕ ಮೈಸೂರಿನಲ್ಲಿ ದಸರಾ ಸಂಭ್ರಮ ಕಳೆಗಟ್ಟಲಿದೆ.
ಈ ಬಾರಿ ಜಂಬೂ ಸವಾರಿ ಅರಮನೆ ಅವರಣಕ್ಕೆ ಸೀಮಿತವಾಗಿದೆ. ಆನೆಗಳು ಅರಮನೆ ಆವರಣದಲ್ಲೆ ತಾಲೀಮು ನಡೆಸಲಿವೆ. ಅರಮನೆಯಂಗಳದಲ್ಲಿ ಫಿರಂಗಿ ಸ್ವಚ್ಛತೆ ಕಾರ್ಯ ನಡೆಯುತ್ತಿದೆ. 7 ಫಿರಂಗಿ ಗಾಡಿಗಳನ್ನ ಕುಶಾಲತೋಪು ಸಿಬ್ಬಂದಿ ಸ್ವಚ್ಛಗೊಳಿಸುತ್ತಿದ್ದಾರೆ. ಶುಕ್ರವಾರ ಫಿರಂಗಿ ಗಾಡಿಗಳಿಗೆ ಪೂಜೆ ನಡೆಯಲಿದೆ. ಗಜಪಡೆ, ಅಶ್ವಾರೋಹಿ ಪಡೆಗೆ ಫಿರಂಗಿ ಶಬ್ದ ಪರಿಚಯಿಸಲು ಎಂದಿನಂತೆ ಫಿರಂಗಿ ತಾಲೀಮು ನಡೆಸಲಾಗುವುದು. ಜಂಬೂ ಸವಾರಿಯಂದು 21 ಕುಶಾಲತೋಪು ಸಿಡಿಸುವ ಕಾರ್ಯ ನಡೆಯಲಿದೆ.